ಕೋಲಾರ; ಶವ ಸಾಗಣೆಗೆ ಅಂಬ್ಯುಲೆನ್ಸ್ ಮಾಲೀಕರ ಗಲಾಟೆ
ಕೋಲಾರ, ಮೇ 23; ಕೋವಿಡ್ನಿಂದ ಮೃತ ಪಟ್ಟ ವ್ಯಕ್ತಿಯ ಶವ ಸಾಗಿಸಲು ಖಾಸಗಿ ಅಂಬ್ಯಲೆನ್ಸ್ ಮಾಲೀಕರು ಹಗಲು ದರೋಡೆಗೆ ಇಳಿದಿದ್ದಾರೆ. ಸರ್ಕಾರ ಅಂಬ್ಯುಲೆನ್ಸ್ಗೆ ದರವನ್ನು ನಿಗದಿ ಮಾಡಿದರೂ ಅದಕ್ಕಿಂತ ಹೆಚ್ಚು ಹಣ ಪಡೆಯುವುದು ಬೆಳಕಿಗೆ ಬಂದಿದೆ.
ಕೋಲಾರ ನಗರದ ಎಸ್. ಎನ್. ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಶವ ಸಾಗಿಸುವ ವಿಚಾರಕ್ಕೆ ಅಂಬ್ಯುಲೆನ್ಸ್ ನಡುವೆ ಗಲಾಟೆ ನಡೆದಿದೆ. ಇಬ್ಬರು ಖಾಸಗಿ ಅಂಬ್ಯುಲೆನ್ಸ್ ಮಾಲೀಕರು ಬಾಡಿಗೆ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು, ದರದ ವಿಚಾರ ಬಯಲಾಗಿದೆ.
ಕೋಲಾರದಿಂದ ಬೂದಿಕೋಟೆಗೆ ಶವ ಸಾಗಣೆ ಮಾಡಲು ಅಂಬರೀಶ್ ಎಂಬ ಅಂಬ್ಯುಲೆನ್ಸ್ ಮಾಲೀಕ 11 ಸಾವಿರ ಬಾಡಿಗೆ ಕೇಳಿದ್ದಾರೆ. ಮಹೇಶ್ ಎನ್ನುವ ಮಾಲೀಕ 4 ಸಾವಿರ ದರ ನಿಗದಿ ಮಾಡಿದ್ದಾರೆ. ಈ ವೇಳೆ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದೆ.

ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಅಂಬ್ಯುಲೆನ್ಸ್ ಸೇವೆಗೆ ದರ ನಿಗದಿ ಮಾಡಿದೆ. ಆದರೆ ಆದೇಶವನ್ನು ಉಲ್ಲಂಘನೆ ಮಾಡಿ ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಚಾಲಕರು ಹಗಲು ದರೋಡೆಗೆ ಇಳಿದಿದ್ದಾರೆ. ಇದರಿಂದಾಗಿ ಮೃತಪಟ್ಟ ರೋಗಿಯ ಸಂಬಂಧಿಕರು ಸಹ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್. ಎನ್. ಆರ್ ಜಿಲ್ಲಾಸ್ಪತ್ರೆ ಬಳಿ ನಡೆದ ಗಲಾಟೆ ಬಗ್ಗೆ ಖಾಸಗಿ ಅಂಬ್ಯುಲೆನ್ಸ್ ಮಾಲೀಕ ಮಹೇಶ್ ಮಾತನಾಡಿದ್ದು, "ನಾನು ಸರ್ಕಾರ ನಿಗದಿ ಪಡಿಸಿರುವ ದರ 4 ಸಾವಿರಕ್ಕೆ ಒಪ್ಪಿಕೊಂಡಿದಕ್ಕೆ ಅಂಬರೀಶ್ ಹಾಗೂ ಸಹಚರರಿಂದ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಸಹ ಸ್ಥಳದಲ್ಲಿದ್ದರು" ಎಂದರು.
"ಗಲಾಟೆ ಮಾಡುತ್ತಿರುವ ಹಲವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಎರಡು ಅಂಗಡಿಗಳನ್ನು ಲೀಸ್ ಪಡೆದು ಡೀಲ್ ಕುದುರಿಸಿಕೊಂಡು ಅಂಬ್ಯುಲೆನ್ಸ್ ನೋಂದಣಿ ಮಾಡಿಕೊಳ್ಳದೆ ಕೇವಲ ಟಿಟಿ ವಾಹನಗಳಿಗೆ ಆ್ಯಂಬುಲೆನ್ಸ್ ಎನ್ನುವ ಲೇಬಲ್ ಹಾಕಿಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ" ಎಂದು ಮಹೇಶ್ ಆರೋಪಿಸಿದ್ದಾರೆ.
ಚಾಲಕರ ಜಗಳದಿಂದಾಗಿ ಕುಟುಂಬಸ್ಥರನ್ನು ಕಳೆದುಕೊಂಡು ಜನರು ಶವ ಸಾಗಿಸಲು ಪರದಾಡುತ್ತಿದ್ದಾರೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.












Click it and Unblock the Notifications