'ಮೈ ಮೇಲೆ ಪ್ರಜ್ಞೆ ಇಲ್ಲ ನಮ್ಮ ಕೇಂದ್ರ ಸಚಿವರಿಗೆ' ಎಂದ ರಾಜ್ಯದ ಸಚಿವ
ಕೋಲಾರ, ಏಪ್ರಿಲ್ 27: ಕೋವಿಡ್ 19 ನಿಬಾಯಿಸುವಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪಿಎಂ ಗೆ ರಾಜ್ಯದ ಕೇಂದ್ರ ಸಚಿವರು ದೂರು ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಕೋಲಾರದಲ್ಲಿ ತಮ್ಮ ಇಲಾಖೆಯ ಕುರಿತು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ನಮ್ಮವರೇ ಕೇಂದ್ರ ಸಚಿವರು ದೂರು ನೀಡಿರುವುದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.
ಸಾಮಾನ್ಯ ಜ್ಞಾನ ಇಲ್ಲದವರು ರಾಜ್ಯ ಸರ್ಕಾರದ ವಿರುದ್ಧ ಹಾಗೂ ನಮ್ಮ ಇಲಾಖೆಯ ನರೇಗಾ ಕಾರ್ಯಕ್ರಮದ ವಿರುದ್ಧ ಅನಗತ್ಯವಾಗಿ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ. ಅವರಿಗೆ ದೈರ್ಯವಿದ್ದರೆ ಪ್ರಧಾನಿ ಮೋದಿ ಅವರಿಗೇ ಭೇಟಿಯಾಗಿ ದೂರು ನೀಡಬಹುದಿತ್ತು ಎಂದು ಕಿಡಿಕಾರಿದ್ದಾರೆ.
ಮೈ ಮೇಲೆ ಪ್ರಜ್ಞೆ ಇಲ್ಲದವರು
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಯಾವ ರೀತಿ ನಡೆಸಬೇಕೋ ಅದಕ್ಕಿಂತ ಚೆನ್ನಾಗಿ ನಡೆಸಲಾಗುತ್ತಿದೆ. ಮೈ ಮೇಲೆ ಪ್ರಜ್ಞೆ ಇಲ್ಲದವರು ಈ ರೀತಿಯ ಕೆಲಸ ಮಾಡುತ್ತಾರೆ ಎಂದು ಈಶ್ವರಪ್ಪ ಹರಿಹಾಯ್ದಿದ್ದಾರೆ.
ಕೆರಳಿ ಕೆಂಡವಾದ ಈಶ್ವರಪ್ಪ
ಯಾರೋ ಆರೋಪ ಮಾಡಿದರು ಎಂದು ನರೇಗಾ ಕೆಲಸಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು. ನರೇಗಾ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ, ಗ್ರಾಮೀಣಾಭಿವೃದ್ಧಿ ಕೆಲಸಗಳು ಕೇಂದ್ರದ ಸೂಚನೆಯಂತೆ ನಡೆಯುತ್ತಿಲ್ಲ ಎಂದು ಕೇಂದ್ರಕ್ಕೆ ದೂರು ಹೋಗಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಈಶ್ವರಪ್ಪ ಕೆಂಡವಾಗಿದ್ದರು.
ಮೂವರು ಕೇಂದ್ರ ಸಚಿವರಲ್ಲಿ ಯಾರ ಮೇಲೆ ಕೋಪ?
ಸದ್ಯ ಪ್ರಹ್ಲಾದ ಜೋಶಿ, ಸದಾನಂದಗೌಡ ಹಾಗೂ ಸುರೇಶ್ ಅಂಗಡಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೆ, ಈಶ್ವರಪ್ಪ ಈ ಮೂವರಲ್ಲಿ ಯಾರೊಬ್ಬರ ಮೇಲೆ ನೇರ ಬೊಟ್ಟು ಮಾಡದೇ ಹರಿಹಾಯ್ದಿದ್ದಾರೆ.
ಕೋಲಾರದಲ್ಲಿ ಸಭೆ
ಸಭೆಯಲ್ಲಿ ಕೋಲಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನರೇಗಾ ಹಾಗೂ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.