ಇನ್ಫೋಸಿಸ್ ನಿಂದ ಬಡಮಕ್ಕಳಿಗೆ ಬೆಳಕು ನೀಡುವ 'ನನ್ನ ಕಣ್ಣು'
ಕೋಲಾರ, ಸೆಪ್ಟೆಂಬರ್ 11 : ಇನ್ಫೋಸಿಸ್ ಸಂಸ್ಥೆಯ 'ಸಮರ್ಪಣ' ವೇದಿಕೆ ಹಳ್ಳಿಯ ಬಡಮಕ್ಕಳಿಗೆ ಬೆಳಕು ನೀಡುವ 'ನನ್ನ ಕಣ್ಣು' ಎಂಬ ಒಂದು ವಿನೂತನ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಏನಿದು ನನ್ನ ಕಣ್ಣು :
ಶಂಕರ ಐ ಫೌಂಡೇಶನ್ ವತಿಯಿಂದ ಇನ್ಫೋಸಿಸ್ ನ 'ಸಮರ್ಪಣ' ಸಂಸ್ಥೆಯ ಜೊತೆಗೂಡಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಮಕ್ಕಳಿಗೆ ಉಚಿತವಾಗಿ ಕಣ್ಣು ಚಿಕಿತ್ಸೆ ಮಾಡಿ, ನ್ಯೂನತೆ ಇರುವ ಮಕ್ಕಳಿಗೆ ಉಚಿತವಾಗಿ ಕನ್ನಡಕ ಮತ್ತು ಕಣ್ಣಿನ ಆಪರೇಷನ್ ಮಾಡುವಂತಹ ಕಾರ್ಯಕ್ರಮವೇ ಈ 'ನನ್ನ ಕಣ್ಣು' ಕಾರ್ಯಕ್ರಮ.
ಇದರಂಗವಾಗಿ ಮೊನ್ನೆ ಶನಿವಾರ ಬೆಳಿಗ್ಗೆ 9ರಿಂದ ಬಂಗಾರಪೇಟೆಯ ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಉಚಿತವಾಗಿ ಕಣ್ಣು ಪರೀಕ್ಷೆ ಮಾಡಲಾಯಿತು. ಇನ್ಫೋಸಿಸ್ ಸಂಸ್ಥೆಯ ನೂರಕ್ಕೂ ಹೆಚ್ಚು ಉದ್ಯೋಗಿಗಳು ಇದರಲ್ಲಿ ಪಾಲ್ಗೊಂಡು ಈ ಒಳ್ಳೆಯ ಕಾರ್ಯಕ್ರಮದಲ್ಲಿ ಪಾಲುದಾರರಾದರು.
ಗಣಪತಿ ಹಾಸಣಗಿ ಅವರಿಗೆ ಇನ್ಫೋಸಿಸ್-ಬಾಲೇಖಾನ್ ಪ್ರಶಸ್ತಿ ಪ್ರದಾನ
ಅನೇಕ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಅನೇಕರ ಕಣ್ಣುಗಳು ಹಾಳಾಗಿದ್ದು ಇಲ್ಲಿ ಕಂಡುಬಂದಿತು. ಇಂತಹ ಮಕ್ಕಳನ್ನ ವಿಶೇಷ ರೀತಿಯಲ್ಲಿ ಚಿಕಿತ್ಸೆ ಒಳಪಡಿಸಲು ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅನೇಕ ಮಕ್ಕಳಲ್ಲಿ ನ್ಯೂನತೆ ಇರುವುದು ಕಂಡುಬಂತು.
ಇವರೆಲ್ಲರ ಕಣ್ಣಿನ ಯೋಗಕ್ಷೇಮವನ್ನು ಇನ್ಫೋಸಿಸ್ ನ 'ಸಮರ್ಪಣ' ಮತ್ತು ಶಂಕರ ಸಂಸ್ಥೆ ನೋಡಿಕೊಳ್ಳುತ್ತಿವೆ. ಇದೆ ರೀತಿ ಮುಂದೆಯೂ ಕೂಡ ಬೇರೆ ಬೇರೆ ತಾಲೂಕಿನಲ್ಲಿ 'ನನ್ನ ಕಣ್ಣು' ಕಾರ್ಯಕ್ರಮ ಮಾಡಲು ಈ ಸಂಸ್ಥೆ ತುದಿಗಾಲಲ್ಲಿ ನಿಂತಿದೆ.
ಹೀಗೆಯೇ ಎಲ್ಲ ಕಾರ್ಪೊರೇಟ್ ಸಂಸ್ಥೆಗಳು ಬಡ ಮಕ್ಕಳ ನೆರವಿಗೆ ನಿಂತರೆ, ಗ್ರಾಮೀಣ ಭಾಗದಲ್ಲಿರುವ ಹಲವಾರು ಬಡ ಮಕ್ಕಳ ಕಣ್ಣಿನ ಸಮಸ್ಯೆಯನ್ನು ಆರಂಭದಲ್ಲಿಯೇ ಚಿಕಿತ್ಸೆ ನೀಡಿ ಅವರ ಬಾಳಕ್ಕೆ ಬೆಳಕಾಗಲು ಸಾಧ್ಯವಿದೆ.