ಮಾಸ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಸಾವು, ಸಂಬಂಧಿಗಳ ಆಕ್ರೋಶ
ಮಾಸ್ತಿ, ಫೆಬ್ರವರಿ 7 : ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ತವರು ಜಿಲ್ಲೆ ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಸಂಭವಿಸಿದೆ. ಹೀಗೆಂದು ಆರೋಪಿಸಿ ಮೃತರ ಸಂಬಂಧಿಕರು ಬುಧವಾರ ಮಾಲೂರು ತಾಲೂಕು ಮಾಸ್ತಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಎದುರು ಶವ ಇಟ್ಟು, ರಸ್ತೆ ತಡೆದು ಸಂಬಂಧಿಕರು ಪ್ರತಿಭಟನೆ ನಡೆಸಿದರು. ವಾಹನಗಳ ಟೈರ್ ಗೆ ಬೆಂಕಿ ಹೊತ್ತಿಸಿದ ಮೃತರ ಸಂಬಂಧಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಸಮಾಧಾನ ಮಿತಿ ಮೀರಿ ಪರಿಸ್ಥಿತಿ ಕೈ ತಪ್ಪಿ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು, ಸನ್ನಿವೇಶವನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಡಿಎಚ್ ಒ ಸ್ಥಳಕ್ಕೆ ಬರಬೇಕು ಎಂದು ಮೃತ ಮಹಿಳೆಯ ಸಂಬಂಧಿಕರು ಪಟ್ಟು ಹಿಡಿದರು. ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ತಳ್ಳಾಟ ಹಾಗೂ ನೂಕಾಟ ಕೂಡ ನಡೆಯಿತು. ಇಪ್ಪತ್ತೆರಡು ವರ್ಷದ ಅನಸೂಯ ಮೃತರು ಎಂದು ತಿಳಿದುಬಂದಿದೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications