ಮತಗಟ್ಟೆಯಲ್ಲಿ ಗುಂಡಿನ ದಾಳಿ: ಸಿಐಎಸ್ಎಫ್ ಹೇಳಿದ್ದೇನು?
ಕೋಲ್ಕತಾ, ಏಪ್ರಿಲ್ 10: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನಲ್ಲಿ ಸಿಐಎಸ್ಎಫ್ ಪಡೆ ಹಾರಿಸಿದ ಗುಂಡಿಗೆ ಕನಿಷ್ಠ ನಾಲ್ವರು ಮತದಾರರು ಬಲಿಯಾದ ಘಟನೆ, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ನಡುವೆ ಸಿಐಎಸ್ಎಫ್ ಹೇಳಿಕೆ ನೀಡಿದ್ದು, ಜನರ ಗುಂಪು ಮೊದಲು ದಾಳಿ ನಡೆಸಿದ್ದಾಗಿ ತಿಳಿಸಿದೆ. ಈ ಘಟನೆಯಲ್ಲಿ ಐದಾರು ದುಷ್ಕರ್ಮಿಗಳು ಗಂಭೀರ ಗಾಯಗೊಂಡಿದ್ದರು. ಗಾಯದಿಂದ ಮೃತಪಟ್ಟರು ಎಂದು ಹೇಳಿದೆ.
ಘಟನೆ ಬಗ್ಗೆ ಸಿಐಎಸ್ಎಫ್ ಸುದೀರ್ಘ ವಿವರಣೆ ನೀಡಿದೆ. 'ಬೆಳಿಗ್ಗೆ 9.35ರ ಸುಮಾರಿಗೆ ಕಾಯ್ ಕಮಾಂಡರ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದ ತಂಡವು ಮತಗಟ್ಟೆಗೆ ತೆರಳುತ್ತಿದ್ದ ಮತದಾರರನ್ನು ಅಡ್ಡಗಟ್ಟುತ್ತಿದ್ದ ಜನರನ್ನು ತೆರವುಗೊಳಿಸಲು ಸ್ಥಳೀಯ ಪೊಲೀಸ್ ಪ್ರತಿನಿಧಿಗಳ ಜತೆಗೆ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಮೇಲೆ ಸುಮಾರು 50-60 ಜನರ ಸಂಖ್ಯೆಯ ಗುಂಪು ದಾಳಿ ನಡೆಸಿತು' ಎಂದು ಸಿಐಎಸ್ಎಫ್ ಹೇಳಿಕೆ ತಿಳಿಸಿದೆ.
ಗದ್ದಲ ಜಾಸ್ತಿಯಾದಾಗ ಒಂದು ಮಗು ಕೆಳಗೆ ಬಿದ್ದಿತು. ಆಗ ಜನರ ಗುಂಪು ಸಿಐಎಸ್ಎಫ್ ತಂಡದ ವಾಹನಗಳನ್ನು ಪುಡಿಮಾಡಿ ಸಿಬ್ಬಂದಿ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಸಿಬ್ಬಂದಿ ತಂಡ ಆತ್ಮರಕ್ಷಣೆಯ ಪ್ರತಿಕ್ರಿಯೆಯಾಗಿ, ಗುಂಪನ್ನು ಚೆದುರಿಸಲು ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿತು. ಸಿಐಎಸ್ಎಫ್ನ ಕಮಾಂಡರ್ ದೀಪಕ್ ಕುಮಾರ್ ಅವರು ಸ್ಥಳಕ್ಕೆ ತೆರಳಿ ಗುಂಪನ್ನು ನಿಯಂತ್ರಿಸಿದರು ಎಂದು ಸಿಐಎಸ್ಎಫ್ ತಿಳಿಸಿದೆ.

ಒಂದು ಗಂಟೆಯ ಬಳಿಕ ಸುಮಾರು 150 ಜನರ ಮತ್ತೊಂದು ಗುಂಪು ಅದನ್ನು ಸೇರಿಕೊಂಡು ಬೂತ್ ಸಂಖ್ಯೆ 186ಕ್ಕೆ ತಲುಪಿತು. ಮತಗಟ್ಟೆಯಲ್ಲಿದ್ದ ಸಿಬ್ಬಂದಿಯ ಮೇಲೆ ದೈಹಿಕ ಹಲ್ಲೆಗೆ ತೊಡಗಿತು. ಮೊದಲು ಅವರು ಗೃಹ ರಕ್ಷಕ ದಳದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿತು. ಸಿಐಎಸ್ಎಫ್ ಬೂತ್ ಕಮಾಂಡರ್ ದುಷ್ಕರ್ಮಿಗಳನ್ನು ತಡೆಯಲು ಪ್ರಯತ್ನಿಸಿದರು. ಆದರೆ ಗುಂಪು ಮತಗಟ್ಟೆ ಒಳಗೆ ಪ್ರವೇಶಿಸಿ ಕರ್ತವ್ಯದಲ್ಲಿದ್ದ ಇತರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಅಲ್ಲಿ ನಿಯೋಜಿಸಲಾಗಿದ್ದ ಸಿಐಎಸ್ಎಫ್ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಕೆಲವರು ಪ್ರಯತ್ನಿಸಿದರು.
ಇದರಿಂದಾಗಿ ಸಿಬ್ಬಂದಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಆ ಗುಂಪು ಎಚ್ಚರಿಕೆಗೆ ಕಿವಿಗೊಡಲಿಲ್ಲ. ಆ ವೇಳೆಗೆ ಕ್ಯೂಆರ್ಟಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಗುಂಪು ಸಿಐಎಸ್ಎಪ್ ಸಿಬ್ಬಂದಿ ವಿರುದ್ಧ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸತೊಡಗಿತು. ತಮ್ಮ ಜೀವಕ್ಕೆ ಅಪಾಯವಿರುವುದನ್ನು ಅರಿತ ಸಿಬ್ಬಂದಿ ಕಳವಳಗೊಂಡು ದುಷ್ಕರ್ಮಿಗಳ ಗುಂಪಿನತ್ತ ಏಳು ಸುತ್ತಿನ ಗುಂಡು ಹಾರಿಸಿದರು ಎಂದು ಅದು ಹೇಳಿಕೆ ನೀಡಿದೆ.












Click it and Unblock the Notifications