ಬರ ಪೀಡಿತ ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರದಾನ
ಕೋಲಾರ, ಮೇ 21 : 'ಕೋಲಾರ ಬರ ಪೀಡಿತ ಜಿಲ್ಲೆಯಾಗಿದ್ದು, ನೀರಿನ ಸಂಪನ್ಮೂಲಗಳ ಕೊರತೆ ಇದೆ. ನೀರಿನ ಮರುಪೂರಣ ಮಾಡುವ ಕೆ.ಸಿ.ವ್ಯಾಲಿ ಯೋಜನೆಯು ಜಿಲ್ಲೆಗೆ ವರದಾನವಾಗಿದೆ' ಎಂದು ಜಿಲ್ಲಾಧಿಕಾರಿ
ಜೆ.ಮಂಜುನಾಥ್ ಹೇಳಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಂಗಳವಾರ ಜಿಲ್ಲಾಧಿಕಾರಿಗಳು ಕೆ.ಸಿ ವ್ಯಾಲಿ ನೀರಿನಿಂದ ತುಂಬಿರುವ ಸೀಗೇಹಳ್ಳಿ ಕೆರೆ, ನರಸಾಪುರ ಕೆರೆ ಹಾಗೂ ಡಿಸಿ ಪಾಯಿಂಟ್ ಆದ ಲಕ್ಷ್ಮೀಸಾಗರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
'ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 1500 ಅಡಿಯಾಳಕ್ಕೆ ಕುಸಿದಿದ್ದು, ಕೆ.ಸಿ.ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ ಉತ್ತಮಗೊಳ್ಳಲಿದೆ. ಜಿಲ್ಲೆಯ 126 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಯಲಿದ್ದು, ಇದರಿಂದ ಕೊಳವೆಬಾವಿಗಳಲ್ಲಿ ಉತ್ತಮವಾಗಿ ನೀರು ಸಿಗುವಂತಾಗುತ್ತದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕೆ.ಸಿ.ವ್ಯಾಲಿ ನೀರು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ರತಿನಿತ್ಯ ಇದರ ಸ್ಯಾಂಪಲ್ ತೆಗೆದು 5 ಪ್ಯಾರಾ ಮೀಟರ್ ಮೂಲಕ ಸ್ಥಳದಲ್ಲಿಯೇ ಪರೀಕ್ಷಿಸುವರು. ತಿಂಗಳಿಗೆ ಕನಿಷ್ಠ 33 ಪ್ಯಾರಾಮೀಟರ್ ಪರೀಕ್ಷಿಸಲಾಗುತ್ತದೆ.
'ಜನರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಈಗಾಗಲೇ 14 ಕೆರೆಗಳು ತುಂಬಿವೆ. ಪ್ರತಿ ಕೆರೆಗೂ ಶೇ. 60 ರಿಂದ 70 ರಷ್ಟು ನೀರನ್ನು ತುಂಬಿಸಲಾಗುವುದು. ಎಲ್ಲಾ ಕೆರೆಗಳು ತುಂಬಿದ ನಂತರ ಶೇ. 100 ರಷ್ಟು ನೀರನ್ನು ಕೆರೆಗಳಲ್ಲಿ ಸಂಗ್ರಹಿಸಲಾಗುವುದು' ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.

ಕೆ.ಸಿ.ವ್ಯಾಲಿ ನೀರು ಹರಿಯುವ ಎಲ್ಲಾ ರಾಜಕಾಲುವೆಗಳನ್ನು ತೆರವುಗೊಳಿಸಿ ಶುಚಿಗೊಳಿಸಲಾಗುತ್ತಿದೆ. ನರಸಾಪುರ ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಸಲಾಗುತ್ತಿದೆ. ಪ್ರತಿನಿತ್ಯ 250 ಎಂ.ಎಲ್.ಡಿ ನೀರು ಪಂಪ್ ಆಗುತ್ತಿದೆ. ಎಲ್ಲಾ ಕೆರೆಗಳು ತುಂಬುವವರೆಗೆ ಕೆರೆ ನೀರನ್ನು ವ್ಯವಸಾಯಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ.












Click it and Unblock the Notifications