ಪಶ್ಚಿಮ ಬಂಗಾಳದಲ್ಲಿ ದೀದಿ ವಿರುದ್ಧದ ಬಿಜೆಪಿ ಅಭ್ಯರ್ಥಿ ಯಾರು?
ಕೋಲ್ಕತ್ತಾ, ಜನವರಿ.20: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಅಭ್ಯರ್ಥಿ ಯಾರು ಎಂಬುದು ಬಹುತೇಕ ನಿರ್ಧಾರವಾಗಿದೆ. ದೀದಿ ವಿರುದ್ಧ ಸುವೆಂದು ಅಧಿಕಾರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಅಣಿಯಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸವಾಲನ್ನು ಸ್ವೀಕರಿಸಿದ್ದ ದೀದಿ ಅದೇ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆ ಇದೇ ಕ್ಷೇತ್ರದಲ್ಲಿ ಚಿರಪರಿಚಿತ ಎನಿಸಿರುವ ಸುವೇಂದು ಅಧಿಕಾರಿಯವರನ್ನು ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ. ನಂದಿಗ್ರಾಮ್ ನಿಂದ ಸ್ಪರ್ಧಿಸಲು ಸುವೇಂದು ಅಧಿಕಾರಿಗಿಂತ ಯೋಗ್ಯ ಅಭ್ಯರ್ಥಿ ಮತ್ತೊಬ್ಬರಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.
ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಆಪ್ತ ವಲಯದಲ್ಲಿ ಇದೇ ಸುವೆಂದು ಅಧಿಕಾರಿ ಗುರುತಿಸಿಕೊಂಡಿದ್ದರು. ಇತ್ತೀಚಿಗಷ್ಟೇ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ದೀದಿಗೆ ಸವಾಲು ಹಾಕಿದ್ದ ಸುವೇಂದು ಅಧಿಕಾರಿ:
ಪಶ್ಚಿಮ ಬಂಗಾಳದ ಪುರ್ಬಾ ಮಿದ್ನಾಪುರ್ ದ ಖೇಜುರಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಸುವೇಂದು ಅಧಿಕಾರಿ, ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿರುವುದು ಸೂಕ್ತವಲ್ಲ ಎಂದು ಕಿಡಿ ಕಾರಿದ್ದರು. ಸಿಎಂ ಮಮತಾ ಬ್ಯಾನರ್ಜಿಯವರು ಧೈರ್ಯವಿದ್ದಲ್ಲಿ ತಮ್ಮ ಭದ್ರಕೋಟೆ ಎನಿಸಿರುವ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಸುವೇಂದು ಅಧಿಕಾರಿ ಸವಾಲು ಹಾಕಿದ್ದರು. ನಂದಿಗ್ರಾಮ್ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಸುವೇಂದು ಅಧಿಕಾರಿ, ಈ ಹಿಂದೆ ಟಿಎಂಸಿ ಸರ್ಕಾರ ರಚನೆಯಲ್ಲೂ ಕೂಡ ಪ್ರಮುಖ ಪಾತ್ರ ವಹಿಸಿದ್ದರು.
ಎರಡು ಕ್ಷೇತ್ರಗಳಿಂದ ದೀದಿ ಸ್ಪರ್ಧೆ:
ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಂತೆ ಮಮತಾ ಬ್ಯಾನರ್ಜಿಯವರು ಮಹತ್ವದ ಘೋಷಣೆ ಮಾಡಿದ್ದರು. ಜನವರಿ.18ರ ಸೋಮವಾರ ನಂದಿಗ್ರಾಮ್ ಮತ್ತು ಭಾವನಿಪೋರ್ ನಿಂದಲೂ ಸ್ಪರ್ಧಿಸುವುದಾಗಿ ಹೇಳಿದ್ದರು. "ನಾನು ಸಾಧ್ಯವಾದಲ್ಲಿ ನಂದಿಗ್ರಾಮ್ ಮತ್ತು ಭಾವನಿಪೋರ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತೇವೆ. ನಂದಿಗ್ರಾಮ್ ನನ್ನ ಹಿರಿಯ ಸಹೋದರಿಯಾದರೆ, ಭಾವನಿಪೋರ್ ನನ್ನ ಕಿರಿಯ ಸಹೋದರಿಯಾಗಿದೆ. ಒಂದು ವೇಳೆ ಭಾವನಿಪೋರ್ ನಿಂದ ಸ್ಪರ್ಧಿಸುವುದಕ್ಕೆ ಸಾಧ್ಯವಾಗದಿದ್ದರೆ ಒಬ್ಬ ಪ್ರಬಲ ಅಭ್ಯರ್ಥಿಯನ್ನು ಆ ಕ್ಷೇತ್ರಕ್ಕೆ ಗೊತ್ತುಪಡಿಸಲಾಗುತ್ತದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.












Click it and Unblock the Notifications