ಚಂದ್ರಯಾನಕ್ಕೂ ಆರ್ಥಿಕ ಕುಸಿತಕ್ಕೂ ಸಂಬಂಧ ಬೆಸೆದ ಮಮತಾ ವಿರುದ್ಧ ಆಕ್ರೋಶ
ಕೋಲ್ಕತಾ, ಸೆಪ್ಟೆಂಬರ್ 7: ಚಂದ್ರಯಾನ-2 ಯೋಜನೆಯು ಆರ್ಥಿಕ ಕುಸಿತದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮಾಡಿರುವ ಪ್ರಯತ್ನ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಚಂದ್ರಯಾನ-2 ನೌಕೆಯು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮಮತಾ ಬ್ಯಾನರ್ಜಿ ಶುಕ್ರವಾರ ಈ ಹೇಳಿಕೆ ನೀಡಿದ್ದರು.
ಬಂಗಾಳ ವಿಧಾನಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. 'ಚಂದ್ರಯಾನ-2 ಏನು ದೇಶದಲ್ಲಿ ಮೊದಲ ಬಾರಿಗೆ ಮಾಡುತ್ತಿರುವ ಯೋಜನೆಯೇ? ಅವರು ಅಧಿಕಾರಕ್ಕೆ ಬರುವ ಮುನ್ನ ಯಾವುದೇ ಅಂತಹ ಯೋಜನೆ ನಡೆದಿರಲಿಲ್ಲವೇ?' ಎಂದು ಕಿಡಿಕಾರಿದ್ದರು.

ಭಾರತದ ಆರ್ಥಿಕ ಕುಸಿತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಪ್ರಯತ್ನ ಇದು ಎಂದು ಮಮತಾ ಆರೋಪಿಸಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಶನಿವಾರ ಇಸ್ರೋ ಕಾರ್ಯದ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಸ್ರೋ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದೆ ಎಂದು ಶ್ಲಾಘಿಸಿದ್ದಾರೆ. 'ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತೇವೆ. ಇಸ್ರೋ ತಂಡ ಚಂದ್ರಯಾನ 2ಗೆ ಕಠಿಣ ಶ್ರಮಪಟ್ಟಿದೆ. ವೈಜ್ಞಾನಿಕವಾಗಿ ಮುಂದುವರೆದ ದೇಶಗಳ ನಡುವೆ ಭಾರತಕ್ಕೆ ಸ್ಥಾನ ದೊರಕಿಸಿಕೊಟ್ಟ ಇದರ ಪಿತಾಮಹರಿಗೆ ನಾವು ಗೌರವ ಸಲ್ಲಿಸುತ್ತೇವೆ' ಎಂದು ಮಮತಾ ಹೇಳಿದ್ದಾರೆ. ಇದು ಇಸ್ರೋ ಸಾಧನೆಯ ಕೀರ್ತಿ ಅದನ್ನು ಸ್ಥಾಪಿಸಿದವರಿಗೆ ಸಿಗಬೇಕೇ ಹೊರತು ಈಗಿನ ಆಡಳಿತಾರೂಢ ಬಿಜೆಪಿಗೆ ಅಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಇಸ್ರೋ ವಿಜ್ಞಾನಿಗಳ ಬದ್ಧತೆ ಮತ್ತು ಉತ್ಸಾಹವನ್ನು ಮಮತಾ ಶ್ಲಾಘಿಸಿದ್ದಾರೆ. ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ. ನಮ್ಮನ್ನು ಹೆಮ್ಮೆ ಪಡುವಂತೆ ಮಾಡುವುದನ್ನು ನೀವು ಮುಂದುವರಿಸುತ್ತೀರಿ ಎಂದು ಮತ್ತೊಂದು ಟ್ವೀಟ್ನಲ್ಲಿ ಮಮತಾ ಹೇಳಿದ್ದಾರೆ.












Click it and Unblock the Notifications