ಮೊದಲ ಪಟ್ಟಿಯಲ್ಲಿ ಹೆಸರು, ರಾಜ್ಯ ರಾಜಕಾರಣಕ್ಕೆ ಕೆ.ಎಚ್.ಮುನಿಯಪ್ಪ: ಕೋಲಾರಕ್ಕೆ ಯಾರು ದಿಕ್ಕು?
ಬೆಂಗಳೂರು, ಮಾರ್ಚ್ 25: ಕರ್ನಾಟಕ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಏನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಓಡಾಡುತ್ತಿತ್ತೋ ಬಹುತೇಕ ಅವರ ಹೆಸರು ಫೈನಲ್ ಲಿಸ್ಟ್ ನಲ್ಲಿದೆ. ಮೊದಲ ಪಟ್ಟಿಯಲ್ಲಿ ಕುತೂಹಲಕ್ಕೆ ಕಾರಣವಾಗಿರುವುದು ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪನವರ ಹೆಸರು.
ಸಿದ್ದರಾಮಯನಯ್ಯನವರ ಹೆಸರು ಕೋಲಾರ ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದಾಗ, ಕೋಲಾರದ ಅಸೆಂಬ್ಲಿ ಕ್ಷೇತ್ರದಲ್ಲಿ ಅವರನ್ನು ಗೆಲ್ಲಿಸಲು ಮುನಿಯಪ್ಪ ಸಹಕರಿಸಬೇಕು, ಮುಂಬರುವ ಲೋಕಸಭಾ ಕ್ಷೇತ್ರದಲ್ಲಿ ಮುನಿಯಪ್ಪನವರಿಗೆ ಸಿದ್ದರಾಮಯ್ಯವರು ಸಹಕರಿಸಬೇಕು ಎನ್ನುವ ಮಾತು ಕೇಳಿ ಬರುತ್ತಿತ್ತು. ಸದ್ಯದ ಮಟ್ಟಿಗೆ ಅದು ಉಲ್ಟಾ ಆಗಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಮೀಸಲು ಕ್ಷೇತ್ರದಿಂದ (ಕ್ರಮ ಸಂಖ್ಯೆ 179) ಕೆ.ಎಚ್.ಮುನಿಯಪ್ಪನವರಿಗೆ ಟಿಕೆಟ್ ಅನ್ನು ನೀಡಲಾಗಿದೆ. ಆ ಮೂಲಕ ರಾಜ್ಯ ರಾಜಕಾರಣಕ್ಕೆ ಬರಬೇಕು ಎನ್ನುವ ಮುನಿಯಪ್ಪನವರ ಆಸೆ ಕೊನೆಗೂ ಈಡೇರಿದಂತಾಗಿದೆ.
Karnataka Congress Candidate List: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಯಾರಿಗೆಲ್ಲಾ ಟಿಕೆಟ್
ಮುನಿಯಪ್ಪನವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸುಳಿವು ಸಿಕ್ಕ ಹಿನ್ನಲೆಯಲ್ಲಿ ದೇವನಹಳ್ಳಿ ಕಾಂಗ್ರೆಸ್ಸಿನಲ್ಲಿ ಬಂಡಾಯ ಎದ್ದಿತ್ತು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎನ್ನುವ ಎಚ್ಚರಿಕೆಯನ್ನು ಕಾಂಗ್ರೆಸ್ ಮುಖಂಡರು ನೀಡಿದ್ದರು. ಈಗ ಭಿನ್ನಮತವನ್ನು ಶಮನಗೊಳಿಸಿ ಮುನಿಯಪ್ಪ ಚುನಾವಣೆಗೆ ಮುನ್ನಡೆಯಬೇಕಿದೆ.
"ಅನೇಕ ಅಭ್ಯರ್ಥಿಗಳು, ಕಾರ್ಯಕರ್ತರು ಸೇರಿ ಪಕ್ಷವನ್ನು ಕಟ್ಟಿದ್ದೇವೆ, ಕ್ಷೇತ್ರಕ್ಕೆ ಮುನಿಯಪ್ಪನವರ ಕೊಡುಗೆ ಏನು? ಒಂದು ವೇಳೆ ಹೈಕಮಾಂಡ್ ಇವರಿಗೇ ಟಿಕೆಟ್ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ" ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್ಸಿನ ಎಲ್.ಎನ್.ನಾರಾಯಣಸ್ವಾಮಿಯವರು ಕಾಂಗ್ರೆಸ್ಸಿನ ವೆಂಕಟಸ್ವಾಮಿಯವರನ್ನು ಹದಿನೇಳು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿಗೆ ಈ ಕ್ಷೇತ್ರದಲ್ಲಿ ಅಷ್ಟೇನೂ ಅಸ್ತಿತ್ವವಿಲ್ಲ. ದೇವನಹಳ್ಳಿ ಜೆಡಿಎಸ್ ಭದ್ರಕೋಟೆಯಾಗಿದೆ. ಮುನಿಯಪ್ಪ ರಾಜ್ಯ ರಾಜಕಾರಣಕ್ಕೆ ಇಳಿದಿರುವುದರಿಂದ ಕೋಲಾರ ಲೋಕಸಭೆಗೆ ಕಾಂಗ್ರೆಸ್ಸಿನಿಂದ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ, ಮುನಿಯಪ್ಪನವರು ಇಲ್ಲಿಗೆ ಬರಬಾರದು ಎಂದೇನಿಲ್ಲ. ಈ ಭಾಗದಲ್ಲಿಎಷ್ಟು ಬೂತ್ ಗಳಿವೆ ಅದರ ಮಾಹಿತಿಯಾದರೂ ಅವರಿಗೆ ಇದೆಯಾ. ಮುನಿಯಪ್ಪನವರಿಗೆ ಟಿಕೆಟ್ ನೀಡಿದರೆ ನಾವು ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವುದು ಸ್ಥಳೀಯ ಕಾಂಗ್ರೆಸ್ ಮುಖಂಡರ ಕೂಗಾಗಿತ್ತು.
ದೇವನಹಳ್ಳಿಯಿಂದ ಟಿಕೆಟ್ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತಾನಾಡಿದ ಕೆ.ಎಚ್.ಮುನಿಯಪ್ಪ, "ಹೈಕಮಾಂಡ್ ಸ್ಪರ್ಧೆ ಮಾಡಬೇಕೆಂದು ಬಯಸಿದ್ದೆ, ಅದರ ಪ್ರಕಾರ ಟಿಕೆಟ್ ನೀಡಲಾಗಿದೆ. ದೇವನಹಳ್ಳಿ ಜೊತೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಸ್ಥಳೀಯವಾಗಿರುವ ಭಿನ್ನಮತಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ"ಎಂದು ಮುನಿಯಪ್ಪ ಹೇಳಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ವೇಳೆ ಕೆ.ಚ್.ಮುನಿಯಪ್ಪನವರು ಕಾಂಗ್ರೆಸ್ ತೊರೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಮುನಿಯಪ್ಪ ಅವರನ್ನು ಭಾರತ್ ಜೋಡೋ ಯಾತ್ರೆಗೆ ಜೋಡಿ ಮಾಡಿಕೊಳ್ಳುವ ಮೂಲಕ ಅವರನ್ನು ಹಿಡಿದಿಡುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು.
ಡಾ. ಜಿ ಪರಮೇಶ್ವರ ಮತ್ತು ಬಿ.ಕೆ. ಹರಿಪ್ರಸಾದ್ ನೇತೃತ್ವದ ತಂಡವೊಂದು ಕೆಎಚ್ ಮುನಿಯಪ್ಪ ಜೊತೆ ಮಾತನಾಡಿ ಅವರ ಕೋಪವನ್ನು ಶಮನಗೊಳಿಸಿದ್ದರು ಎಂದು ಕೂಡಾ ವರದಿಯಾಗಿತ್ತು. ಮುನಿಯಪ್ಪನವರ ಎಲ್ಲಾ ಮನಸ್ತಾಪವನ್ನು ತಿಳಿಗೊಳಿಸಿರುವ ಕೆಪಿಸಿಸಿ ಈಗ ಅವರಿಗೆ ದೇವನಹಳ್ಳಿಯಿಂದ ಟಿಕೆಟ್ ನೀಡಿದೆ. ಕೋಲಾರ ಭಾಗದ ಪ್ರಚಾರದಲ್ಲಿ ಇವರ ಉಪಸ್ಥಿತಿ ಪಕ್ಷಕ್ಕೆ ಇನ್ನಷ್ಟು ಬಲ ನೀಡಲಿದೆ.












Click it and Unblock the Notifications