ಅಮಿತ್ ಶಾ ಭೇಟಿ ನಂತರ ಜನಪದ ಕಲಾವಿದನ ಅಸಮಾಧಾನ
ಕೋಲ್ಕತ್ತಾ, ಡಿಸೆಂಬರ್ 24: "ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಗೃಹ ಸಚಿವ ಅಮಿತ್ ಶಾ ನನ್ನ ಮನೆಗೆ ಭೇಟಿ ನೀಡಿದ್ದರು. ಆದರೆ ಅವರನ್ನು ಮಾತನಾಡಿಸುವ ಅವಕಾಶವೇ ಸಿಗಲಿಲ್ಲ. ಬಿಜೆಪಿಯಿಂದ ನನಗೆ ಯಾವುದೇ ಸಹಾಯ ಸಿಗಲಿಲ್ಲ" ಎಂದು ದೂರಿದ್ದಾರೆ ಬಂಗಾಳದ ಜನಪದ ಗಾಯಕ ಬಸುದೇಬ್ ದಾಸ್ ಬೌಲ್.
ಈಚೆಗೆ ಎರಡು ದಿನದ ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೋಲ್ಪುರದಲ್ಲಿನ ಜನಪದ ಗಾಯಕ ಬಸುದೇಬ್ ಮನೆಗೆ ಭೇಟಿ ನೀಡಿದ್ದರು. ಅಲ್ಲೇ ಭೋಜನ ಮಾಡಿ ನಂತರ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದರು. ಆ ದಿನ ದಾಸ್, ಅಮಿತ್ ಶಾಗಾಗಿ ಕೆಲ ಜನಪದ ಹಾಡುಗಳನ್ನೂ ಹಾಡಿದ್ದರು. ಇದೀಗ ಗಾಯಕ ದಾಸ್, ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಿರ್ಬುಂ ಜಿಲ್ಲಾ ಮುಖ್ಯಸ್ಥ, ತೃಣಮೂಲ ಕಾಂಗ್ರೆಸ್ ನ ಅನುಬ್ರತಾ ಮೊಂಡಲ್ ಭೇಟಿ ನಂತರ ದಾಸ್ ಈ ಹೇಳಿಕೆ ನೀಡಿದ್ದಾರೆ.

"ಅಮಿತ್ ಶಾ ನನ್ನ ಮನೆಗೆ ಬಂದಿದ್ದರು. ಆದರೆ ಅವರ ಜೊತೆ ಮಾತನಾಡುವ ಅವಕಾಶವೇ ಸಿಗಲಿಲ್ಲ. ನನಗೆ ಬಿಜೆಪಿಯಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಅಮಿತ್ ಶಾ ಭೇಟಿ ನಂತರ ಬಿಜೆಪಿಯಿಂದ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ನನ್ನ ಮಗಳ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಗೃಹ ಸಚಿವರಲ್ಲಿ ಮನವಿ ಮಾಡಬೇಕು ಎಂದುಕೊಂಡಿದ್ದೆ. ಅದೂ ಸಾಧ್ಯವಾಗಲಿಲ್ಲ" ಎಂದಿದ್ದಾರೆ.
ಡಿ.29 ರಂದು ಬೋಲ್ಪುರದಲ್ಲಿ ನಡೆಯಲಿರುವ ಸಿಎಂ ಮಮತಾ ಬ್ಯಾನರ್ಜಿ ಪರ ಮೆರವಣಿಗೆಯಲ್ಲಿ ತಾವು ಪ್ರದರ್ಶನ ನಿಡುವುದಾಗಿಯೂ ತಿಳಿಸಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೊಂಡಲ್, "ಅಮಿತ್ ಶಾ, ದಾಸ್ ಮನೆಗೆ ನಾಟಕವಾಡಲು ಬಂದಿದ್ದರು. ಬೇರೆ ಉದ್ದೇಶಗಳಿಗೆ ಇಲ್ಲಿ ಭೇಟಿ ನೀಡದರಷ್ಟೆ. ದಾಸ್ ಮಗಳ ಉನ್ನತ ಶಿಕ್ಷಣದ ಎಲ್ಲಾ ವೆಚ್ಚವನ್ನು ಭರಿಸಲು ಟಿಎಂಸಿ ನಿರ್ಧರಿಸಿದೆ" ಎಂದು ಹೇಳಿದ್ದಾರೆ.
ಟಿಎಂಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ, "ಗಾಯಕ ದಾಸ್ ಕುಟುಂಬದ ಬಗ್ಗೆ ಹತ್ತು ವರ್ಷಗಳಿಂದ ಇಲ್ಲದ ಕಾಳಜಿ ಈಗೇಕೆ ಬಂತು? ಇದುವರೆಗೂ ಟಿಎಂಸಿಗೆ ದಾಸ್ ಕುಟುಂಬ ಗಮನಿಸಲು ಸಮಯವಿರಲಿಲ್ಲವೇ? ಈಗ, ಅಮಿತ್ ಶಾ ಭೇಟಿ ನಂತರ ದಾಸ್ ಕುಟುಂಬಕ್ಕೆ ನೆರವಾಗಲು ಮುಂದಾಗಿದೆ. ಇದರರ್ಥ, ನೆರವಿನ ಅಗತ್ಯವಿರುವ ಕುಟುಂಬವನ್ನು ಗುರುತಿಸುವಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಎಂಬುದು" ಎಂದು ತಿರುಗೇಟು ನೀಡಿದ್ದಾರೆ.











Click it and Unblock the Notifications