"ಕೇಂದ್ರ ಭದ್ರತಾ ಪಡೆ ವಿರುದ್ಧ ಸ್ಥಳೀಯರನ್ನು ಎತ್ತಿ ಕಟ್ಟಿದ್ದೇ ದೀದಿ"
ಕೋಲ್ಕತ್ತಾ, ಏಪ್ರಿಲ್ 11: ಪಶ್ಚಿಮ ಬಂಗಾಳದ ಕೂಚ್ ಬೆಹರ್ ಜಿಲ್ಲೆಯ ಮತಗಟ್ಟೆಯಲ್ಲಿ ನಡೆದ ಘಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನೇರ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಬಸ್ರತ್ ದಕ್ಷಿಣ್ ಎಂಬಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದರು. ಸಿತಾಲ್ ಕುಚಿ ಪ್ರದೇಶದಲ್ಲಿ ದೀದಿ ಅವರು ಸಿಎಪಿಎಫ್ ವಿರುದ್ಧ ಧಿಕ್ಕಾರ ಕೂಗುವಂತೆ ಯುವಕರು ಮತ್ತು ಮಹಿಳೆಯರಿಗೆ ಪ್ರರೇಪಿಸಿದ್ದಾರೆ. ನೀವೇನೋ ಪ್ರಚೋದನಕಾರಿಯಾಗಿ ಹೇಳಿ ಅಲ್ಲಿಂದ ಹೊರಟು ಹೋದಿರಿ. ಆದರೆ ನಿಮ್ಮಿಂದಾಗಿ ಅಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅದೇ ದಿನ ಬೆಳಗ್ಗೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಮತಗಟ್ಟೆಯಲ್ಲಿ ಗುಂಡಿನ ದಾಳಿ: ಸಿಐಎಸ್ಎಫ್ ಹೇಳಿದ್ದೇನು?
ಮಮತಾ ಬ್ಯಾನರ್ಜಿ 10 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಇದೀಗ ಅವರಿಗೊಂದು ಸಣ್ಣ ವಿದಾಯ ಹೇಳುವ ಕಾಲ ಬಂದಿದೆ. ಅವರಿಗೆ ವಿದಾಯ ಹೇಳಿ ಕಳುಹಿಸುವುದಕ್ಕಾಗಿ ನೀವು ಬಿಜೆಪಿಗೆ 200 ಸ್ಥಾನಗಳನ್ನು ನೀಡಬೇಕಿದೆ. ಈ ಬಗ್ಗೆ ಮನವಿ ಮಾಡಿಕೊಳ್ಳುವುದಕ್ಕಾಗಿಯೇ ನಾನಿಲ್ಲಿಗೆ ಬಂದಿದ್ದೇನೆ ಎಂದು ಅಮಿತ್ ಶಾ ಹೇಳಿದರು.

ರಾಜೀನಾಮೆ ಸಲ್ಲಿಸಲು ಸಿದ್ಧರಾಗಿ ಎಂದ ಶಾ:
"ಅಮಿತ್ ಶಾ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಮಮತಾ ಬ್ಯಾನರ್ಜಿ ಅವರು ಎರಡೆರೆಡು ಬಾರಿ ಹೇಳಿದ್ದಾರೆ. ಜನರು ಯಾವಾಗ ನನ್ನ ರಾಜೀನಾಮೆ ಕೇಳುತ್ತಾರೋ ಅಂದು ನಾನು ರಾಜೀನಾಮೆ ಸಲ್ಲಿಸುತ್ತೇನೆ. ಆದರೆ ನೀವು ಮೇ 2ರಂದು ರಾಜೀನಾಮೆ ಸಲ್ಲಿಸುವುದಕ್ಕೆ ಸಿದ್ಧರಾಗಿರಿ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯದಲ್ಲಿ ಇನ್ನೂ ನಾಲ್ಕು ಹಂತದ ಚುನಾವಣೆ ಬಾಕಿ:
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತ, ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನ ನಡೆದಿದೆ. ಉಳಿದಂತೆ ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications