ಪಶ್ಚಿಮ ಬಂಗಾಳದ ಒಂದೇ ಜಿಲ್ಲೆಯ 3 ಶಾಸಕರಿಂದ ಟಿಎಂಸಿಗೆ ಟಾಟಾ!
ಕೋಲ್ಕತ್ತಾ, ಜನವರಿ.29: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷ ಒಡೆದ ಮನೆ ಆಗುತ್ತಿದೆ. ಕಳೆದ ವಾರ ಮಮತಾ ಬ್ಯಾನರ್ಜಿ ಸಂಪುಟದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಜಿಬ್ ಬ್ಯಾನರ್ಜಿಯವರು ಶುಕ್ರವಾರ ತಮ್ಮ ದೊಂಜುರ್ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಸದ್ಯದ ಮಟ್ಟಿಗೆ ನಾನು ಟಿಎಂಸಿ ನಾಯಕನೇ ಆಗಿದ್ದರೂ ನನ್ನ ಮುಂದಿನ ನಡೆಯ ಬಗ್ಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಜನವರಿ.31ರ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗುವ ಬಗ್ಗೆ ರಾಜಿಬ್ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿದ್ದ ರಾಜಿಬ್ ಬ್ಯಾನರ್ಜಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಗೆ ಭೇಟಿ ನೀಡಿದ ಅವರನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಆಹ್ವಾನ ನೀಡಿತ್ತು.

ಶಾಸಕ ಸ್ಥಾನದ ರಾಜೀನಾಮೆ ಬಳಿಕ ರಾಜಿಬ್ ಮಾತು
"ನಾನು ರಾಜ್ಯ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ವಿಧಾನಸಭಾ ಸಭಾಪತಿಯವರಿಗೆ ನೀಡಿದ್ದೇನೆ. ನಮ್ಮ ಕ್ಷೇತ್ರದ ಜನರ ಸೇವೆ ಮಾಡುವುದಕ್ಕೆ ಅವಕಾಶ ನೀಡಿದ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಕೂಡಾ ದೊಂಜುರ್ ಕ್ಷೇತ್ರದ ಜನರ ಸೇವೆ ಕಾರ್ಯವನ್ನು ಮುಂದುವರಿಸುತ್ತೇನೆ" ಎಂದು ರಾಜಿಬ್ ಬ್ಯಾನರ್ಜಿ ತಿಳಿಸಿದ್ದಾರೆ.

15 ದಿನಕ್ಕೊಬ್ಬ ಸಚಿವರ ರಾಜೀನಾಮೆ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಂದಿರುವಾಗಲೇ ಟಿಎಂಸಿ ಪಕ್ಷದ ಬಹುತೇಕ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಕಳೆದ ಆರು ವಾರಗಳಲ್ಲಿ ಮೂವರ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಮೊದಲಿಗೆ ನಂದಿಗ್ರಾಮ್ ಕ್ಷೇತ್ರದ ಪ್ರಭಾವಿ ಶಾಸಕ ಸುವೇಂಧು ಅಧಿಕಾರಿ ಟಿಎಂಸಿಯಿಂದ ಹೊರ ನಡೆದರು. ಎರಡನೇಯದಾಗಿ ಲಕ್ಷ್ಮಿ ರತನ್ ಶುಕ್ಲಾ ಅವರು ತಮ್ಮ ಕ್ರೀಡಾ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ವಾರ ರಾಜಿಬ್ ಬ್ಯಾನರ್ಜಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶುಕ್ರವಾರ ಶಾಸಕ ಸ್ಥಾನಕ್ಕೂ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.

ಒಂದೇ ಜಿಲ್ಲೆಯ ಮೂವರು ಶಾಸಕರಿಗೆ ಟಿಎಂಸಿಗೆ ಟಾಟಾ
ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಹೋಗಿರುವ ಮೂವರೂ ಶಾಸಕರು ಹೌರಾ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇದೇ ವಾರಾಂತ್ಯದಲ್ಲಿ ಇದೇ ಹೌರಾ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಬೃಹತ್ ರ್ಯಾಲಿ ನಡೆಯಲಿದೆ. ಈ ವೇಳೆಯಲ್ಲಿ ಮೂವರೂ ಶಾಸಕರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

ನಾಡಿಯಾ ಜಿಲ್ಲೆಯಲ್ಲೂ ರಾಜೀನಾಮೆ ಪರ್ವ ಶುರು
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಗೆ ಮಾತ್ರ ರಾಜೀನಾಮೆ ಪರ್ವ ಸೀಮಿತವಾಗಿಲ್ಲ. ಬದಲಿಗೆ ಕಳೆದ ವಾರವೇ ನಾಡಿಯಾ ಜಿಲ್ಲೆ ಶಾಂತಿಪುರ್ ವಿಧಾನಸಭಾ ಕ್ಷೇತ್ರ ಶಾಸಕ ಅರಿದಮ್ ಭಟ್ಟಾಚಾರ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇತ್ತೀಚಿಗಷ್ಟೇ, ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಬೆಂಬಲಿಸುತ್ತಿರುವ 41 ಟಿಎಂಸಿ ಶಾಸಕರು ಇದೀಗ ಬಿಜೆಪಿ ಸೇರುವುದಕ್ಕೆ ಇಚ್ಛಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದರು.

ಸಮುದ್ರಕ್ಕೆ ಪಕ್ಷವನ್ನು ಹೋಲಿಸಿದ ಟಿಎಂಸಿ ನಾಯಕ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಎನ್ನುವುದು ಒಂದು ಸಮುದ್ರವಿದ್ದಂತೆ. ಯಾರೋ ಒಂದೆರೆಡು ಲೋಟ ನೀರನ್ನು ಎತ್ತುಕೊಂಡು ಹೋದರೆ ಸಮುದ್ರವು ಬರಿದಾಗುವುದಿಲ್ಲ. ಬೆಳೆದು ನಿಂತಿರುವ ಬೃಹತ್ ಮರದಿಂದ ಒಂದೆರೆಡು ಎಲೆಗಳು ಉದುರಿದರೆ ಮರವು ಖಾಲಿ ಖಾಲಿ ಆಗುವುದಿಲ್ಲ. ಹೊಸದಾಗಿ ಎಲೆಗಳು ಚಿಗುರುತ್ತವೆ. ಅದೇ ರೀತಿ ಹೊಸಬರು ಪಕ್ಷವನ್ನು ಬೆಳೆಸುತ್ತಾರೆ ಎಂದು ಟಿಎಂಸಿ ಹಿರಿಯ ಮುಖಂಡ ಪರ್ತಾ ಚಟರ್ಜಿ ಹೇಳಿದ್ದಾರೆ.












Click it and Unblock the Notifications