ನಿವೃತ್ತಿ ಘೋಷಿಸಿದ ಮೂರು ವಾರದಲ್ಲೇ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆ
ಕೋಲ್ಕತಾ, ಫೆಬ್ರವರಿ 25: ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಕ್ಷಿಪ್ರ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ರಾಜಕೀಯ ಬಿರುಸುಗೊಂಡ ಸಂದರ್ಭದಲ್ಲಿಯೇ ಸಿನಿಮಾ ತಾರೆಯರು, ಕ್ರಿಕೆಟಿಗರು ರಾಜಕೀಯ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ಬುಧವಾರ ಬೆಳಿಗ್ಗೆಯಷ್ಟೇ ಮಾಜಿ ಬ್ಯಾಟ್ಸ್ಮನ್ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಸಂಜೆ ವೇಳೆ ಮಾಜಿ ಬೌಲರ್ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಕೋಲ್ಕತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಕೆಲವು ತಿಂಗಳ ಹಿಂದಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿಕೊಂಡಿದ್ದ ಸುವೇಂದು ಅಧಿಕಾರಿ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಸಮ್ಮುಖದಲ್ಲಿ 36 ವರ್ಷದ ದಿಂಡಾ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು. ಮೂರು ವಾರಗಳ ಹಿಂದಷ್ಟೇ ಅವರು ಎಲ್ಲ ಮಾದರಿ ಕ್ರಿಕೆಟ್ಗಳಿಂದ ನಿವೃತ್ತಿ ಘೋಷಿಸಿದ್ದರು.
ಪಶ್ಚಿಮ ಬಂಗಾಳ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ಅಶೋಕ್ ದಿಂಡಾ, ರಣಜಿಯಲ್ಲಿ ಗೋವಾ ತಂಡವನ್ನೂ ಪ್ರತಿನಿಧಿಸಿದ್ದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡದ ಪರವಾಗಿ ಆಡಿದ್ದರು. 13 ಏಕದಿನ ಹಾಗೂ 9 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಶೋಕ್ ದಿಂಡಾ, ಕ್ರಮವಾಗಿ 12 ಮತ್ತು 17 ವಿಕೆಟ್ಗಳನ್ನು ಪಡೆದಿದ್ದರು.

2013ರಲ್ಲಿ ಕೊನೆಯ ಪಂದ್ಯ
2009ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ 2013ರಲ್ಲಿ ತಂಡದಿಂದ ಸ್ಥಾನ ಕಳೆದುಕೊಂಡ ಬಳಿಕ ಮತ್ತೆ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಮೊದಲದರ್ಜೆ, ಲಿಸ್ಟ್ ಎ ಮತ್ತು ಟಿ20 ಪಂದ್ಯಗಳಲ್ಲಿ ಅವರು ಕ್ರಮವಾಗಿ 420, 151 ಮತ್ತು 151 ವಿಕೆಟ್ಗಳನ್ನು ಪಡೆದುಕೊಂಡಿದ್ದರು.

'ದಿಂಡಾ ಕ್ರಿಕೆಟ್ ಅಕಾಡೆಮಿ'
ಐಪಿಎಲ್ನಲ್ಲಿ ಕೆಕೆಆರ್, ಪುಣೆ ವಾರಿಯರ್ಸ್, ಆರ್ಪಿಎಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ಸಿಬಿ ತಂಡಗಳನ್ನು ಪ್ರತಿನಿಧಿಸಿದ್ದರು. ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದ ಅಶೋಕ್ ದಿಂಡಾ, ಹೆಚ್ಚು ರನ್ ಬಿಟ್ಟುಕೊಡುತ್ತಾರೆ ಎಂಬ ಕಾರಣಕ್ಕೆ ವಿಪರೀತ ಟ್ರೋಲ್ ಆಗಿದ್ದರು. ರಣಜಿಯಲ್ಲಿ ಬಂಗಾಳ ಪರ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿ ಅವರಿಗಿದೆ.

ರಾಜ್ ಚಕ್ರವರ್ತಿ
ಬುಧವಾರ ಬೆಳಿಗ್ಗೆಯಷ್ಟೇ ಬಂಗಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಮನೋಜ್ ತಿವಾರಿ ಟಿಎಂಸಿ ಸೇರ್ಪಡೆಯಾಗಿದ್ದರು. ಬಂಗಾಳ ಸಿನಿಮಾ ನಿರ್ದೇಶಕ ರಾಜ್ ಚಕ್ರವರ್ತಿ ಸಹ ಬುಧವಾರ ಟಿಎಂಸಿ ಸೇರ್ಪಡೆಯಾಗಿದ್ದಾರೆ.

ತಿವಾರಿ ಸ್ಪರ್ಧೆ ಸಾಧ್ಯತೆ
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಪರೋಕ್ಷ ಟೀಕೆಗಳನ್ನು ಮಾಡುತ್ತಿದ್ದ ಮನೋಜ್ ತಿವಾರಿ, ಮಮತಾ ಬ್ಯಾನರ್ಜಿ ಅವರ ಪ್ರಚಾರ ಸಮಾವೇಶದ ವೇಳೆ ತೃಣಮೂಲ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.












Click it and Unblock the Notifications