ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಮತಾ ಪ್ರಧಾನಿ ಅಭ್ಯರ್ಥಿಯಾಗಲಿ: ಬಿಜೆಪಿ
ಕೋಲ್ಕತ್ತಾ, ನವೆಂಬರ್ 24: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಬಿಜೆಪಿ ಹೇಳಿದೆ.
2024ರ ಲೋಕಸಭೆ ಚುನಾವಣೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ (TMC) ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಂಗ್ಯವಾಡಿದ್ದಾರೆ.
ಮಮತಾ ಸಮ್ಮುಖದಲ್ಲಿ ಕೀರ್ತಿ ಆಜಾದ್ ಹಾಗೂ ಅಶೋಕ್ ತನ್ವರ್ ಟಿಎಂಸಿಗೆ ಸೇರ್ಪಡೆ
ಮಮತಾ ಬ್ಯಾನರ್ಜಿ ಹಿಂಸೆಯನ್ನು ದೇಶದ ಎಲ್ಲ ಭಾಗಗಳಿಗೆ ಕೊಂಡೊಯ್ಯಲು ಬಯಸುತ್ತಾರೆ. ತನ್ನ ಸರ್ಕಾರದ ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಮತ್ತು ಮಂತ್ರಿಗಳನ್ನು ಉಳಿಸಲು ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು ಎಂದು ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.
ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಿರುತ್ತಾರೆ. ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ವಿಪಕ್ಷಗಳು ಸಿದ್ಧವೇ?, ಇದನ್ನು ಮೊದಲು ಅವರು ನಿರ್ಧಾರ ಮಾಡಿಕೊಳ್ಳಲಿ ಎಂದು ಸುಕಾಂತ ಮಜುಂದಾರ್ ಹೇಳಿದ್ದಾರೆ.
ಇನ್ನು ಸೋಮವಾರ ದೆಹಲಿಗೆ ಆಗಮಿಸಿರುವ ಮಮತಾ ಬ್ಯಾನರ್ಜಿ ಅವರು ನವೆಂಬರ್ 25ರವರೆಗೆ ಅಲ್ಲಿಯೇ ಇರಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸುವ ಸಲುವಾಗಿ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಿ, ಹಲವು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ ಸುಕಾಂತ ಮಜುಂದಾರ್ ರೀತಿಯ ಹೇಳಿಕೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ರೂಪಿಸಲು ಮುಂದಾಗುತ್ತಿದ್ದಾರೆ. ಇದಕ್ಕಾಗಿಯೇ ತಮ್ಮ ಜನರನ್ನು ವಿವಿಧ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಹಿಂಸಾಚಾರ ರಾಜಕೀಯ ಮಾಡುವ ಮೂಲಕವೇ ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಜುಂದಾರ್ ಹೇಳಿದ್ದಾರೆ.
ಜೆಡಿಯು ಮಾಜಿ ನಾಯಕ ಪವನ್ ವರ್ಮಾ ನಂತರ, ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್, ಅವರ ಪತ್ನಿ ಪೂನಂ ಆಜಾದ್ ಮತ್ತು ಮಾಜಿ ಹರ್ಯಾಣ ಕಾಂಗ್ರೆಸ್ ನಾಯಕ ಅಶೋಕ್ ತನ್ವರ್ ಅವರು ಮಂಗಳವಾರ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಭಾರತೀಯ ವಿದೇಶಾಂಗ ಸೇವೆಯ ಮಾಜಿ ಅಧಿಕಾರಿ ಪವನ್ ವರ್ಮಾ ಅವರು ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಅವರು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಲಹೆಗಾರರಾಗಿದ್ದಾರೆ. ಪವನ್ ವರ್ಮಾ ಅವರನ್ನು 2020 ರಲ್ಲಿ ಜೆಡಿಯುನಿಂದ ಹೊರಹಾಕಲಾಯಿತು. 2016ರ ಜುಲೈವರೆಗೆ ಸಂಸದರಾಗಿದ್ದರು.
ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಈ ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ನವೆಂಬರ್ 25 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿರುತ್ತಾರೆ.
ಟಿಎಂಸಿ ನಿರಂತರವಾಗಿ ಕಾಂಗ್ರೆಸ್ಗೆ ಹೊಡೆತ ನೀಡುತ್ತಿದೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಪವನ್ ವರ್ಮಾ ಮತ್ತು ಕೀರ್ತಿ ಆಜಾದ್ ಅವರಲ್ಲದೆ, ಅಕ್ಟೋಬರ್ 2019 ರಲ್ಲಿ ಕಾಂಗ್ರೆಸ್ ತೊರೆದು ತಮ್ಮ ಪಕ್ಷವನ್ನು ಸ್ಥಾಪಿಸಿದ ಅಶೋಕ್ ತನ್ವರ್ ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರಿದ್ದಾರೆ.
ಅವರನ್ನು ರಾಹುಲ್ ಗಾಂಧಿಯವರಿಗೆ ಬಹಳ ನಿಕಟವರ್ತಿ ಎಂದೇ ಪರಿಗಣಿಸಲಾಗಿತ್ತು. ಅವರು 2009-2014ರ ಅವಧಿಯಲ್ಲಿ ಸಿರ್ಸಾದಿಂದ ಸಂಸದರಾಗಿದ್ದರು ಮತ್ತು ಪಕ್ಷದ ಹರಿಯಾಣ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು ಅಕ್ಟೋಬರ್ 2019 ರಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಕಾಂಗ್ರೆಸ್ ತೊರೆದಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಅಪ್ನಾ ಭಾರತ್ ಮೋರ್ಚಾ ಎಂಬ ಪಕ್ಷವನ್ನು ಸ್ಥಾಪಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ.
ಮಮತಾ ಅವರ ಈ ಧ್ಯೇಯೋದ್ದೇಶದಲ್ಲಿ ಕಾಂಗ್ರೆಸ್ ಪಕ್ಷ ಗುರಿಯಾಗಿದೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ನ ದೊಡ್ಡ ನಾಯಕರನ್ನು ಒಬ್ಬರ ನಂತರ ಒಬ್ಬರುನ್ನು ತೃಣಮೂಲ ಕಾಂಗ್ರೆಸ್ಗೆ ಬರ ಮಾಡಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ತನ್ನ ನೆಲೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.
Recommended Video