ನೋಟು ಬದಲಿನ ಮಹಿಮೆ: ಕೋಲಾರದ ಹಳೆ ಫೋಟೋ ಹಾಕಿ ಫುಲ್ ಟೆನ್ಷನ್
ಕೋಲಾರ, ನವೆಂಬರ್ 11: ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯಕ್ರಮವೊಂದರಲ್ಲಿ ರಾಜಕಾರಣಿಗಳು ತಮ್ಮ ಹಣವನ್ನು ಸಾಲದ ರೂಪದಲ್ಲಿ ಹಂಚುವ ಮೂಲಕ ಕಪ್ಪು ಹಣ ಬದಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಆ ಬಗ್ಗೆ ಫೋಟೋವೊಂದು ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.
ಇಡೀ ಸುದ್ದಿಯನ್ನು ನೋಟು ರದ್ದು ಮಾಡಿದ ಹಿನ್ನೆಲೆಯ ಸಂದರ್ಭದಲ್ಲೇ ಹರಿಬಿಟ್ಟಿದ್ದು, ಈ ಬಗ್ಗೆ ಆಕ್ರೋಶಗೊಂಡಿರುವ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೋಲಾರ ಎಸ್ ಪಿ ದಿವ್ಯಾ ಗೋಪಿನಾಥನ್ ಅವರಿಗೆ ದೂರು ಸಲ್ಲಿಸಿದ್ದಾರೆ.[ನೋಟು ನಿಷೇಧ : ಹುಂಡಿಯಲ್ಲಿ ಬೀಳುತ್ತಿರುವುದು ಯಾರಪ್ಪನ ದುಡ್ಡು?]
ವಾಟ್ಸ್ ಅಪ್ ಫೋಟೋ ಬಗ್ಗೆ ಪ್ರಶ್ನಿಸಲು ಒನ್ ಇಂಡಿಯಾ ಗೋವಿಂದ ಗೌಡರಿಗೆ ಕರೆ ಮಾಡಿದಾಗ, ಆ ಕಾರ್ಯಕ್ರಮ ನಡೆದಿರೋದು ಯಾವತ್ತೋ. ಆದರೆ ನೋಟು ರದ್ದು ಘೋಷಣೆ ಆಗಿರೋದು ಇತ್ತೀಚೆಗೆ. ಯಾರೋ ಬೇಕಂತಲೇ ಈ ರೀತಿ ಮಾಡಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದೇನೆ ಎಂದು ತಿಳಿಸಿದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಸಾಲ ವಿತರಿಸುವುದು ಹೀಗೇನೆ. ನಗದನ್ನೇ ವಿತರಿಸಲಾಗುತ್ತದೆ. ಗೋವಿಂದಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ನಂತರ ಸ್ವಸಹಾಯ ಸಂಘಗಳಿಗೆ ಈ ರೀತಿ ಸಾಲ ವಿತರಿಸುವ ಕಾರ್ಯಕ್ರಮ ಸಾಕಷ್ಟು ನಡೆದಿದೆ. ಅದರ ಫೋಟೋಗಳು ಹಲವಾರು ಪತ್ರಿಕೆಗಳಲ್ಲೂ ಪ್ರಕಟವಾಗಿವೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಬಂದಿವೆ.[ಓದುಗರೊಬ್ಬರು ಪ್ರಶ್ನೆ ಕೇಳಿದ್ದಾರೆ, ಪ್ರಧಾನಿಗಳೇ ಉತ್ತರಿಸಿ!]
ಒಂದೋ ಈ ಸಂದರ್ಭದಲ್ಲಿ ಹಿಗೆ ಸುದ್ದಿಯೊಂದನ್ನು ಹರಿಯಬಿಡುವ ಕಾರಣಕ್ಕೋ ಅಥವಾ ಈ ಕಾರ್ಯಕ್ರಮ ಎಂದು ನಡೆದಿರುವುದು ಎಂಬ ಸಂಗತಿಯೇ ತಿಳಿಯದೆ ಹೀಗೆ ಅಪಪ್ರಚಾರ ಮಾಡಿದ್ದಾರೆ. ಅದೀಗ ರಾಜ್ಯಮಟ್ಟದಲ್ಲೂ ದೊಡ್ಡ ಸುದ್ದಿ ಮಾಡುತ್ತಿದೆ.