ಟ್ರೆಂಡ್ನಲ್ಲಿರುವಾಗಲೇ ನಿವೃತ್ತಿ ಘೋಷಣೆ ಮಾಡಿದ ಚಾಣಕ್ಯ
''ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯ ಸೀಟುಗಳನ್ನು ಪಡೆದರೂ ತಾವು ಟ್ವಿಟ್ಟರ್ ಖಾತೆಯನ್ನು ತ್ಯಜಿಸುತ್ತೇನೆ'' ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶಪಥ ಮಾಡಿದ್ದ ಟ್ವೀಟ್ ಇಂದು ಸಕತ್ ಟ್ರೆಂಡ್ನಲ್ಲಿದೆ. ಈ ನಡುವೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಅವರು ಚುನಾವಣೆ ತಂತ್ರಗಾರಿಕೆ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಈ ಟ್ವೀಟ್ಅನ್ನು ಉಳಿಸಿಟ್ಟುಕೊಳ್ಳಿ. ಬಿಜೆಪಿ ಇದಕ್ಕಿಂತ ಉತ್ತಮ ಸಾಧನೆಯೇನಾದರೂ ಮಾಡಿದರೆ ನಾನು ಈ ಜಾಗವನ್ನು ತ್ಯಜಿಸುತ್ತೇನೆ' ಎಂದು ಪ್ರಶಾಂತ್ ಕಿಶೋರ್ ಡಿಸೆಂಬರ್ 2020ರಲ್ಲಿ ಟ್ವೀಟ್ ಮಾಡಿದ್ದರು. ಅದರಂತೆ ಪಶ್ಚಿಮ ಬಂಗಾಳದಲ್ಲಿ ಇಂದು ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಬೆಂಗಾಳ ತನ್ನ ಹೆಮ್ಮೆಯ ಪುತ್ರಿಗೆ ಮತ ಹಾಕಲಿದೆ ಎಂದಿದ್ದರು.
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಚಾರ ತಂತ್ರ ಹೆಣೆಯುತ್ತಿರುವ ಚುನಾವಣಾ ಪ್ರಚಾರ ಚಾಣಾಕ್ಷ ಪ್ರಶಾಂತ್ ಕಿಶೋರ್, ದೇಶದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಯುದ್ಧವನ್ನು ಬೆಂಗಾಳದಲ್ಲಿ ಕಾಣಲಿದ್ದೀರಿ ಎಂದಿದ್ದರು. ಅದರಂತೆ ಇಂದು ಬೆಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನ ಹಾದಿಯಲ್ಲಿದೆ ಆದರೆ, ಪ್ರಶಾಂತ್ ಅವರು ತಮ್ಮ ಚುನಾವಣಾ ತಂತ್ರಗಾರಿಕೆ ಸಂಸ್ಥೆ ಐ ಪ್ಯಾಕ್ ತೊರೆಯುವ ಬಗ್ಗೆ ಮಾತನಾಡಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್
ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್, ನಾನು ಈಗ ಏನು ಮಾಡುತ್ತಿದ್ದೆನೋ ಅದನ್ನು ಮುಂದುವರೆಸುವುದಿಲ್ಲ, ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೇನೆ, ಒಂದು ವಿರಾಮ ತೆಗೆದುಕೊಳ್ಳಲು ಇದು ಸರಿಯಾದ ಸಮಯ, ಜೀವನದಲ್ಲಿ ಬೇರೆ ಏನಾದ್ರೂ ಮಾಡಬೇಕಿದೆ ಎಂದಿದ್ದಾರೆ.

ಬೆಂಗಾಳದ ಫಲಿತಾಂಶದ ಬಗ್ಗೆ ಮೊದಲೇ ಹೇಳಿದ್ದೆ
ಬೆಂಗಾಳದ ಫಲಿತಾಂಶದ ಬಗ್ಗೆ ಮೊದಲೇ ಹೇಳಿದ್ದೆ. ಟಿಎಂಸಿ ಕಠಿಣ ಪೈಪೋಟಿ ನಡುವೆಯೂ ಗೆಲ್ಲಲಿದೆ, ಆಯೋಗ ಕೂಡಾ ಪಕ್ಷಾಪಾತ ಮಾಡಿ ಪ್ರಚಾರಕ್ಕೆ ಅಡ್ಡಿ ಮಾಡಿತ್ತು. ಬಿಜೆಪಿ ಮಾಧ್ಯಮಗಳಲ್ಲಿ ಮಾತ್ರ ಬೆಂಗಾಳದಲ್ಲಿ ಗೆಲುವು ಸಾಧಿಸುವುದಾಗಿ ಪ್ರಚಾರ ಪಡೆದುಕೊಂಡಿತು. ಆದರೆ, ಜನರ ಮನಸ್ಸಿನಲ್ಲಿ ಟಿಎಂಸಿ ನೆಲೆಸಿತ್ತು ಎಂದಿದ್ದಾರೆ.

ಡಿಎಂಕೆಗೂ ನೆರವಾಗಿದ್ದ ಪ್ರಶಾಂತ್
ತಮಿಳುನಾಡಿನಲ್ಲಿ ದಶಕದ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ ಅಧಿಕಾರಕ್ಕೇರಲು ಕೂಡಾ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ನೆರವಾಗಿದೆ. ಬೆಂಗಾಳದಲ್ಲಿ ಸುಮಾರು 30ಕ್ಕೂ ಅಧಿಕ ಹಿರಿಯ ನಾಯಕರನ್ನು ತೃಣಮೂಲ ಕಾಂಗ್ರೆಸ್ ಕಳೆದುಕೊಂಡ ಅವಧಿಯಲ್ಲಿ ಮಮತಾ ಬಳಿ ಬಂದ ಪ್ರಶಾಂತ್ ಇಂದು ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ.

ಹಲವು ಪಕ್ಷಗಳ ಗೆಲುವಿಗೆ ಕಾರಣವಾಗಿರುವ ಪ್ರಶಾಂತ್
2014ರಲ್ಲಿ ಬಿಜೆಪಿ, 2015ರಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಗೆಲುವಿಗೆ ಪ್ರಶಾಂತ್ ಕಾರಣರಾಗಿದ್ದರು. ಆದರೆ, ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. 2019ರಲ್ಲಿ ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಜಗನ್ ಮೋಹನ್ ರೆಡ್ಡಿ ಗೆಲ್ಲಲು ನೆರವಾದರು. ಮೋದಿ ಗೆಲ್ಲಿಸಲು 'ಚಾಯ್ ಪೇ ಚರ್ಚಾ', ನಿತೀಶ್ ಗೆಲುವಿಗೆ 'ಸಾರಾಯಿ ಮುಕ್ತ' ಮಂತ್ರ ಜಪಿಸಿದ್ದ ಪ್ರಶಾಂತ್ ಕಿಶೋರ್, ಉತ್ತರಪ್ರದೇಶ ಜಾತಿ ಸಂಕೀರ್ಣತೆಯ ಮರ್ಮ ಅರಿಯದೆ 'ಮೇಲ್ವರ್ಗದ ಸಿಎಂ' ಎಂದು ಬ್ರಾಹ್ಮಣರಿಗೆ ಮಣೆ ಹಾಕಲು ಹೋಗಿ ಮಗಚಿ ಬಿದ್ದರು. ಶೀಲಾ ದೀಕ್ಷಿತ್ ಕರೆ ತರಲಾಯಿತು, ಕೊನೆಗೆ ಪ್ರಿಯಾಂಕಾ ಹೆಸರು ಕೇಳಿ ಬಂದಿತ್ತು.
ಆಂಧ್ರದಲ್ಲಿ ಪ್ರಜಾ ಸಂಕಲ್ಪ ಪಾದಯಾತ್ರೆ, 'ರಾವಾಲಿ ಜಗನ್ ಕಾವಾಲಿ ಜಗನ್' ಎಂಬ ಘೋಷವಾಕ್ಯ ಕೋಟ್ಯಂತರ ಜನರನ್ನು ತಲುಪಿತು. ಚಂದ್ರಬಾಬು ವಿರುದ್ಧ 'ಬೈ ಬೈ ಬಾಬು' ಅಭಿಯಾನವು ಯಶಸ್ವಿಯಾಯಿತು. ನವ್ಯಾ ಆಂಧ್ರ ಯೋಜನೆಗೆ ಬೆಲೆ ಸಿಕ್ಕಿತು.. ಮುಂದಿನದ್ದು ಇತಿಹಾಸ.












Click it and Unblock the Notifications