'ಕೊರೊನಾ ಅಂತ್ಯವಾಗಿದೆ' ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ
ಕೋಲ್ಕತ್ತಾ, ಸೆ 11: "ಇಲ್ಲಿ ಸೇರಿರುವ ಜನಸ್ತೋಮವನ್ನು ನೋಡಿ ಖುಷಿಯಾಗುತ್ತಿದೆ. ಕೊರೊನಾ ವೈರಸ್ ಕಾಟ ಅಂತ್ಯವಾಗಿದೆ"ಎಂದು ಪಶ್ಚಿಮ ಬಂಗಾಳ ಘಟಕದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷದಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಈಗಿಂದಲೇ ತಯಾರಿಯನ್ನು ಮಾಡಿಕೊಂಡಿವೆ"ಎಂದು ಧನಿಯಾಖಾಲಿಯಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಘೋಷ್ ಹೇಳಿದ್ದಾರೆ.
"ರಾಜ್ಯದಲ್ಲಿ ಕೊರೊನಾ ಇಲ್ಲದಿದ್ದರೂ, ಲಾಕ್ ಡೌನ್ ಮಾಡಿ ಮಮತಾ ಸರಕಾರ ನಾಟಕವನ್ನು ಮಾಡುತ್ತಿದೆ. ಆ ಮೂಲಕ, ಜನರಿಗೆ ಮೋಸ ಮಾಡುತ್ತಿದ್ದಾರೆ"ಎಂದು ದಿಲೀಪ್ ಘೋಷ್ ಆಪಾದಿಸಿದ್ದಾರೆ.

"ತೃಣಮೂಲ ಕಾಂಗ್ರೆಸ್ಸಿಗೆ ಬಿಜೆಪಿ ಕಂಡರೆ ಭಯ. ಇಲ್ಲಿ ನೆರೆದಿರುವ ಜನಸ್ತೋಮವನ್ನು ನೋಡಿದರೆ, ಮಮತಾ ಬ್ಯಾನರ್ಜಿ ಮತ್ತು ಅವರ ಸಹೋದರರಿಗೆ ಭಯವಾಗುತ್ತದೆ" ಎಂದು ಘೋಷ್ ಲೇವಡಿ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45ಲಕ್ಷವನ್ನು ದಾಟಿದೆ. ದಿನವೊಂದಕ್ಕೆ ತೊಂಬತ್ತು ಸಾವಿರಕ್ಕೂ ಹೆಚ್ಚು ಹೊಸ ಸೋಂಕಿತರ ಪತ್ತೆಯಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದು, 3,700 ಜನರು ಸಾವನ್ನಪ್ಪಿದ್ದಾರೆ.
ಒಂದು ದಿನದ ಕೆಳಗೆ ಪ್ರಧಾನಿ ಮೋದಿಯವರು, "ಕೊರೊನಾವನ್ನು ಕಡೆಗಣಿಸಬೇಡಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಮರೆಯಬೇಡಿ, ಎಲ್ಲರೂ ಸರಕಾರದ ನಿಯಮವನ್ನು ಪಾಲಿಸಿ"ಎಂದು ಹೇಳಿದ್ದರು.
ಮೋದಿ ಹೇಳಿಕೆಯ ಒಂದೇ ದಿನದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಿಂದ ಕೊರೊನಾ ಅಂತ್ಯವಾಗಿದೆ ಎನ್ನುವ ಹೇಳಿಕೆ ಬಂದಿರುವುದು ವಿಪರ್ಯಾಸ.












Click it and Unblock the Notifications