ಸರ್ವೆಗೆ ತೆರಳಿದ್ದ ತಹಶೀಲ್ದಾರ್ ಹತ್ಯೆ ಖಂಡಿಸಿದ ಸಿದ್ದರಾಮಯ್ಯ
ಕೋಲಾರ, ಜುಲೈ 10: ಜಮೀನು ಸರ್ವೆಗೆಂದು ತೆರಳಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರನ್ನು ಚಾಕುವಿನಿಂದ ಇರಿದಿರುವ ಘಟನೆ ಕೋಲಾರದಲ್ಲಿ ಕಳವಂಚಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಅಧಿಕಾರಿಯ ಹತ್ಯೆಯನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ''ಸರ್ವೇ ಕಾರ್ಯಕ್ಕೆ ತೆರಳಿದ್ದ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿರುವುದು ಆಘಾತಕಾರಿ ವಿಚಾರ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಈ ಕೊಲೆಗೆ ಸಿಎಂ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮೃತ ತಹಶೀಲ್ದಾರ್ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ಧನಸಹಾಯ ಮಾಡಲು ಸಿಎಂ ಸಚಿವಾಲಯದಿಂದ ಸೂಚನೆ ಬಂದಿರುವುದಾಗಿ ಜಿಲ್ಲಾಧಿಕಾರಿ ಸತ್ಯಭಾಮಾ ಘೋಷಿಸಿದ್ದಾರೆ.
ಘಟನೆಯ ವಿವರ
ರಾಮಮೂರ್ತಿ ಹಾಗೂ ಆರೋಪಿ ವೆಂಕಟಪತಿ ಎಂಬುವರ ಜಮೀನು ಒಂದೇ ಕಡೆ ಇದ್ದು, ಜಮೀನಿಗೆ ಸಂಬಂಧಪಟ್ಟಂತೆ ಇಬ್ಬರ ನಡುವೆ ವ್ಯಾಜ್ಯವಿತ್ತು. ರಾಮಮೂರ್ತಿ ಬಂಗಾರಪೇಟೆ ತಹಶೀಲ್ದಾರ್ ಗೆ ಇಬ್ಬರ ಜಮೀನನ್ನು ಹದ್ದುಬಸ್ತು ಮಾಡುವಂತೆ ದೂರು ನೀಡಿದ್ದರು. ದೂರನ್ನು ಆಧರಿಸಿ ಇಂದು ತಹಶೀಲ್ದಾರ್ ಚಂದ್ರಮೌಳೇಶ್ವರ್, ಕಾಮಸಮುದ್ರ ಪೊಲೀಸ್ ಠಾಣೆಯ ಪೇದೆ ಜೊತೆ ಗ್ರಾಣಕ್ಕೆ ಭೇಟಿ ನೀಡಿದ್ದರು.
ಸರ್ವೇ ನಡೆಸಿದ ತಹಶೀಲ್ದಾರ್, ವೆಂಕಟಪತಿ ಜಮೀನಿನಲ್ಲಿ ಕಲ್ಲು ಊಳಿಸಿದ್ದಾರೆ. ಇದಕ್ಕೆ ಕೋಪಗೊಂಡ ವೆಂಕಟಪತಿ ಏಕಾಏಕಿ ತಹಶೀಲ್ದಾರ್ ಎದೆ ಭಾಗಕ್ಕೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ












Click it and Unblock the Notifications