ಪಂಜಾಬ್ ಗೆದ್ದು ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ
ಕೋಲ್ಕತ್ತಾ, ಮಾರ್ಚ್ 14: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಆಮ್ ಆದ್ಮಿ ಪಕ್ಷವು ತನ್ನ ರಾಜಕೀಯದ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ದೆಹಲಿಯ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಈಗ ಪಕ್ಷದ ನೆಲೆಯನ್ನು ದೇಶದ ವಿವಿಧ ಭಾಗಗಳಲ್ಲಿ ಹರಡಲು ಮುಂದಾಗಿದೆ. ಪಶ್ಚಿಮ ಬಂಗಾಳದಲ್ಲಿ 2023ರ ಪಂಚಾಯತ್ ಚುನಾವಣೆಯಲ್ಲಿ ಆಪ್ ಸ್ಪರ್ಧಿಸಲಿದೆ ಎಂದು ಎಎಪಿ ರಾಜ್ಯ ಉಸ್ತುವಾರಿ ಸಂಜೋಯ್ ಬಸು ಸೋಮವಾರ ಘೋಷಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸ್ಥಳೀಯ ಘಟಕ ಈಗಾಗಲೇ ಪ್ರಚಾರ ಆರಂಭಿಸಿದೆ. ಎಎಪಿ ಮಾರ್ಚ್ 13ರಂದು ಕೋಲ್ಕತ್ತಾದಲ್ಲಿ ಸಮಾವೇಶವನ್ನು ನಡೆಸಿತು ಎಂದು ಬಸು ಹೇಳಿದರು. ಆದರೆ ಇದರ ಮಧ್ಯೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ ಅಂಶವಾಗಿದೆ.
"ಕಾಂಗ್ರೆಸ್ನಲ್ಲಿ 700 ಶಾಸಕರಿದ್ದಾರೆ"; ಮಮತಾ ಬ್ಯಾನರ್ಜಿಗೆ ಅಧೀರ್ ಉತ್ತರ
ಪಂಜಾಬ್ ಜನತೆಗೆ ಭಗವಂತ್ ಮಾನ್ ಧನ್ಯವಾದ:
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದಿದೆ. ತಮ್ಮ ವಿಜಯದ ಭಾಷಣದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಗವಂತ್ ಮಾನ್ ಪಂಜಾಬ್ ಜನತೆಗೆ ತಮ್ಮ ಮತ್ತು ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಭಗವಂತ್ ಮಾನ್ ತೀವ್ರ ವಾಗ್ದಾಳಿ ನಡೆಸಿದರು. ಈ ಹಿಂದೆ, ರಾಜ್ಯ ಸರ್ಕಾರವನ್ನು ಅರಮನೆಗಳಿಂದ ನಡೆಸಲಾಗುತ್ತಿತ್ತು, ಆದರೆ ಈಗ ನಾವು ಸರ್ಕಾರವನ್ನು ಹಳ್ಳಿಗಳಿಗೆ ತಂದಿದ್ದೇವೆ" ಎಂದು ಹೇಳಿದರು. ಈಗ, ರಾಜ್ಯ ಸರ್ಕಾರವು ಹಳ್ಳಿ, ಮೊಹಲ್ಲಾಗಳು ಮತ್ತು ನಗರಗಳಿಂದ ನಡೆಸುತ್ತದೆ ಎಂದು ಮಾನ್ ತಿಳಿಸಿದ್ದರು.
ಪಂಜಾಬ್ ಚುನಾವಣೆಯಲ್ಲಿ ಮತದಾರರ ತೀರ್ಪು:
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಭರ್ಜರಿ ಗೆಲುವು ದಾಖಲಿಸಿದೆ. ಆಡಳಿತಾರೂಢ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿರೋಮಣಿ ಅಕಾಲಿದಳ (ಎಸ್ಎಡಿ) ಕೇವಲ ಮೂರು ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿಯು ಎರಡು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದಕ್ಕಷ್ಟೇ ಸಾಧ್ಯವಾಗಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 1 ಹಾಗೂ ಸ್ವತಂತ್ರ್ಯ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.