ಬಂಧನ ಭೀತಿ: ಸುಪ್ರಿಂ ಮೊರೆ ಹೋದ ಮಮತಾ ಆಪ್ತ ಪೊಲೀಸ್ ಉನ್ನತಾಧಿಕಾರಿ
ನವದೆಹಲಿ, ಮೇ 20: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ಸಾಕ್ಷ್ಯ ನಾಶದ ಆರೋಪ ಹೊತ್ತಿರುವ ಕೊಲ್ಕತ್ತ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರಿಗೆ ಬಂಧನ ಭೀತಿ ಎದುರಾಗಿದ್ದು, ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಪ್ತರಾಗಿರುವ ರಾಜೀವ್ ಕುಮಾರ್ ಅವರು ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸುಪ್ರಿಂ ಕೋರ್ಟ್ ಮೇ 17 ರಂದು ಸೂಚನೆ ನೀಡಿತ್ತು, ಆದರೆ ಈ ವರೆಗೂ ರಾಜೀವ್ ಅವರು ವಿಚಾರಣೆಗೆ ಹಾಜರಾಗಿಲ್ಲ ಬದಲಿಗೆ ಬಂಧನ ತಡೆ ವಿಸ್ತರಣೆ ಮಾಡುವಂತೆ ಸುಪ್ರಿಂಗೆ ಮೊರೆ ಹೋಗಿದ್ದಾರೆ.
ಕೊಲ್ಕತ್ತ ನ್ಯಾಯಾಲಯದ ವಕೀಲರ ಮುಷ್ಕರ ನಡೆಯುತ್ತಿದ್ದು ಈಗಾಗಲೇ ನಾಲ್ಕು ದಿನ ಕಳೆದು ಹೋಗಿರುವ ಕಾರಣ ಬಂಧನ ತಡೆ ಅವಧಿಯನ್ನು ಇನ್ನೂ ಏಳು ದಿನಗಳ ಕಾಲ ವಿಸ್ತರಣೆ ಮಾಡಬೇಕು ಎಂದು ರಾಜೀವ್ ಕುಮಾರ್ ಅವರು ಸುಪ್ರಿಂ ಕೋರ್ಟ್ನ ರಜಾ ಕಾಲದ ಪೀಠದ ಎದುರು ಮೊರೆ ಹೋಗಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ್ದ ರಂಜನ್ ಗೊಗಾಯ್ ಅವರ ಪೀಠವು ಮೇ 17 ರಂದು ಏಳು ದಿನಗಳ ಕಾಲ ಬಂಧನದಿಂದ ರಾಜೀವ್ ಕುಮಾರ್ ಅವರಿಗೆ ಭದ್ರತೆ ನೀಡಿತ್ತು, ಮುಂದಿನ ಕಾನೂನು ಪರಿಹಾರೋಪಾಯಕ್ಕೆ ಸಕ್ಷಮ ನ್ಯಾಯಾಲಯಕ್ಕೆ ಮೊರೆ ಹೋಗುವಂತೆ ಹೇಳಿತ್ತು.












Click it and Unblock the Notifications