ಕಾಂಗ್ರೆಸ್ ಅನ್ನು ಕುರುಡುಮಲೆ ಗಣಪತಿ ಕಾಪಾಡುತ್ತಾನಾ!?
ಕೋಲಾರ, ಅಕ್ಟೋಬರ್ 13: ರಾಜಕೀಯದಲ್ಲಿ ಕೆಲವು ನಂಬಿಕೆಗಳು ಇಂದಿಗೂ ಇವೆ. ಹೀಗಾಗಿಯೇ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಲವು ರೀತಿಯ ಹೋಮ ಹವನ, ಅಭಿಷೇಕ, ದೇವಾಲಯಕ್ಕೆ ಭೇಟಿ, ಹುಣ್ಣಿಮೆ, ಅಮಾವಾಸ್ಯೆ ಪೂಜೆ ಹೀಗೆ ದೈವತಾ ಕೈಂಕರ್ಯಗಳನ್ನು ರಾಜಕೀಯ ನಾಯಕರು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈಗಲೂ ಮುಂದುವರೆಯುತ್ತಿರುವುದನ್ನು ನಾವು ಕಾಣಬಹುದು.
ಚಿಕ್ಕಮಗಳೂರಿನಿಂದ ಕೋಲಾರ ಡಿಸಿಯಾಗಿ ಸತ್ಯವತಿಗೆ ವರ್ಗ
ಮುಂಬರುವ ಚುನಾವಣೆ ಮೂರು ರಾಜಕೀಯ ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿದ್ದು, ಗೆಲುವಿಗೆ ಹಲವು ರೀತಿಯ ತಂತ್ರಗಳನ್ನು ಅಳವಡಿಸಿಕೊಂಡಿದ್ದರೂ ಒಳಗೊಳಗೆ ದೇವರ ಮೊರೆಹೋಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಡುವೆ ಕಾಂಗ್ರೆಸ್ ಪಕ್ಷದ ನಾಯಕರು ಮುಂದೆಯೂ ತಾವೇ ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪ ತೊಟ್ಟಿದ್ದು ಅದಕ್ಕಾಗಿ ಕೋಲಾರ ಜಿಲ್ಲೆಯ ಮುಳಬಾಗಿಲಿನ ಪ್ರಸಿದ್ಧ ಕೂಡುಮಲೆ (ಕುರುಡುಮಲೆ)ಗಣಪತಿಗೆ ಪೂಜೆ ನೆರವೇರಿಸಿ ಬಳಿಕ ಜಿಲ್ಲಾವಾರು ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ.
ಇಷ್ಟಕ್ಕೂ ಕಾಂಗ್ರೆಸ್ ನ ನಾಯಕರು ಕೂಡುಮಲೆ(ಕುರುಡುಮಲೆ) ಗಣಪತಿ ಪೂಜೆ ಮಾಡಲು ಮುಂದಾಗಿರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ದಶಕದ ಹಿಂದೆಗೆ ಹೋಗಬೇಕಾಗುತ್ತದೆ. 1999ರಲ್ಲಿ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಈ ವೇಳೆ ಅವರು ಇದೇ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸುವ ಮೂಲಕ ತಮ್ಮ ಪಾಂಚಜನ್ಯ ಯಾತ್ರೆ ಆರಂಭಿಸಿದ್ದರು. ಅದು ಯಶಸ್ವಿಯಾಗುವುದರೊಂದಿಗೆ ಕೃಷ್ಣ ಸಿಎಂ ಗಾದಿಗೇರಿದ್ದರು. ಅದನ್ನೇ ಮೆಲುಕು ಹಾಕುತ್ತಿರುವ ನಾಯಕರು ಈ ಬಾರಿಯೂ ಇಲ್ಲಿಂದಲೇ ಜಿಲ್ಲಾವಾರು ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಹಾಗೆ ನೋಡಿದರೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯವೇನಿಲ್ಲ. ಇಲ್ಲಿನ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಮಾತ್ರವಿದೆ. ಉಳಿದಂತೆ ಪಕ್ಷೇತರರು ಸೇರಿ ಎಲ್ಲ ಪಕ್ಷದವರೂ ಒಂದೊಂದು ಕ್ಷೇತ್ರದಲ್ಲಿದ್ದಾರೆ. ಹೀಗಿರುವಾಗ ಮೊದಲಿಗೆ ಕೋಲಾರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಬೇಕಿದೆ.
ಸದ್ಯ ಇಲ್ಲಿ ಕಾಂಗ್ರೆಸ್ ಸಂಸದ ಕೆ.ಎಚ್.ಮುನಿಯಪ್ಪ , ಉಸ್ತುವಾರಿ ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದು ಇದೀಗ ಜಿಲ್ಲಾವಾರು ಕಾರ್ಯಕರ್ತರ ಸಮಾವೇಶದ ನೇತೃತ್ವವನ್ನು ಇವರೇ ವಹಿಸಲಿದ್ದಾರೆ. ಅ.15ರಂದು ಆರಂಭವಾಗಲಿರುವ ಜಿಲ್ಲಾವಾರು ಕಾರ್ಯಕರ್ತರ ಸಮಾವೇಶ ಮುಳಬಾಗಿಲಿನ ಪ್ರಸಿದ್ಧ ಕೂಡುಮಲೆ (ಕುರುಡುಮಲೆ)ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭವಾಗಲಿದ್ದು, ಈ ಪೂಜಾಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಅಂದು 10 ಗಂಟೆಗೆ ಗಣಪತಿಗೆ ಪೂಜೆ ನೆರವೇರಿಸಿ ಬಳಿಕ ಮುಳಬಾಗಿಲು ಕೋಲಾರ ನಡುವೆ ಸಂವಿಹಳ್ಳಿ ಸಮೀಪ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಇಲ್ಲಿಂದ ಆರಂಭವಾಗುವ ಕಾರ್ಯಕರ್ತರ ಸಮಾವೇಶ ಮುಂಬರುವ ದಿನಗಳಲ್ಲಿ ಎಲ್ಲ ಜಿಲ್ಲೆಯಲ್ಲಿಯೂ ಮುಂದುವರೆಯಲಿದೆ. ಕುರುಡುಮಲೆ ಗಣಪತಿ ಕಾಂಗ್ರೆಸ್ ಗೆ ಯಾವ ರೀತಿಯಲ್ಲಿ ಅನುಗ್ರಹ ನೀಡುತ್ತಾನೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ.