ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

ಕೋಲ್ಕತ್ತಾ, ಆಗಸ್ಟ್ 2: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣ ಸಾಕಷ್ಟು ಸದ್ದು ಮಾಡುತ್ತಿದೆ. ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಟಿಎಂಸಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದರೂ ಇನ್ನೂ ಅವರ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಇ.ಡಿ ವಶದಲ್ಲಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದು ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ.

ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಆರೋಗ್ಯ ತಪಾಸಣೆಗಾಗಿ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದಾಗ ಮಹಿಳೆಯೊಬ್ಬರು ತಮ್ಮ ಚಪ್ಪಲಿಯನ್ನು ಎಸೆದಿದ್ದಾರೆ. ಪಾರ್ಥ ಚಟರ್ಜಿ ಅಷ್ಟರಲ್ಲಾಗಲೇ ವಾಹನ ಹತ್ತಿ ಅಲ್ಲಿಂದ ಹೊರಡುವ ವೇಳೆ ಅವರ ಮೇಲೆ ಚಪ್ಪಲಿ ಎಸೆದಿದ್ದು, ವಾಹನದ ಕಿಟಕಿಗೆ ಬಡಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಚಪ್ಪಲಿ ಎಸೆದಿರುವ ಮಹಿಳೆಯ ಗುರುತು ಪತ್ತೆಯಾಗಿದ್ದು, ದಕ್ಷಿಣ 24 ಪರಗಣ ಜಿಲ್ಲೆಯ ಅಮ್ಟಾಲಾ ನಿವಾಸಿ ಶುಭ್ರ ಘೋರುಯಿ ಎಂದು ತಿಳಿದು ಬಂದಿದೆ. ಸಂಬಂಧಿಕರಿಗೆ ಔ‍ಷಧಿ ಖರೀದಿಸಲು ಅವರು ಆಸ್ಪತ್ರೆಗೆ ಬಂದಿದ್ದರು.

 ವಂಚಕನಿಗೆ ವಿಐಪಿ ಸೌಲಭ್ಯವೇಕೆ ಎಂದು ಆಕ್ರೋಶ

ವಂಚಕನಿಗೆ ವಿಐಪಿ ಸೌಲಭ್ಯವೇಕೆ ಎಂದು ಆಕ್ರೋಶ

ತಾನು ಯಾಕೆ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದೆ ಎಂದು ಶುಭ್ರ ಘೋರುಯಿ ತಿಳಿಸಿದ್ದಾರೆ. ಪಾರ್ಥ ಚಟರ್ಜಿಯನ್ನು ವಿಐಪಿಯಂತೆ ನಡೆಸಿಕೊಳ್ಳುವುದನ್ನು ನೋಡಿ ನನ್ನ ತಾಳ್ಮೆ ಕಳೆದುಕೊಂಡೆ, ಅದಕ್ಕೆ ಚಪ್ಪಲಿ ಎಸೆದೆ ಎಂದು ಹೇಳಿದ್ದಾರೆ.

"ಸಾವಿರಾರು ಬಡವರಿಗೆ ವಂಚಿಸಿ ಕೋಟಿಗಟ್ಟಲೆ ಆಸ್ತಿ, ಚಿನ್ನ ಖರೀದಿಸಿದ ವ್ಯಕ್ತಿಯನ್ನು ಹವಾನಿಯಂತ್ರಿತ ಕಾರಿನಲ್ಲಿ ಆಸ್ಪತ್ರೆಗೆ ಕರೆತರುವುದು ಹೇಗೆ? ಅವನ ಕುತ್ತಿಗೆಗೆ ಹಗ್ಗವನ್ನು ಬಿಗಿಯಾಗಿ ಎಳೆದುಕೊಂಡು ಹೋಗಬೇಕು. ನಾನು ಅವನ ಮೇಲೆ ನನ್ನ ಚಪ್ಪಲಿಯನ್ನು ಏಕೆ ಎಸೆದಿದ್ದೇನೆ ಎಂದು ನೀವು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವಾಗಿದೆ. ಚಪ್ಪಲಿ ಪಾರ್ಥ ಚಟರ್ಜಿಯ ತಲೆಯ ಮೇಲೆ ಬಿದ್ದಿದ್ದರೆ ಸಂತೋಷವಾಗುತ್ತಿತ್ತು" ಎಂದು ಮಹಿಳೆ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದರು.

ಗಲಿಬಿಲಿಯಲ್ಲಿ ತನ್ನ ಇನ್ನೊಂದು ಚಪ್ಪಲಿಯನ್ನೂ ಕಳೆದುಕೊಂಡ ಶುಭ್ರ ಘೋರುಯಿ, ಬರಿಗಾಲಿನಲ್ಲಿ ಮನೆಗೆ ವಾಪಸ್‌ ಹೋಗಿದ್ದಾರೆ.

 ಪಾರ್ಥ ಚಟರ್ಜಿಗೆ ಶಿಕ್ಷೆ ವಿಧಿಸಲು ಆಗ್ರಹ

ಪಾರ್ಥ ಚಟರ್ಜಿಗೆ ಶಿಕ್ಷೆ ವಿಧಿಸಲು ಆಗ್ರಹ

ಕಲ್ಕತ್ತಾ ಹೈಕೋರ್ಟ್ ತನಿಖೆಗೆ ಆದೇಶಿಸಿದ ಉದ್ಯೋಗ ಹಗರಣದಲ್ಲಿ ಪಾರ್ಥ ಚಟರ್ಜಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಹಲವಾರು ಮೆರವಣಿಗೆ, ಪ್ರತಿಭಟನೆಗಳನ್ನು ನಡೆಸಿದ್ದರೂ, ಸಾಮಾನ್ಯ ನಾಗರಿಕರ ಆಕ್ರೋಶ ವ್ಯಕ್ತಪಡಿಸಿರುವುದು ಇದೇ ಮೊದಲು.
"ಅವನ ಮೇಲೆ ಎರಡೂ ಚಪ್ಪಲಿಗಳನ್ನು ಎಸೆಯಲು ಬಯಸುತ್ತೇನೆ, ನಾನು ಬರಿಗಾಲಿನಲ್ಲೇ ಮನೆಗೆ ಹೋಗುತ್ತೇನೆ ಎಂದು" ಶುಭ್ರ ಘೋರುಯಿ ಹೇಳಿದ್ದಾರೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಹಾಜರಿದ್ದರೂ, ಚಪ್ಪಲಿ ಯಾರಿಗೂ ತಾಗದ ಕಾರಣ ಘೋರುಯಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

 ಬಯಲಾದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣ

ಬಯಲಾದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣ

ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ 2014 ಮತ್ತು 2021 ರ ನಡುವೆ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ನೂರಾರು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ನಡೆದ ಆರೋಪದ ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದೆ. ಆಪಾದಿತ ಮನಿ ಲಾಂಡರಿಂಗ್ ಬಗ್ಗೆ ಜಾರಿ ನಿರ್ದೇಶನಾಲಯ ಸಮಾನಾಂತರ ತನಿಖೆ ಮಾಡುತ್ತಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸೇರಿದ ಎರಡು ಫ್ಲಾಟ್‌ಗಳಲ್ಲಿ 50 ಕೋಟಿ ರುಪಾಯಿಗೂ ಹೆಚ್ಚಿನ ನಗದು, 5 ಕೆ.ಜಿ. ಬಂಗಾರ ಪತ್ತೆಯಾಗಿತ್ತು.

 ಹಣ ನನ್ನದಲ್ಲ ಎಂದಿರುವ ಪಾರ್ಥ ಚಟರ್ಜಿ

ಹಣ ನನ್ನದಲ್ಲ ಎಂದಿರುವ ಪಾರ್ಥ ಚಟರ್ಜಿ

ಜುಲೈ 31 ರಂದು ಚಟರ್ಜಿ ಅವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ, ತನಗೆ ಯಾವುದೇ ಆದಾಯದ ಮೂಲವಿಲ್ಲ ಮತ್ತು ತನ್ನ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಫ್ಲಾಟ್‌ಗಳಿಂದ ವಶಪಡಿಸಿಕೊಂಡ 50 ಕೋಟಿ ರುಪಾಯಿ ನಗದು ತನ್ನದಲ್ಲ ಎಂದು ಹೇಳಿದ್ದರು.

ಆದರೆ ಇದಕ್ಕೆ ವಿರುದ್ಧವಾದ ಉತ್ತರ ನೀಡಿರುವ ಅರ್ಪಿತಾ ಮುಖರ್ಜಿ ಹಣ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ಹೇಳಿದ್ದಾರೆ. ತನಗೆ ತಿಳಿಯದಂತೆ ನನ್ನ ಮನೆಯಲ್ಲಿ ಹಣವನ್ನು ಇಡಲಾಗಿದೆ, ಪಾರ್ಥ ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್‌ರೀತಿ ಬಳಸಿಕೊಳ್ಳುತ್ತಿದ್ದರು ಎಂದು ತನಿಖೆ ವೇಳೆ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+