ಪಶ್ಚಿಮ ಬಂಗಾಳದಲ್ಲಿ ಮತ್ತೆ ಮತ್ತೆ ಮೊಳಗಿದ 'ಗೋಲಿ ಮಾರೋ' ಘೋಷಣೆ
ಕೋಲ್ಕತಾ, ಜನವರಿ 20: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮರ ತಾರಕಕ್ಕೇರುತ್ತಿದ್ದು, 'ಗೋಲಿ ಮಾರೋ'ದಂತಹ ಪ್ರಚೋದನಾಕಾರಿ ಘೋಷಣೆಗಳು ತೀವ್ರ ಗದ್ದಲ ಸೃಷ್ಟಿಸಿದೆ. ಸಮಾವೇಶವೊಂದರಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು 'ಬಂಗಾಳದ ದೇಶದ್ರೋಹಿಗಳಿಗೆ ಗುಂಡಿಕ್ಕಿ' ಎಂದು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಕೆಲವು ಗಂಟೆಗಳ ಬಳಿಕ ಬಿಜೆಪಿಯ ಸುವೇಂದು ಅಧಿಕಾರಿ ಆಯೋಜಿಸಿದ್ದ ಸಮಾವೇಶದಲ್ಲಿಯೂ 'ದೇಶದ್ರೋಗಿಗಳಿಗೆ ಗುಂಡು ಹೊಡೆಯಿರಿ' ಎಂಬ ಘೋಷಣೆ ಕೇಳಿಬಂದಿದೆ.
'ಟಿಎಂಸಿ ತನ್ನದು ಶಾಂತಿಯ ಸಮಾವೇಶ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅಲ್ಲಿ ವಿದ್ವಂಸಕ ಕೃತ್ಯ ಮತ್ತು ಬಿಜೆಪಿಯ ಬಾವುಟ ಹಾಗೂ ಪೋಸ್ಟರ್ಗಳನ್ನು ಹರಿದುಹಾಕುವ ದಾಂದಲೆ ನಡೆದಿದೆ. ದಕ್ಷಿಣ ಕೋಲ್ಕತಾದ 'ಶಾಂತಿ ಜಾಥಾ'ದಲ್ಲಿ 'ಗೋಲಿ ಮಾರೋ' ಎಂಬ ಘೋಷಣೆಗಳು ಕೇಳಿಬಂದಿವೆ. ಇದು ಪಿಶಿಯ (ಮಮತಾ ಬ್ಯಾನರ್ಜಿ) ಶಾಂತಿಯ ವ್ಯಾಖ್ಯಾನವೇ? ಸಿಟಿ ಆಫ್ ಜಾಯ್ಅನ್ನು ಟಿಎಂಸಿ ನೆಲಕಚ್ಚುವಂತೆ ಮಾಡುತ್ತಿರುವ ಬಗೆ ಇದು' ಎಂದು ರಾಜ್ಯ ಬಿಜೆಪಿ ಘಟಕ ವಿಡಿಯೋದೊಂದಿಗೆ ಟ್ವೀಟ್ ಮಾಡಿದೆ.
ಈ ಘಟನೆಯಿಂದ ಟಿಎಂಸಿ ಅಂತರ ಕಾಯ್ದುಕೊಂಡಿದೆ. ಕೆಲವು ಯುವ ಬೆಂಬಲಿಗರು ಅತಿಯಾದ ಉತ್ಸಾಹದಿಂದ ಹಾಗೆ ಕೂಗಿರಬಹುದು. ಆದರೆ ಅದನ್ನು ಪಕ್ಷವು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ತಿಳಿಸಿದ್ದಾರೆ. ಮುಂದೆ ಓದಿ.
|
ನಮಗೆ ಶಾಂತಿಯಲ್ಲಿ ನಂಬಿಕೆ
'ನಾವು ಇದಕ್ಕೆ ಬೆಂಬಲ ನೀಡುವುದಿಲ್ಲ. ಇದು ಬಿಜೆಪಿಯ ಕೇಂದ್ರ ಸಚಿವರೊಬ್ಬರು ಮಾಡಿದ್ದ ಘೋಷಣೆ. ಸಮಾವೇಶದಲ್ಲಿ ಕೂಗಿದ್ದು ನಿಜವಾದ ಟಿಎಂಸಿ ಬೆಂಬಲಿಗರೇ ಅಥವಾ ಹೊರಗಿನವರೇ ಎಂಬುದನ್ನು ಪತ್ತೆಹಚ್ಚುವಂತೆ ಸೂಚಿಸಿದ್ದೇನೆ. ನಮಗೆ ಶಾಂತಿಯಲ್ಲಿ ನಂಬಿಕೆ ಇದೆ' ಎಂದು ಟಿಎಂಸಿಯ ಸಚಿವ ಫರ್ಹಾಮ್ ಹಕಿಮ್ ಹೇಳಿದ್ದಾರೆ.

ಟಿಎಂಸಿ ದೇಶದ್ರೋಹಿಗಳಿಗೆ ಗುಂಡಿಕ್ಕಿ
ಬುಧವಾರ ಹೂಗ್ಲಿಯಲ್ಲಿ ಸುವೇಂದು ಅಧಿಕಾರಿ ನಡೆಸಿದ ಸಮಾವೇಶದಲ್ಲಿಯೂ 'ಗೋಲಿ ಮಾರೋ' ಎಂಬ ಘೋಷಣೆ ಕೇಳಿಬಂದಿದೆ. 'ಟಿಎಂಸಿಯ ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ' ಎಂದು ಬಿಜೆಪಿ ಕಾರ್ಯಕರ್ತರು ಕೂಗಿದ್ದಾರೆ. ಬಿಜೆಪಿ ಕೂಡ ಈ ಘಟನೆಯಿಂದ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸಿದೆ.

ಮಹಿಳೆಯರು ಆಯುಧ ಬಳಸಿ
ತಮ್ಮ ಕುಟುಂಬಗಳು ಯಾವುದೇ ರೀತಿಯ ದಾಳಿಗಳಿಂದ ಕಾಪಾಡಲು ಮಹಿಳೆಯರು ಹರಿತವಾದ ಆಯುಧಗಳನ್ನು ಬಳಸುವಂತೆ ಪಶ್ಚಿಮ ಬಂಗಾಳ ಮಹಿಳಾ ಮೋರ್ಚಾದ ಅಧ್ಯಕ್ಷೆ ಅಗ್ನಿಮಿತ್ರಾ ಪೌಲ್ ಹೇಳಿದ್ದಾರೆ. ಟಿಎಂಸಿ ಭಯೋತ್ಪಾದನಾ ಚಟುವಟಿಕೆಗಳನ್ನು ಶುರುಮಾಡಬಹುದು. ಹೀಗಾಗಿ ಜನರು ಯಾವ ಅಂಜಿಕೆಯಿಲ್ಲದೆ ಅವರಿಗೆ ಪ್ರತಿರೋಧ ತೋರಿಸಬೇಕು ಎಂದು ಕರೆ ನೀಡಿದ್ದಾರೆ.

ಒಂದೇ ನಾಣ್ಯದ ಎರಡು ಮುಖಗಳು
'ಟಿಎಂಸಿ ಮತ್ತು ಬಿಜೆಪಿ ಎರಡೂ ಒಂದೇ ಮುಖದ ನಾಣ್ಯಗಳಂತೆ. ಅವರ ರಾಜಕೀಯ ಒಂದೇ ರೀತಿ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಈ ಎರಡು ಪಕ್ಷಗಳ ಡಿಎನ್ಎ ನಡುವೆ ವ್ಯತ್ಯಾಸವಿಲ್ಲ. ಅನುರಾಗ್ ಠಾಕೂರ್, ಸಚಿವರಾಗಿ ಇದನ್ನೇ ಹೇಳಿದ್ದರು. ಆಗ ಬಿಜೆಪಿ ಅವರಿಗೆ ಛೀಮಾರಿ ಹಾಕಿರಲಿಲ್ಲ. ಅದನ್ನೇ ಕೋಲ್ಕತಾದಲ್ಲಿ ಟಿಎಂಸಿ ಕಾರ್ಯಕರ್ತರು ಪುನರುಚ್ಚರಿಸಿದ್ದಾರೆ' ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಟೀಕಿಸಿದ್ದಾರೆ.












Click it and Unblock the Notifications