ಆರ್.ಎಲ್. ಜಾಲಪ್ಪ ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆಯ ಅಧಿಕಾರಕ್ಕಾಗಿ ಕುಟುಂಬ ಕಲಹ; ಪ್ರತಿಭಟನೆ
ಕೋಲಾರ, ಜನವರಿ 24: ಮಾಜಿ ಸಚಿವ ಆರ್.ಎಲ್. ಜಾಲಪ್ಪ ನಿಧನದ ನಂತರ ಕುಟುಂಬ ಕಲಹ ಜಗಜ್ಜಾಹೀರಾಗಿದೆ. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಆಂತರಿಕ ಕಲಹ ಇದೀಗ ಬೀದಿಗೆ ಬಂದಿದ್ದು, ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್. ಜಾಲಪ್ಪ ನಿಧನ ನಂತರ ಸಂಸ್ಥೆಯ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ.
ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಾಲಪ್ಪ ಸಂಬಂಧಿ ಜಿ.ಎಚ್. ನಾಗರಾಜ್ ಆಯ್ಕೆ ಆಗಿದ್ದು, ಈ ಆಯ್ಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲಪ್ಪನವರ ಕುಟುಂಬದವರಿಗೆ ಟ್ರಸ್ಟ್ ಹಾಗೂ ಸಂಸ್ಥೆಯಲ್ಲಿ ಸೂಕ್ತ ಸ್ಥಾನಮಾನ ನೀಡದೆ ಸರ್ವಾಧಿಕಾರಿ ಧೋರಣೆಯಿಂದ ವರ್ತನೆ ಮಾಡುತ್ತಿದ್ದಾರೆ ಎಂದು ಜಿ.ಎಚ್. ನಾಗರಾಜ್ ವಿರುದ್ಧ ಆರೋಪಿಸಲಾಗಿದೆ. ಆರ್.ಎಲ್. ಜಾಲಪ್ಪ ಅವರ ಕುಟುಂಬದ ಸದಸ್ಯರನ್ನು ಟ್ರಸ್ಟ್ ಹಾಗೂ ಸಂಸ್ಥೆಗಳಿಂದ ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಕೋಲಾರ ನಗರ ಹೊರವಲಯದಲ್ಲಿರುವ ದೇವರಾಜ್ ಅರಸು ಎಜುಕೇಶನ್ ಟ್ರಸ್ಟ್ ಹಾಗೂ ಮೆಡಿಕಲ್ ಕಾಲೇಜ್ ಮತ್ತು ಶಿಕ್ಷಣ ಸಂಸ್ಥೆಗಳ ಅಧಿಪತ್ಯಕ್ಕಾಗಿ ಮುಸುಕಿನ ಗುದ್ದಾಟ ನಡೆದಿದೆ. ಜಾಲಪ್ಪ ಅವರ ಹಿರಿಯ ಮಗ ಹಾಗೂ ಮಾಜಿ ಶಾಸಕ ನರಸಿಂಹಸ್ವಾಮಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಪಟ್ಟು ಹಿಡಿಯಲಾಗಿದೆ. ಜಾಲಪ್ಪ ಕುಟುಂಬಸ್ಥರು ಹಾಗೂ ಸಂಸ್ಥೆಯ ಸಿಬ್ಬಂದಿ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಗಳು ಹರಿದಾಡುತ್ತಿವೆ.

ಕಾಲೇಜು ಒಳಕ್ಕೆ ನುಗ್ಗಿದ ಪ್ರತಿಭಟನಾಕಾರರು
ಅಲ್ಲದೆ ಕೋಲಾರದ ಟಮಕ ಬಳಿಯ ಮೆಡಿಕಲ್ ಕಾಲೇಜಿನಲ್ಲಿ ಆರ್.ಎಲ್. ಜಾಲಪ್ಪ ಮಕ್ಕಳು, ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಆರ್.ಎಲ್. ಜಾಲಪ್ಪ ಕುಟುಂಬಸ್ಥರಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಪೊಲೀಸರನ್ನು ತಳ್ಳಿ ಪ್ರತಿಭಟನಾಕಾರರು ಕಾಲೇಜು ಒಳಕ್ಕೆ ನುಗ್ಗಿದ್ದಾರೆ.
ಪೊಲೀಸರಿಂದ ಲಾಠಿಚಾರ್ಜ್
ಇನ್ನು ಪ್ರತಿಭಟನಾಕಾರರು ವೈದ್ಯಕೀಯ ಕಾಲೇಜು ಒಳಕ್ಕೆ ನುಗ್ಗಿದ್ದು, ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮೀಪತಿ ತಲೆಗೆ ಗಾಯವಾಗಿದೆ. ಹಾಗೂ ಪಿಎಸ್ಐ ಅಣ್ಣಯ್ಯ ಅವರ ಕಾಲಿಗೂ ಗಾಯವಾಗಿದೆ. ಪ್ರತಿಭಟನೆಯಲ್ಲಿ ನರಸಿಂಹಸ್ವಾಮಿ, ನಾಗೇಂದ್ರ ಸ್ವಾಮಿ, ರಾಜೇಂದ್ರ, ಪಾರ್ವತಿದೇವಿ, ಉಮಾದೇವಿ, ಸರಸ್ವತಿ ಭಾಗಿಯಾಗಿದ್ದಾರೆ.
ಜಿ.ಎಚ್. ನಾಗರಾಜ್ ವಿರುದ್ಧ ಆರ್.ಎಲ್. ಜಾಲಪ್ಪ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದು, ಜಿ.ಎಚ್. ನಾಗರಾಜ್ ನಮ್ಮ ಸಂಬಂಧಿ ಅಲ್ಲ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಸಂಸ್ಥೆಯ ಆಡಳಿತ ಆರ್.ಎಲ್. ಜಾಲಪ್ಪ ಮಕ್ಕಳಿಗೆ ನೀಡಲು ಒತ್ತಾಯಿಸಿದ್ದಾರೆ.
ಅದು ಸಾಧ್ಯವಿಲ್ಲದಿದ್ದರೆ ಶಿಕ್ಷಣ ಸಂಸ್ಥೆಯನ್ನು ಸರ್ಕಾರದ ವಶಕ್ಕೆ ಪಡೆಯಲಿ. ನಾಗರಾಜ್ ಭ್ರಷ್ಟ, ಜಾಲಪ್ಪ ಮಕ್ಕಳಿಗೆ ಮೋಸ ಮಾಡಿದ್ದಾನೆ. 5 ವರ್ಷಗಳಿಂದ ಸಂಸ್ಥೆಯಲ್ಲಿ ಆಗಿರುವ ಅಕ್ರಮ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಆರ್.ಎಲ್. ಜಾಲಪ್ಪ ಮಕ್ಕಳು, ಬೆಂಬಲಿಗರು ಆಗ್ರಹಿಸಿದ್ದಾರೆ.












Click it and Unblock the Notifications