ಮಮತಾಗೆ ಬಿಜೆಪಿ ಭಯ, ರಥಯಾತ್ರೆ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ
ಕೋಲ್ಕತಾ, ಡಿಸೆಂಬರ್ 07: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಹಮ್ಮಿಕೊಂಡಿದ್ದ ರಥಯಾತ್ರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಡೆಯೊಡ್ಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ರಥಯಾತ್ರೆ ರದ್ದಾಗಿಲ್ಲ, ದಿನಾಂಕವನ್ನು ಮುಂದೂಡಲಾಗಿದೆ.
ರಥಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವು ರಥಯಾತ್ರೆ ನಡೆಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
LIVE: Press Conference by Shri @AmitShah. #MamataFearsBJP https://t.co/POEwjmeQCL
— BJP (@BJP4India) December 7, 2018
ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರುವ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ. ರಥಯಾತ್ರೆ ರದ್ದಾಗಿಲ್ಲ, ದಿನಾಂಕವನ್ನು ಮುಂದೂಡಲಾಗಿದೆ. ರಥಯಾತ್ರೆ ನಡೆಯಲಿದೆ. ನಾವು ಕಾನೂನಿನ ಪ್ರಕಾರವೇ ಯಾತ್ರೆಯನ್ನು ಆಯೋಜಿಸುತ್ತೇವೆ. ಯಾತ್ರೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಸಂಚರಿಸಲಿದೆ. ಪಶ್ಚಿಮ ಬಂಗಾಳಕ್ಕೆ ನಾಳೆ ಭೇಟಿ ನೀಡುವೆ ಎಂದು ಅಮಿತ್ ಶಾ ಹೇಳಿದ್ದಾರೆ.
ರಥಯಾತ್ರೆ ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಕಾರಣದಿಂದ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ಅಮಿತ್ ಶಾ ಅವರ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು.
ಮಮತಾ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋಲ್ಕತಾ ಹೈಕೋರ್ಟ್ಗೆ ಯಾತ್ರೆ ನಡೆಸಲು ಅನುಮತಿ ಕೋರಿ ಬಿಜೆಪಿ ಅರ್ಜಿ ಹಾಕಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಕೂಚ್ ಬಿಹಾರ್ ನಲ್ಲಿ ಯಾತ್ರೆಯನ್ನು ನಡೆಸುವಂತಿಲ್ಲ ಎಂದು ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಮೇಲ್ಮನವಿ ಸಲ್ಲಿಸಿದ್ದು, ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಯಲಿದೆ.
ಪಶ್ಚಿಮ ಬಂಗಾಳದ ಕೂಚ್ಬೆಹರ್ನಲ್ಲಿ ಡಿ .7ರಂದು ಯಾತ್ರೆ ಆರಂಭಿಸಲು ಸಿದ್ಧತೆ ನಡೆಸಿತ್ತು. ಡಿ. 9 ರಂದು ಗಂಗಾಸಾಗರದಿಂದ ಮತ್ತು ಡಿ. 14 ರಂದು ತಾರಾಪಿಥ್ನಿಂದ ಯಾತ್ರೆ ನಿಗದಿಯಾಗಿತ್ತು. ಈ ಯಾತ್ರೆಗಳು ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿತ್ತು. ಸದ್ಯ ಪಶ್ಚಿಮ ಬಂಗಾಳದಲ್ಲಿ ಅಸಾನೊಲ್ ಹಾಗೂ ದಾರ್ಜಲಿಂಗ್ ನಲ್ಲಿ ಮಾತ್ರ ಬಿಜೆಪಿ ತನ್ನ ಸಂಸದರನ್ನು ಹೊಂದಿದೆ.