ಗ್ರಾ.ಪಂಚಾಯಿತಿ ಸದಸ್ಯನ ಕುಟುಂಬಕ್ಕೆ ಮಸೀದಿಗೆ ಪ್ರವೇಶಕ್ಕೆ ಬಹಿಷ್ಕಾರ
ಕೋಲಾರ, ಜನವರಿ 31; ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡಿದೆ. ಚುನಾವಣಾ ದ್ವೇಷದ ಹಿನ್ನಲೆಯಲ್ಲಿ ಹಲವು ಕಡೆ ವಿವಿಧ ಹಲ್ಲೆ ನಡೆದ ಪ್ರಕರಣಗಳು ವರದಿಯಾಗಿವೆ. ಕೋಲಾರದಲ್ಲಿ ಪಂಚಾಯಿತಿ ಸದಸ್ಯನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ಒಂದು ಕುಟುಂಬಕ್ಕೆ ಮಸೀದಿಗೆ ಪ್ರವೇಶ ಮಾಡದಂತೆ ಬಹಿಷ್ಕಾರ ಹಾಕಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣಾ ದ್ವೇಷಕ್ಕೆ ಮಸೀದಿಗೆ ಪ್ರವೇಶ ಮಾಡದಂತೆ ಬಹಿಷ್ಕಾರ ಹಾಕಲಾಗಿದೆ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗೆ ಶೇಖ್ ಅಮೀರ್ ಜಾನ್ ಎನ್ನುವವರು ಈ ಕುರಿತು ದೂರು ನೀಡಿದ್ದಾರೆ. ಕುಟುಂಬದಲ್ಲಿ 50 ಜನರಿದ್ದು, ಗ್ರಾಮದಲ್ಲಿನ 7 ಮಸೀದಿಗಳಿಗೂ ಅವರ ಕುಟುಂಬ ಸದಸ್ಯರನ್ನು ಸೇರಿಸದಂತೆ ಬಹಿಷ್ಕಾರ ಹಾಕಲಾಗಿದೆ. ತಮ್ಮ ದೂರಿನಲದ್ಲಿ ಶೇಖ್ ಅಮೀರ್ ಜಾನ್ ಶೌಕತ್ತುಲ್ಲಾ ಬೇಗ್ ಹಾಗೂ ಅವರ ಮಕ್ಕಳು ಈ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಟಂಬಕ್ಕೆ ಬಹಿಷ್ಕಾರ ಹಾಕಿರುವುದಲ್ಲದೇ ಮಸೀದಿಯ ಮೈಕ್ ಮೂಲಕ ಗ್ರಾಮದ ಎಲ್ಲಾ ಕಡೆ ಇದನ್ನು ಪ್ರಚಾರ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಸಹ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ದೂರಿನ ಜೊತೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕ್ ಅಮೀರ್ ಜಾನ್ ಪುತ್ರ ಪಯಾಜ್ ಗೆಲುವು ಸಾಧಿಸಿದ್ದರು. ಮಸೀದಿಗೆ ಪ್ರವೇಶ ನಿಷೇಧ ಮಾಡಿರುವುದರ ಜೊತೆ ಇತರೆ ಕೌಟುಂಬಿಕ ಕಾರ್ಯಕ್ರಮಗಳನ್ನು ಮಸೀದಿಯಲ್ಲಿ ನಡೆಸದಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಶೇಕ್ ಅಮೀರ್ ಜಾನ್ ಈ ಕುರಿತು ಮೊದಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.












Click it and Unblock the Notifications