ನನ್ನ ಹೆಲಿಕಾಪ್ಟರ್ನಲ್ಲಿ ತೊಂದರೆಯಾಯ್ತು, ಅದನ್ನು ಸಂಚು ಎನ್ನುವುದಿಲ್ಲ: ದೀದಿಗೆ ಶಾ ಟಾಂಗ್
ಬಂಕುರಾ, ಮಾರ್ಚ್ 15: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು. ತಮ್ಮ ಹೆಲಿಕಾಪ್ಟರ್ನಲ್ಲಿ ತೊಂದರೆ ಉಂಟಾಯಿತು. ಆದರೆ ಅದನ್ನು 'ಸಂಚು' ಎಂದು ತಾವು ಹೇಳುವುದಿಲ್ಲ ಎನ್ನುವ ಮೂಲಕ, ನಂದಿಗ್ರಾಮದ ಘಟನೆಗೆ ಕುರಿತಂತೆ ವ್ಯಂಗ್ಯವಾಡಿದರು.
'ನನ್ನ ಹೆಲಿಕಾಪ್ಟರ್ನಲ್ಲಿ ತೊಂದರೆ ಉಂಟಾಗಿದ್ದರಿಂದ ನಾನು ಇಂದು ತಡವಾಗಿ ಬಂದೆ. ಆದರೆ ಅದನ್ನು ಸಂಕು ಎಂದು ಕರೆಯುವುದಿಲ್ಲ' ಎಂದು ರಾಣಿಬಂದ್ನಲ್ಲಿ ಸೋಮವಾರ ಚುನಾವಣಾ ಸಮಾವೇಶದಲ್ಲಿ ಅವರು ಹೇಳಿದರು. ಈ ಮೂಲಕ ನಂದಿಗ್ರಾಮದಲ್ಲಿ ಯಾರೋ ಅಪರಿಚಿತರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಅರೋಪಿಸಿ ಎರಡು ದಿನ ಆಸ್ಪತ್ರೆ ವಾಸ ಅನುಭವಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದರು.
'ಮಮತಾ ಬ್ಯಾನರ್ಜಿ ಮೇಲೆ ನಂದಿಗ್ರಾಮದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದೆ. ನಿಮ್ಮ ರಾಜಕೀಯ ಆಡಳಿತದಲ್ಲಿ 130 ಜನರು ಮೃತಪಟ್ಟಿದ್ದಾರೆ. ಅವರ ನೋವು ನಿಮಗೆ ಅರ್ಥವಾಗುತ್ತದೆಯೇ? ನಿಮ್ಮ ಕಾಲಿನ ಗಾಯದಿಂದ ಉಂಟಾದ ನೋವಷ್ಟೇ ನಿಮಗೆ ಗೊತ್ತು' ಎಂದು ಟೀಕಿಸಿದರು.

'ಮಾ ಮತಿ ಮನುಷ್' ಸರ್ಕಾರಕ್ಕಾಗಿ ಜನರು ಟಿಎಂಸಿಗೆ ಮತ ಹಾಕಿದರು. ರಾಜಕೀಯ ಹಿಂಸೆ ಅಂತ್ಯವಾಗುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಅದರ ವಿರುದ್ಧ ನಡೆಯಿತು. ಹಿಂಸೆ ಮತ್ತು ಭ್ರಷ್ಟಾಚಾರ ಜಾಸ್ತಿಯಾಯಿತು. ಆದಿವಾಸಿಗಳು ಪ್ರಮಾಣಪತ್ರಕ್ಕಾಗಿ ನೂರು ರೂಪಾಯಿ ಕೊಡುವಂತಾಗಿದೆ. ಬಿಜೆಪಿ ಸರ್ಕಾರವನ್ನು ತನ್ನಿ. ಆದಿವಾಸಿಗಳು ಪ್ರಮಾಣಪತ್ರಕ್ಕಾಗಿ ದುಡ್ಡುಕೊಡುವ ಅಗತ್ಯ ಬೀಳುವುದಿಲ್ಲ' ಎಂದರು.
ಕಳೆದ ವಾರ ತಾವು ಸ್ಪರ್ಧಿಸುತ್ತಿರುವ ನಂದಿಗ್ರಾಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಮತಾ ಬ್ಯಾನರ್ಜಿ ಅವರ ಕಾಲು ಮತ್ತು ಭುಜಕ್ಕೆ ಗಾಯವಾಗಿತ್ತು. 4-5 ಅಪರಿಚಿತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಅವರು ಆರೋಪಿಸಿದ್ದರು. ಇದು ನಾಟಕ ಎಂದು ಬಿಜೆಪಿ ಟೀಕಿಸಿತ್ತು. ಮಮತಾ ಮೇಲೆ ಯಾವುದೇ ಹಲ್ಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ. ಅವರ ಮೇಲೆ ದಾಳಿ ನಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ.












Click it and Unblock the Notifications