ಡಿಸೆಂಬರ್ 19ರಂದು ವರ್ತೂರು ಪ್ರಕಾಶ್ ರಿಂದ 'ನಮ್ಮ ಕಾಂಗ್ರೆಸ್' ಘೋಷಣೆ
ಕೋಲಾರ, ನವೆಂಬರ್ 11 : ಶಾಸಕ ವರ್ತೂರು ಪ್ರಕಾಶ್ ಮುಂದಿನ ತಿಂಗಳು 19ನೇ ತಾರೀಕು ಹೊಸ ಪಕ್ಷ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. 'ನಮ್ಮ ಕಾಂಗ್ರೆಸ್' ಎಂದು ಹೆಸರಿಡಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಹೊಸ ಪಕ್ಷದ ಘೋಷಣೆ ಮಾಡುವುದಾಗಿ ಮಾಧ್ಯಮವೊಂದಕ್ಕೆ ಅವರು ಮಾಹಿತಿ ನೀಡಿದ್ದಾರೆ.
ವರ್ತೂರು ಪ್ರಕಾಶ್ ರೀ ಎಂಟ್ರಿ, ಹೊಸ ಪಕ್ಷ ಕಟ್ಟುವ ಸೂಚನೆ!
'ನಮ್ಮ ಕಾಂಗ್ರೆಸ್' ಪಕ್ಷವು ಅಹಿಂದ ಸಿದ್ಧಾಂತಗಳನ್ನು ಹೊಂದಿರುತ್ತದೆ ಎಂದು ತಿಳಿಸಿರುವ ಅವರು, ಬಾಗಲಕೋಟೆಯ ಸಮಾವೇಶದ ನಂತರ ಎಷ್ಟು ಕ್ಷೇತ್ರಗಳಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 19ರಂದು ವರ್ತೂರು ಪ್ರಕಾಶ್ ಅವರ ಜನ್ಮದಿನ. ಆ ದಿನವೇ ಹೊಸ ಪಕ್ಷ ಘೋಷಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಇನ್ನು ಹೊಸ ಪಕ್ಷಕ್ಕೆ ಸೇರಲು ಈಗಾಗಲೇ ಕೆಲವು ನಾಯಕರು ಆಸಕ್ತಿ ತೋರಿಸಿದ್ದಾರೆ ಎಂದು ಕೂಡ ವರ್ತೂರು ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಕೋಲಾರ ನಗರ ವಿಧಾನಸಭಾ ಕ್ಷೇತ್ರಕ್ಕೆ ವರ್ತೂರು ಪ್ರಕಾಶ್ ಹಾಲಿ ಶಾಸಕರು. ಬಸವಣ್ಣವರ ಜನ್ಮ ಸ್ಥಳ ಕೂಡಲಸಂಗಮ ಆದ್ದರಿಂದ ಅಲ್ಲೇ ಹೊಸ ಪಕ್ಷದ ಘೋಷಣೆ ಮಾಡಲು ನಿರ್ಧರಿಸಿದ್ದು, ಅಂದು ಮೂರು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದ್ದಾರೆ.