10 ಲಕ್ಷ ಲಂಚ ಕೇಳಿದ್ದ ಅಧಿಕಾರಿ ಎಸಿಬಿ ಬಲೆಗೆ
ಕೋಲಾರ, ಜುಲೈ 20 : ಟೆಂಡರ್ ನಡಾವಳಿಗೆ ಸಹಿ ಮಾಡಲು 10 ಲಕ್ಷ ರೂ. ಲಂಚ ಕೇಳಿದ್ದ ಸರ್ಕಾರಿ ಅಧಿಕಾರಿಯನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ 2 ಲಕ್ಷ ರೂ. ಲಂಚ ಸ್ವಿಕರಿಸುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾದ ಡಾ.ವೆಂಕಟೇಶಮೂರ್ತಿ ಬಂಧಿತರು. ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ವಿದ್ಯಾರ್ಥಿನಿಲಯಗಳಿಗೆ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡಲು ಸರ್ಕಾರದಿಂದ ಇ-ಟೆಂಡರ್ ಆಹ್ವಾನಿಸಲಾಗಿತ್ತು.[ಎಸಿಬಿ ದಾಳಿ : 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ]

ಟೆಂಡರ್ ಸರಬರಾಜುದಾರರಿಗೆ ಮಂಜೂರಾಗಿತ್ತು. ಆದರೆ, ಟೆಂಡರ್ ನಡಾವಳಿಗೆ ಸಹಿ ಮಾಡಲು ವೆಂಕಟೇಶಮೂರ್ತಿ ಅವರು 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. 5 ಲಕ್ಷ ರೂ. ಲಂಚವನ್ನು ನೀಡಿದ್ದ ದೂರುದಾರರು ಅದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು.[ಶಿವಮೊಗ್ಗದಲ್ಲಿ ಎಸಿಬಿ ಪೊಲೀಸ್ ಠಾಣೆ ಆರಂಭ]
5 ಲಕ್ಷ ಲಂಚ ಪಡೆದರೂ ವೆಂಕಟೇಶಮೂರ್ತಿ ಅವರು ಉದ್ದೇಶಪೂರ್ವಕವಾಗಿ ತಮ್ಮ ಅಧೀನಕ್ಕೆ ಒಳಪಡುವ ವಿವಿಧ ವಸತಿ ಶಾಲೆಗಳ ಮೇಲ್ವಿಚಾರಕರಿಂದ ಆಹಾರ ಪದಾರ್ಥಗಳ ಬೇಡಿಕೆ ಪಟ್ಟಿ ಸಲ್ಲಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಉಳಿದ 5 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.[ಭ್ರಷ್ಟಾಚಾರ ನಿಗ್ರಹ ದಳದ ಯಾವ ಕಚೇರಿ ಎಲ್ಲಿರುತ್ತದೆ?]
ಈ ಬಗ್ಗೆ ಸರಬರಾಜುದಾರರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ದೂರು ಕೊಟ್ಟಿದ್ದರು. ಜುಲೈ 19ರಂದು ಡಾ.ವೆಂಕಟೇಶಮೂರ್ತಿ ಅವರು ಕೋಲಾರದ ತಮ್ಮ ಮನೆಯಲ್ಲಿ 2 ಲಕ್ಷ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.[ವಾಚ್ ವಿವಾದ : ಎಸಿಬಿಯಿಂದ ಗಿರೀಶ್ ಚಂದ್ರ ವರ್ಮಾ ವಿಚಾರಣೆ]
ಆರೋಪಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಡಾ.ವೆಂಕಟೇಶಮೂರ್ತಿ ಅವರ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿನ ಮನೆ ತಪಾಸಣೆ ನಡೆಸಿದಾಗ 4,37,150 ರೂ. ಮತ್ತು 290 ಗ್ರಾಂ ಚಿನ್ನದ ಆಭರಣಗಳು ಪೊಲೀಸರಿಗೆ ಸಿಕ್ಕಿವೆ. ಈ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ.
ದೂರು ಕೊಡಿ : ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಸಾರ್ವಜನಿಕರು ಎಸಿಬಿ ಕಚೇರಿಗೆ ದೂರು ನೀಡಿ ಎಂದು ಮನವಿ ಮಾಡಲಾಗಿದೆ. ದೂರು ನೀಡಲು ವಿಳಾಸ ಕೆಳಗಿನಂತಿದೆ.
ಭ್ರಷ್ಟಾಚಾರ ನಿಗ್ರಹ ದಳ
ನೆಲಮಹಡಿ, ಖನಿಜ ಭವನ
ರೇಸ್ ಕೋರ್ಸ್ ರಸ್ತೆ, ಬೆಂಗಳೂರು - 560001
ಭ್ರಷ್ಟಾಚಾರ ನಿಗ್ರಹ ದಳ ಸಹಾಯವಾಣಿ 080 - 22342100.











Click it and Unblock the Notifications