ಶತಕ ದಾಟಿದ ಪೆಟ್ರೋಲ್ ಬೆಲೆ: 38 ಕಿ.ಮೀ. ಸೈಕಲ್ ತುಳಿದು ವಿಧಾನಸಭೆ ತಲುಪಿದ ಟಿಎಂಸಿ ಸಚಿವ
ಕೋಲ್ಕತ್ತಾ, ಜು. 07: ಪಶ್ಚಿಮ ಬಂಗಾಳದ ಕಾರ್ಮಿಕ ಸಚಿವ ಬೆಚರಾಮ್ ಮನ್ನಾ ಹೂಗ್ಲಿ ಜಿಲ್ಲೆಯ ತಮ್ಮ ಮನೆಯಿಂದ 38 ಕಿ.ಮೀ ದೂರ ಸೈಕಲ್ ಮೂಲಕ ರಾಜ್ಯ ವಿಧಾನಸಭೆಯನ್ನು ತಲುಪಿದರು. ಈ ಮೂಲಕ ಪೆಟ್ರೋಲ್ ಬೆಲೆ 100 ರೂ. ದಾಟಿರುವ ವಿರುದ್ದ ಪ್ರತಿಭಟನೆ ನಡೆಸಿದರು.
2000 ರ ದಶಕದ ಉತ್ತರಾರ್ಧದಲ್ಲಿ ಟಾಟಾ ನ್ಯಾನೊ ಕಾರ್ಖಾನೆಯ ವಿರುದ್ಧದ ಆಂದೋಲನದ ಮೂಲಕ ಹೆಚ್ಚು ಪರಿಚಿತರಾದ ಸಿಂಗೂರಿನ ಟಿಎಂಸಿ ಶಾಸಕ ಮನ್ನಾರ ಜೊತೆ ಈ ಪ್ರತಿಭಟನೆಯಲ್ಲಿ ಕೆಲವು ಪಕ್ಷದ ಕಾರ್ಯಕರ್ತರು ಇದ್ದರು.
ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಟು ಕೊಲ್ಕತ್ತಾದ ಸಂಸತ್ತು ಕಟ್ಟಡವನ್ನು ಮಧ್ಯಾಹ್ನ 12.30 ರ ಸುಮಾರಿಗೆ ತಲುಪಿದರು.

"ಇಂಧನ ಬೆಲೆಗಳ ಏರಿಕೆ ನರೇಂದ್ರ ಮೋದಿ ಸರ್ಕಾರದ ಇತ್ತೀಚಿನ ವೈಫಲ್ಯವಾಗಿದೆ. ಪೆಟ್ರೋಲ್ ಬೆಲೆ ಕೋಲ್ಕತ್ತಾದಲ್ಲಿ ಶತಕವನ್ನು ದಾಟಿದೆ ಮತ್ತು ನಾವು ಇದನ್ನು ವಿರೋಧಿಸುತ್ತಿದ್ದೇವೆ," ಎಂದು ಪಶ್ಚಿಮ ಬಂಗಾಳದ ಕಾರ್ಮಿಕ ಸಚಿವ ಮಾಧ್ಯಮಕ್ಕೆ ತಿಳಿಸಿದರು.
"ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಸಾಮಾನ್ಯ ಜನರನ್ನು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಆದರೆ ರಾಜ್ಯದ ತೃಣಮೂಲ ಕಾಂಗ್ರೆಸ್ ಸರ್ಕಾರವು ತನ್ನ ಸಮಾಜ ಕಲ್ಯಾಣ ಯೋಜನೆಗಳಿಂದ ಜನಸಾಮಾನ್ಯರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ," ಎಂದು ಕೂಡಾ ಹೇಳಿದರು.
ಕಳೆದ ಹಲವಾರು ದಿನಗಳಿಂದ ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಇದರೊಂದಿಗೆ ಇತರೆ ಅಗತ್ಯ ಸಾಮಾಗ್ರಿಗಳ ಬೆಲೆಯು ಏರಿಕೆಯಾಗುತ್ತಿದೆ. ಇದು ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಂಗಳವಾರ (ಜುಲೈ 7) ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದೆ. ಮೆಟ್ರೋ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತಾದಲ್ಲೂ ಈಗ ಪೆಟ್ರೋಲ್ 100 ರು. ಯಾಗಿದೆ.
ಮೇ 4ರಿಂದ ಇಂದಿನ ತನಕ ಒಟ್ಟು 36 ಬಾರಿ ಹಾಗೂ ಜೂನ್ ತಿಂಗಳಲ್ಲೇ 18 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಜುಲೈ 6ರಂದು ಇಂಧನ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಜುಲೈ 07ರಂದು ಪೆಟ್ರೋಲ್ ಬೆಲೆ ಸರಾಸರಿ 35 ಪೈಸೆ ಪ್ರತಿ ಲೀಟರ್ ಏರಿಕೆ, ಡೀಸೆಲ್ ಬೆಲೆ 17 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications