ಕೋಲ್ಕತ್ತಾ; ಎಬಿವಿಪಿ ಪ್ರತಿಭಟನೆ, ಪೊಲೀಸರ ಲಾಠಿ ಚಾರ್ಜ್
ಕೋಲ್ಕತ್ತಾ ಮೇ 18: ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಲಾಠಿ ಪ್ರಹಾರ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.
ಬಿಕಾಶ್ ಭವನದ ಬಳಿಯ ಭದ್ರತಾ ಸರಹದ್ದು ದಾಟಿ ಪ್ರತಿಭಟನೆಗೆ ಯತ್ನಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರನ್ನು ಚದುರಿಸಲು ಬುಧವಾರ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ನೂರಾರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇಲಾಖೆಯ ಪ್ರಧಾನ ಕಚೇರಿಯಾದ ಬಿಕಾಶ್ ಭವನದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರು. ಈ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಬಿದನ್ನಗರ ಪೊಲೀಸ್ ಕಮಿಷನರೇಟ್ನ ಅಧಿಕಾರಿಯೊಬ್ಬರು ಪ್ರಯತ್ನಿಸಿದ್ದಾರೆ.
ಆದರೆ ಪ್ರಯೋಜನವಾಗದ ಹಿನ್ನಲೆಯಲ್ಲಿ ಪ್ರತಿಭಟನಾಕಾರರನ್ನು ತಡೆಯಲಾಯಿತು. ಈ ವೇಳೆ ಪೊಲಿಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ದಾದ ಉಂಟಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ದಾರಿ ಮಾಡಿತು. ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮತ್ತು ಜಲಫಿರಂಗಿಗಳನ್ನು ಬಳಕೆ ಮಾಡುವ ಮೂಲಕ ಉದ್ರಿಕ್ತ ಪ್ರಭಟನಾಕಾರರನ್ನು ಚದುರಿಸಿದ್ದಾರೆ.
ಈ ವೇಳೆ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಸಪ್ತರ್ಷಿ ಸರ್ಕಾರ್, "ನಮ್ಮ ನಾಲ್ವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಮತ್ತು ಕನಿಷ್ಠ ಆರು ಮಂದಿ ಪೊಲೀಸ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.
ಎಬಿವಿಪಿ ಸದಸ್ಯರು ನೇಮಕಾತಿಯಲ್ಲಿನ ಅಕ್ರಮಗಳ ವಿರುದ್ಧ ಉನ್ನತ ಶಿಕ್ಷಣ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ಬಯಸಿದ್ದಾರೆ ಎಂದು ಸರ್ಕಾರ್ ಹೇಳಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೇ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಇದು ಒಳಸಂಚಿನ ಪ್ರತೀಕ ಎಂದು ದೂರಿದ್ದಾರೆ. "ಪೊಲೀಸರ ಲಾಠಿ ಚಾರ್ಜ್ ನಾವು ಊಹಿಸಿರಲಿಲ್ಲ" ಎಂದು ಅವರು ಹೇಳಿದ್ದಾರೆ.