ಇದು ಅಧಿಕಾರ ದುರ್ಬಳಕೆಯಲ್ಲದೇ ಮತ್ತೇನು; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಡಿಸೆಂಬರ್ 17: ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದ್ದು, ಈ ಘಟನೆ ಸಂಬಂಧ ಭದ್ರತಾ ಲೋಪದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಗೃಹ ಸಚಿವಾಲಯವು ಕೇಂದ್ರಕ್ಕೆ ನಿಯೋಜನೆಗೊಳಿಸಿತ್ತು.
ಈ ಸಂಬಂಧ ಗುರುವಾರ ಸಚಿವಾಲಯವು ಮತ್ತೆ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಡಿಜಿಪಿಗೆ ಪತ್ರ ಬರೆದಿದೆ. "ನಿಯಮಗಳನ್ನು ಪಾಲಿಸುವಲ್ಲಿ ನೀವು ವಿಫಲವಾಗಿದ್ದೀರ. ಐಪಿಎಸ್ ಕೇಡರ್ ನಿಯಮದ ಸೆಕ್ಷನ್ 6 (1) ಪ್ರಕಾರ ಯಾವುದೇ ಭಿನ್ನಾಭಿಪ್ರಾಯದ ಸಂದರ್ಭ ಕೇಂದ್ರದ ನಿರ್ಧಾರ ಮೇಲುಗೈ ಸಾಧಿಸುತ್ತದೆ" ಎಂದು ಉಲ್ಲೇಖಿಸಿದೆ.
ಡಿ.12ರಂದು ಗೃಹ ವ್ಯವಹಾರಗಳ ಸಚಿವಾಲಯ ಶೀಘ್ರ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

ಈ ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, "ಇದು ಐಪಿಎಸ್ ಕೇಡರ್ ನಿಯಮ 1954ರ ತುರ್ತು ನಿಬಂಧನೆಯ ದುರುಪಯೋಗ ಹಾಗೂ ಅಧಿಕಾರದ ದುರ್ಬಳಕೆಯನ್ನು ಎತ್ತಿ ತೋರಿಸುತ್ತಿದೆ" ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಮಮತಾ ಬ್ಯಾನರ್ಜಿ, "ಈ ನಡೆ ರಾಜ್ಯದ ವ್ಯಾಪ್ತಿಯೊಳಗೆ ಅತಿಕ್ರಮಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ತೋರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಕುಗ್ಗಿಸುವ ಪ್ರಯತ್ನವಾಗಿದೆ. ಇದು ಅಸಾಂವಿಧಾನಿಕ ಹಾಗೂ ಒಪ್ಪಿಕೊಳ್ಳಲು ಅಸಾಧ್ಯ" ಎಂದು ದೂರಿದ್ದಾರೆ.
"ರಾಜ್ಯ ಸರ್ಕಾರವನ್ನು ಹೀಗೆ ನಿಯಂತ್ರಿಸುವ ಕೇಂದ್ರದ ಲಜ್ಜೆಗೆಟ್ಟ ಪ್ರಯತ್ನವನ್ನು ಸಹಿಸುವುದಿಲ್ಲ. ಈ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ಮುಂದೆ ತಲೆ ಬಗ್ಗಿಸುವುದಿಲ್ಲ" ಎಂದಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯವು ಈಚೆಗೆ ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿಗಳಾದ ಭೋಲಾನಾಥ್ ಪಾಂಡೆ, ರಾಜೀವ್ ಮಿಶ್ರಾ ಹಾಗೂ ಪ್ರವೀಣ್ ತ್ರಿಪಾಠಿ ಎಂಬುವರನ್ನು ಐದು ವರ್ಷಗಳ ಕಾಲ ನಿಯೋಜಿಸಿತ್ತು. ಈ ಕುರಿತು ಡಿ.11ರಂದು ಪತ್ರ ಬರೆದಿದ್ದು, ಅಧಿಕಾರಿಗಳನ್ನು ಕಳುಹಿಸುವಂತೆ ಆಗ್ರಹಿಸಿತ್ತು. ಆದರೆ ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿರಲಿಲ್ಲ.
ಗುರುವಾರ ಪತ್ರ ಬರೆದಿರುವ ಸಚಿವಾಲಯ, "ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಡಿಜಿಪಿ ಕೇಂದ್ರದೊಂದಿಗೆ ಸಹಕರಿಸಿಲ್ಲ. ಈ ಕ್ಷಣವೇ ಮೂವರು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕಠಿಣ ಕ್ರಮಗಳನ್ನು ಎದುರು ನೋಡಬೇಕಾಗುತ್ತದೆ" ಎಂದು ಎಚ್ಚರಿಸಲಾಗಿದೆ.












Click it and Unblock the Notifications