ಯಲ್ಲಾಪುರ; ಊರವರೇ ಸೇರಿ ನಿರ್ಮಿಸಿದರು ಬಸ್ ತಂಗುದಾಣ
ಕಾರವಾರ, ಅಕ್ಟೋಬರ್ 26: ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ನೆರವಾಗಲು ಸರ್ಕಾರದ ಧನ ಸಹಾಯ ಪಡೆಯದೆ ತಾವೇ ನೂತನ ಬಸ್ ತಂಗುದಾಣ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮಸ್ಥರು.
ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಮಾರ್ಗದಲ್ಲಿ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ಗರ್ಭಿಣಿಯರು ಹಾಗೂ ವಯಸ್ಸಾದವರು ಪರದಾಡುತ್ತಿದ್ದರು. ಈ ಕುರಿತು ಬಹಳ ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತು ಜನರೇ ಉಸಕು, ಕಲ್ಲು, ಸಿಮೆಂಟ್ ಇತ್ಯಾದಿ ಅಗತ್ಯ ಸಾಮಾನುಗಳನ್ನು ಹೊಂದಿಸಿ ಊರಿನ ಟೈಲ್ಸ್ ಮೇಸ್ತ್ರಿ, ವೆಲ್ಡಿಂಗ್ ವರ್ಕ್ಸ್ ಮತ್ತು ಗೌಂಡಿಗಳ ಸಹಾಯದಿಂದ ಕೇವಲ ಒಂದು ವಾರದ ಅವಧಿಯಲ್ಲಿ ತಂಗುದಾಣ ನಿರ್ಮಿಸಿದ್ದಾರೆ.

ತಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ಬಸ್ ತಂಗುದಾಣವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಬಸ್ ನಿಲ್ದಾಣದ ಹೊರಗೆ ಊರಿನ ಸಂಸ್ಕೃತಿ, ಬೇಸಾಯ ಮತ್ತು ಹಾಲು ಉತ್ಪಾದನೆ ಕೇಂದ್ರದ ಚಿತ್ರಗಳನ್ನು ಬಿಡಿಸಲಾಗಿದ್ದು, ನೋಡಲು ಆಕರ್ಷಕವಾಗಿದೆ. ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಊರಿನ ಹಿರಿಯರು ಈ ತಂಗುದಾಣವನ್ನು ಉದ್ಘಾಟನೆಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಊರ ಜನರೇ ಹಣ ಕೂಡಿಸಿ ಅಗತ್ಯವಿದ್ದವರಿಗೆ ಬಸ್ ತಂಗುದಾಣ ನಿರ್ಮಿಸಿರುವ ಕೆಲಸ ನಿಜಕ್ಕೂ ಶ್ಲಾಘನೀಯ.












Click it and Unblock the Notifications