ಪ್ರಧಾನಿ ಮೋದಿಗೆ ಬಂಗಾಳದ ಸಿಹಿ ಮಾವು ಕಳುಹಿಸಿದ ಸಿಎಂ ದೀದಿ
ನವದೆಹಲಿ, ಜು.01: ರಾಜಕೀಯವು ನಿಸ್ಸಂದೇಹವಾಗಿ ಸಿಹಿ ಕಹಿ ಎರಡರ ಮಿಶ್ರಣ. ರಾಜಕಾರಣಿಗಳು ಒಮ್ಮೆ ಪರಸ್ಪರ ತೀವ್ರ ಕಠೋರ ವಾಗ್ದಾಳಿ ನಡೆಸಿದ್ದರೂ, ಮತ್ತೊಮ್ಮೆ ಭೇಟಿಯಾದಾಗ ನಗುಮೊಗದೊಂದಿಗೆ ಮಾತನಾಡುತ್ತಾರೆ. ಈಗ ಈ ಮಾವಿನ ಸೀಸನ್ನಲ್ಲಿ ರಾಜಕಾರಣಿಗಳು ತಮ್ಮ ರಾಜಕೀಯ ಸಂಬಂಧವನ್ನು ಸಿಹಿಯಾಗಿಸುವ ಪ್ರಯತ್ನದಲ್ಲಿದ್ದಾರೆ.
ಪರಸ್ಪರ ಪ್ರತಿಸ್ಪರ್ಧಿಗಳಾಗಿ ವಾಕ್ಸಮರ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನ ಮಂತ್ರಿ ನಡುವಿನ ವೈಮನಸ್ಸು ಮಮತಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರವೂ ಮುಂದುವರಿದಿತ್ತು.
ಆದರೆ ಈಗ ಮಾವಿನ ಸೀಸನ್ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಸಿಹಿ ಮಾವನ್ನು ಕಳುಹಿಸಿ ಈ ಋತುಮಾನದ ಶುಭಾಶಯ ಕೋರಿದ್ದಾರೆ.

ಮಮತಾ ಕಳೆದ ವಾರ ಬಂಗಾಳದ ಮಾವಿನ ಪ್ರಭೇದಗಳಾದ ಹಿಮ್ಸಾಗರ್, ಮಾಲ್ಡಾ ಮತ್ತು ಲಕ್ಷ್ಮನ್ಭೋಗ್ ಅನ್ನು ಮೋದಿಗೆ ಕಳುಹಿಸಿದ್ದಾರೆ. ಹಾಗೆಯೇ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ವಿ.ಪಿ.ಎಂ.ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಷಾ ಗೂ ಸಿಹಿ ಮಾವಿನ ಹಣ್ಣನ್ನು ಕಳುಹಿಸಿದ್ದಾರೆ ದೀದಿ. ಇನ್ನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೂ ಮಾವಿನಹಣ್ಣನ್ನು ಕಳುಹಿಸಿದ್ದಾರೆ.
ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ, ನಾರದ ಹಗರಣ ಪ್ರಕರಣಗಳು, ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯರ ಹಠಾತ್ ವರ್ಗಾವಣೆ ಮತ್ತು ರಾಜ್ಯಪಾಲ ಜಗದೀಪ್ ಧಂಕರ್ ಗರಂ ಆದ ಘಟನೆಗಳು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೂ ಮೊದಲು ಬ್ಯಾನರ್ಜಿಯ ಮಾವಿನ ರಾಜತಾಂತ್ರಿಕತೆಯು ರಾಜ್ಯ ಮತ್ತು ಕೇಂದ್ರದ ನಡುವಿನ ಕಹಿಯನ್ನು ಸಿಹಿಗೊಳಿಸಲು ಸಹಾಯ ಮಾಡುತ್ತದೆಯೇ ಕಾದು ನೋಡಬೇಕಿದೆ.
ಇನ್ನು ಬ್ಯಾನರ್ಜಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಿಂದಲೂ ಅಂದರೆ 2011 ರಲ್ಲಿ ಪ್ರಾರಂಭಿಸಿದ ಈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಪ್ರತಿ ವರ್ಷ ಸಿಹಿಯನ್ನು ಪ್ರಧಾನಿ ಹಾಗೂ ಇತತರಿಗೆ ಬ್ಯಾನರ್ಜಿ ಮಾವು ಕಳುಹಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications