ಇವಿಎಂ ಬಗ್ಗೆ ದೀದಿ ಪ್ರಶ್ನೆಗೆ ಸೋಲಿನ ಭೀತಿಯೇ ಕಾರಣ ಎಂದ ಮೋದಿ
ಕೋಲ್ಕತ್ತಾ, ಮಾರ್ಚ್ 21: ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾದರೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಬಂಕೂರಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ದೀದಿ ಅವರು ಕಳೆದ 10 ವರ್ಷಗಳಿಂದ ಟೊಳ್ಳು ಪ್ರಕಟಣೆಗಳನ್ನಷ್ಟೇ ಮಾಡಿಕೊಂಡು ಬಂದಿದ್ದೀರಿ. ನೀವು ಮಾಡಿರುವ ಕೆಲಸ ಅಂತಾ ಯಾವುದಾದರೂ ಒಂದನ್ನು ತೋರಿಸಿ ಎಂದು ಪ್ರಧಾನಿ ಮೋದಿ ಸವಾಲು ಹಾಕಿದರು.
ಪಶ್ಚಿಮ ಬಂಗಾಳದಲ್ಲಿ ವಲಸೆ ನಾಯಕರಿಗೆ ಮಣೆ ಹಾಕಿದ ಬಿಜೆಪಿ!?
"ಮಮತಾ ಬ್ಯಾನರ್ಜಿ ಅವರೇ ನೀವು ಆಟ ಶುರು ಮಾಡಿ ಎಂದು ಹೇಳುತ್ತಿದ್ದೀರಿ. ಆದರೆ ಪಶ್ಚಿಮ ಬಂಗಾಳದ ಜನರು ಆಟವನ್ನು ಮುಗಿಸುವುದಕ್ಕೆ ನಿರ್ಧರಿಸಿದ್ದಾರೆ" ಎಂದು ಪ್ರಧಾನಿ ಮೋದಿ ಕಿಡಿ ಕಾರಿದರು.
"ಅಭಿವೃದ್ಧಿ ನೆತ್ತಿ ಮೇಲೆ ಹೊಡೆಯಲು ಬಿಡಲ್ಲ":
"ದೀದಿ ಬೆಂಬಲಿತ ಜನರು ಬಂಗಾಳದ ಬೀದಿಗಳಲ್ಲಿ ಗೀಚು ಬರಹವನ್ನು ಬರೆಯುತ್ತಿದ್ದಾರೆ. ಅದರಲ್ಲಿ ಅವರು ನನ್ನ ತಲೆ ಮೇಲೆ ಕಾಲಿಟ್ಟು ಫುಟ್ಬಾಲ್ ಆಡುತ್ತಿದ್ದಾರೆ. ದೀದಿಯವರೇ ನೀವೇಕೆ ಬಂಗಾಳದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವಮಾನಿಸುತ್ತಿದ್ದೀರಿ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಅಲ್ಲದೇ, ದೀದಿ ಅವರೇ, ನೀವು ಬೇಕಾದರೆ ನನ್ನ ತಲೆ ಮೇಲೆ ಕಾಲಿಟ್ಟು ನನ್ನನ್ನು ಒದೆಯಬಹುದು. ಆದರೆ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿಗಳ ಕನಸುಗಳನ್ನು ಒದೆಯುವುದಕ್ಕೆ ನಾನು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
NDA के सेवाकाल में आज असम पूरे सामर्थ्य के साथ नई बुलंदियां छूने के लिए आगे बढ़ रहा है।
— Narendra Modi (@narendramodi) March 21, 2021
NDA के सेवाकाल में आज असम में शांति स्थापित हुई है, स्थिरता आई है। pic.twitter.com/ol0GWKMl4w
ಇವಿಎಂ ಬಗ್ಗೆ ಪ್ರಶ್ನಿಸಿದ ದೀದಿಗೆ ಮೋದಿ ಉತ್ತರ:
ಪಶ್ಚಿಮ ಬಂಗಾಳ ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದೇ ಇವಿಎಂಗಳಿಂದ ಅವರು 10 ವರ್ಷಗಳಿಂದ ಅಧಿಕಾರದಲ್ಲಿ ಇದ್ದಾರೆ. ಆದರೆ ಮುಂಬರುವ ಚುನಾವಣೆಯು ಅವರ ಸೋಲಿನ ಸಾಕ್ಷಿ ಆಗಿರಲಿದೆ. ಬಂಗಾಳದ ಪ್ರತಿಯೊಬ್ಬ ಮತದಾರರು ಯಾವುದೇ ಭಯ ಭೀತಿ ಇಲ್ಲದೇ ಧೈರ್ಯವಾಗಿ ಮತದಾನ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.
Recommended Video