ಅಮಿತ್ ಶಾ ದೊಡ್ಡ ಪಪ್ಪು ಎಂದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ
ಕೋಲ್ಕತ್ತಾ, ಸೆಪ್ಟೆಂಬರ್ 3: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಲ್ಲಿದ್ದಲು ಕಳ್ಳಸಾಗಣೆ ತನಿಖೆಯ ಭಾಗವಾಗಿ ಸುಮಾರು ಎಂಟು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೋಲ್ಕತ್ತಾದಲ್ಲಿ ವಿಚಾರಣೆ ನಡೆಸಿದರು. ಮತ್ತೊಂದು ಪಕ್ಷದ ನಾಯಕನನ್ನು ಪಪ್ಪು ಎಂದು ಬಿಜೆಪಿ ಹೇಳಿಕೊಂಡಿದೆ, ಆದರೆ ವಾಸ್ತವದಲ್ಲಿ ಅಮಿತ್ ಶಾ ಅವರೇ ದೊಡ್ಡ ಪಪ್ಪು, ಕೇಂದ್ರೀಯ ಸಂಸ್ಥೆಗಳನ್ನು ಬಳಸದೆ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಂಗಾಳದಲ್ಲಿ ಕಲ್ಲಿದ್ದಲು ಮತ್ತು ಜಾನುವಾರು ಕಳ್ಳಸಾಗಣೆಗೆ ಅಮಿತ್ ಶಾ ನೇರ ಹೊಣೆಗಾರರಾರು ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. "ಸಿಐಎಸ್ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದೆ. ಗಡಿಯಲ್ಲಿ ಗೋವು ಕಳ್ಳಸಾಗಣೆ ನಡೆದಾಗ ಬಿಎಸ್ಎಫ್ (ಗಡಿ ಭದ್ರತಾ ಪಡೆ) ಏನು ಮಾಡುತ್ತಿತ್ತು.? ಇದು ಗೋವು ಸಾಗಾಣಿಕೆಯ ಭ್ರಷ್ಟಾಚಾರವಲ್ಲ, ಗೃಹ ಸಚಿವರ ಭ್ರಷ್ಟಾಚಾರ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಅವರೇ ಗೋಕಳ್ಳರು. ಗೋ ಕಳ್ಳತನದ ತನಿಖೆಯನ್ನು ಗೋ ಕಳ್ಳರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಪರಾಧ ಸಾಬೀತಾದರೆ ಗಲ್ಲಿಗೇರಲು ಸಿದ್ಧ
ವಿಚಾರಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, "ನಾನು ಅಕ್ರಮವಾಗಿ ಐದು ಪೈಸೆ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ, ನಾನು ಗಲ್ಲಿಗೇರಲು ಸಿದ್ಧನಿದ್ದೇನೆ. ನಾನು 30 ಬಾರಿ ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ ಮತ್ತು ನಾನು ಬಂಗಾಳದ ಜನರ ಮುಂದೆ ತಲೆಬಾಗಲು ಸಿದ್ಧನಿದ್ದೇನೆ. ಆದರೆ ಬಿಜೆಪಿಯ ಮುಂದೆ ಎಂದಿಗೂ ತಲೆಬಾಗುವುದಿಲ್ಲ" ಎಂದು ಹೇಳಿದರು.
ಅಭಿಷೇಕ್ ಬ್ಯಾನರ್ಜಿರನ್ನು ಇಡಿ ವಿಚಾರಣೆಗೊಳಪಡಿಸುತ್ತಿರುವುದು ಇದು ಮೂರನೇ ಬಾರಿ. ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ 41 ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) 2022ರ ಜುಲೈನಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು, ಆದರೆ ಅದರಲ್ಲಿ ಅಭಿಷೇಕ್ ಬ್ಯಾನರ್ಜಿ ಹೆಸರಿಲ್ಲ.

ಅಮಿತ್ ಶಾ ತಮ್ಮ ಮಗನಿಗೆ ದೇಶಭಕ್ತಿ ಕಲಿಸಲಿ
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿದ ನಂತರ ಭಾರತದ ಧ್ವಜವನ್ನು ಹಿಡಿದಿಕೊಳ್ಳಲು ಅಮಿತ್ ಶಾ ಪುತ್ರ ಬಿಸಿಸಿಐ ಸೆಕ್ರೆಟರಿ ಜಯ್ ಶಾ ಭಾರತದ ರಾಷ್ಟ್ರಧ್ವಜವನ್ನು ಹಿಡಿಯಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದ್ದು, ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
ಅಭಿಷೇಕ್ ಬ್ಯಾನರ್ಜಿ ಜಯ್ ಶಾ ವಿರುದ್ದ ಟೀಕೆ ವ್ಯಕ್ತಪಡಿಸಿದ್ದು, ಬಂಗಾಳದ ಜನರಿಗೆ ದೇಶಭಕ್ತಿಯನ್ನು ಕಲಿಸಲು ಪ್ರಯತ್ನಿಸುವ ಮೊದಲು ಅಮಿತ್ ಶಾ ಮೊದಲು ತಮ್ಮ ಮಗನಿಗೆ ದೇಶಭಕ್ತಿಯನ್ನು ಕಲಿಸಲಿ. ಇಡಿ ಮತ್ತು ಸಿಬಿಐ ಮೂಲಕ ನನ್ನನ್ನು ಹೆದರಿಸುತ್ತಾರೆ. ನಾನು ಅವರ ಮಗನನ್ನು ಟೀಕಿಸಿದ್ದರಿಂದ ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ನಾಯಕರ ವಿರುದ್ಧ ತನಿಖೆ ಯಾಕಿಲ್ಲ?
"ಸಿಬಿಐ ಇಲ್ಲಿಯವರೆಗೆ ನನ್ನ ಹೆಂಡತಿ ಮತ್ತು ನನ್ನನ್ನು ಏಳು ಬಾರಿ ಪ್ರಶ್ನಿಸಿದ್ದಾರೆ, ಆದರೆ ಫಲಿತಾಂಶ ಶೂನ್ಯವಾಗಿದೆ. ಆದರೂ, ಲಂಚ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕ್ಯಾಮರಾದಲ್ಲಿ ಸಿಕ್ಕಿಬಿದ್ದ ಬಿಜೆಪಿ ನಾಯಕರನ್ನು ಕೇಂದ್ರ ಏಜೆನ್ಸಿಗಳು ತನಿಖೆಗಾಗಿ ಎಂದಿಗೂ ಕರೆದಿಲ್ಲ." ಎಂದು ಹೇಳಿದರು.
ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೆಂದು ಅಧಿಕಾರಿ, ಕಲ್ಲಿದ್ದಲು ಹಗರಣದ ಆರೋಪಿಗಳಲ್ಲಿ ಒಬ್ಬರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಈಗ ನಾಪತ್ತೆಯಾಗಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಸುವೆಂದು ಅಧಿಕಾರಿ ಭಾಗಿಯಾಗಿರುವ ಬಗ್ಗೆ ಸಾಬೀತುಪಡಿಸಲು ಆಡಿಯೊ ಕ್ಲಿಪ್ ಹೊಂದಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರದ ವಿರುದ್ಧ ಟಿಎಂಸಿ ಆರೋಪ
ಅಭಿಷೇಕ್ ಬ್ಯಾನರ್ಜಿ ಬೆಳಗ್ಗೆ10.30 ಕ್ಕೆ ಸಾಲ್ಟ್ ಲೇಕ್ನಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳ (ಸಿಜಿಒ) ಕಾಂಪ್ಲೆಕ್ಸ್ಗೆ ಆಗಮಿಸುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ದೂರಿದ ಕ್ಲಿಪ್ಗಳನ್ನು ಟಿಎಂಸಿ ಮುಖಂಡರು ಹಂಚಿಕೊಂಡಿದ್ದಾರೆ.
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸಿಗುತ್ತದೆ ಎಂಬ ಭಯದಿಂದ ಬಿಜೆಪಿಯು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಆಡಳಿತ ಪಕ್ಷದ ನಾಯಕರಿಗೆ ಕಿರುಕುಳ ನೀಡಿ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದೆ.












Click it and Unblock the Notifications