ಪಶ್ಚಿಮ ಬಂಗಾಳಕ್ಕೆ ವಿಮಾನ ಸೇವೆ ಬೇಡ; ಮಮತಾ ಪತ್ರ
ಕೋಲ್ಕತ್ತಾ, ಮಾರ್ಚ್ 23 : ಪಶ್ಚಿಮ ಬಂಗಾಳಕ್ಕೆ ಬರುವ ವಿಮಾನಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೊರೊನಾ ಹರಡದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಸೋಮವಾರ ಈ ಕುರಿತು ಪತ್ರ ಬರೆದಿದ್ದಾರೆ. ಭಾರತದಲ್ಲಿ ಕೊರೊನಾ ಆತಂಕ ಉಂಟು ಮಾಡಿದ್ದು, ಈಗಾಗಲೇ 400 ಜನರಿಗೆ ಸೋಂಕು ತಗುಲಿದೆ.
"ಕೇಂದ್ರ ಸರ್ಕಾರ ಇನ್ನೂ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿರುವುದು ನಮಗೆ ಆತಂಕ ಉಂಟು ಮಾಡಿದೆ. ವಿಮಾನಗಳಲ್ಲಿ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡುವುದು ರಾಜ್ಯಕ್ಕೆ ದೊಡ್ಡ ಕೆಲಸವಾಗಿದೆ" ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಅಂತರರಾಜ್ಯ ಸಾರಿಗೆ ವ್ಯವಸ್ಥೆಯನ್ನು ಪಶ್ಚಿಮ ಬಂಗಾಳ ಈಗಾಗಲೇ ರದ್ದು ಮಾಡಿದೆ. ರಾಜ್ಯಕ್ಕೆ ವಿಮಾನ ಸಂಚಾರವನ್ನು ರದ್ದುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇದುವರೆಗೂ 7 ಕೊರೊನಾ ಪ್ರಕರಣಗಳು ದಾಖಲಾಗಿವೆ. ಭಾರತೀಯ ರೈಲ್ವೆ ಮಾರ್ಚ್ 31ರ ತನಕ ದೇಶಾದ್ಯಂತ ರೈಲು ಸೇವೆ ಸ್ಥಗಿತಗೊಳಿಸಿದ್ದು, ಪಶ್ಚಿಮ ಬಂಗಾಳದಲ್ಲಿಯೂ ಪ್ರಯಾಣಿಕರ ರೈಲು ಸಂಚಾರ ನಡೆಸುತ್ತಿಲ್ಲ, ಕೋಲ್ಕತ್ತಾದಲ್ಲಿ ಮೆಟ್ರೋ ಸಂಚಾರವೂ ಸ್ಥಗಿತಗೊಂಡಿದೆ.












Click it and Unblock the Notifications