ಆಸೆಬುರುಕರು ನೀವು; ಬಿಜೆಪಿಯೆಡೆಗೆ ಮಮತಾ ಬ್ಯಾನರ್ಜಿ ಮಾತಿನ ಬಾಣ
ಕೋಲ್ಕತ್ತಾ, ಫೆಬ್ರುವರಿ 03: ಮುಂದಿನ ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದ್ದು, ಮಂಗಳವಾರವಷ್ಟೇ ಬಿಜೆಪಿ ರಾಜ್ಯದಲ್ಲಿ ತಿಂಗಳ ಅವಧಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ. ಈ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.
"ಕೇಸರಿ ಪಕ್ಷ ಭ್ರಷ್ಟ ಹಾಗೂ ಆಸೆಬುರುಕ ಪಕ್ಷ. ತೃಣಮೂಲ ಕಾಂಗ್ರೆಸ್ ನಿಂದ ಶಾಸಕರನ್ನು ಕಸಿದುಕೊಳ್ಳುತ್ತಿದೆ. ಆದರೆ ಇದರಿಂದ ತೃಣಮೂಲ ಕಾಂಗ್ರೆಸ್ ಗೇನೂ ತೊಂದರೆಯಿಲ್ಲ. ಇಲ್ಲಿ ಭ್ರಷ್ಟರಿಗೆ ಜಾಗವೂ ಇಲ್ಲ" ಎಂದು ತಿರುಗೇಟು ನೀಡಿದ್ದಾರೆ. ಈ ನಡುವೆ ಬಿಜೆಪಿ ಹಮ್ಮಿಕೊಳ್ಳಲಿರುವ ರಥಯಾತ್ರೆಗೆ ಅನುಮತಿ ನೀಡುವಲ್ಲಿ ಟಿಎಂಸಿ ನಿಧಾನ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಮುಂದೆ ಓದಿ...

"ತಕ್ಷಣವೇ ಪಕ್ಷ ತೊರೆಯಲು ಅಡ್ಡಿಯಿಲ್ಲ"
ಈಚೆಗೆ ತೃಣಮೂಲ ಕಾಂಗ್ರೆಸ್ ತೊರೆದು ಬಂಡಾಯದಿಂದ ಹೊರಬಂದ ರಾಜೀವ್ ಬ್ಯಾನರ್ಜಿ ಕುರಿತು ಮಾತನಾಡಿರುವ ಮಮತಾ ಬ್ಯಾನರ್ಜಿ "ಕೆಲವು ಭ್ರಷ್ಟ ನಾಯಕರನ್ನು ಬಿಜೆಪಿ ಖರೀದಿಸಬಹುದು. ಇದರಿಂದ ತೊಂದರೆಯಿಲ್ಲ. ತೃಣಮೂಲ ಕಾಂಗ್ರೆಸ್ ನಲ್ಲಿ ಭ್ರಷ್ಟ ಜನರಿಗೆ ಜಾಗವಿಲ್ಲ. ಆಡಳಿತ ಪಕ್ಷವನ್ನು ಬಿಡಲು ಬಯಸುವವರು ತಕ್ಷಣವೇ ಪಕ್ಷವನ್ನು ತೊರೆಯಬಹುದು" ಎಂದು ಹೇಳಿದರು.

"ಉತ್ತರ ಜಿಲ್ಲೆಗಳ ಬಿಜೆಪಿ ಸಂಸದರೇ ಏನು ಕೆಲಸ ಮಾಡಿದ್ದೀರಿ?"
ರಾಜೀವ್ ಬ್ಯಾನರ್ಜಿ ಮೇಲೆ ವಾಗ್ದಾಳಿ ಮುಂದುವರೆಸಿರುವ ಅವರು, ಅರಣ್ಯ ಇಲಾಖೆಯ ಬಣ ಸಹಾಯಕ ಹುದ್ದೆ ನೇಮಕಾತಿ ಕುರಿತು ಸರ್ಕಾರ ತನಿಖೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಉತ್ತರ ಜಿಲ್ಲೆಗಳಿಂದ ಆಯ್ಕೆಯಾದ ಹಲವು ಬಿಜೆಪಿ ಸಂಸದರಿದ್ದಾರೆ. ಆದರೂ ಅಲ್ಲಿನ ಜನರಿಗೆ ಏನೂ ಸೌಲಭ್ಯ ಒದಗಿಸಿಕೊಟ್ಟಿಲ್ಲ ಎಂದು ದೂರಿದ ಅವರು, ಇಲ್ಲಿ ಟೀ ಗಾರ್ಡನ್ ತೆರೆಯುತ್ತೇನೆ ಎಂದು ಆಶ್ವಾಸನೆ ಕೊಟ್ಟ ಬಿಜೆಪಿ ನಾಯಕರು ಈಗ ನಾಪತ್ತೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಾಥಾಗಿನ್ನೂ ಅನುಮತಿ ದೊರೆತಿಲ್ಲ
ರಾಜ್ಯದಲ್ಲಿ 25 ದಿನಗಳ ಅವಧಿ ಪರಿವರ್ತನಾ ರಥ ಯಾತ್ರೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಮಂಗಳವಾರ ತಿಳಿಸಿದ್ದಾರೆ. ಆದರೆ ಬಿಜೆಪಿಗೆ ರಾಜ್ಯದಲ್ಲಿ ಜಾಥಾ ನಡೆಸಲು ಅವಕಾಶ ನೀಡಲಾಗಿಲ್ಲ. ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸ್ಥಳೀಯ ಆಡಳಿತಗಳಿಂದ ಅನುಮತಿ ಪಡೆಯುವಂತೆ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಗಳ ಕಚೇರಿ ಸೂಚಿಸಿದೆ.

"ಗೇಮ್ ಚೇಂಜರ್ ಆಗುತ್ತದೆ ಈ ರಥಯಾತ್ರೆ"
ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಈ ರಥಯಾತ್ರೆಯು ರಾಜ್ಯದಲ್ಲಿ ಗೇಮ್ ಚೇಂಜರ್ ಆಗಲಿದೆ. ಈ ಜಾಥಾದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಂದವರೆಲ್ಲ ಸೇರಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಭರವಸೆ ವ್ಯಕ್ತಪಡಿಸಿದ್ದಾರೆ.
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ 294 ಸೀಟುಗಳಿಗೆ ಚುನಾವಣೆ ನಡೆಯುತ್ತಿದ್ದು, ಫೆಬ್ರುವರಿ ಹಾಗೂ ಮಾರ್ಚ್ ನಲ್ಲಿ ಕೇಸರಿ ಪಕ್ಷ ರಥಯಾತ್ರೆ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ನವದ್ವೀಪ್, ಕೂಚ್ ಬೇಹರ್, ಕಾಕದ್ವೀಪ್, ಜರ್ ಗ್ರಾಮ, ತಾರಾಪಿತ್ ನಲ್ಲಿ ರಥ ಯಾತ್ರೆ ನಡೆಯಲಿದೆ.












Click it and Unblock the Notifications