ಈ ಬಾರಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಪಕ್ಷ ಯಾವುದು?
ಕಾರವಾರ, ಅಕ್ಟೋಬರ್ 25: ನಾಪತ್ತೆಯಾಗಿದ್ದ ಬಿಜೆಪಿಯ ಮಾಜಿ ಸಚಿವ ಆನಂದ ಅಸ್ನೋಟಿಕರ್ ರಾಜಕೀಯ ಅಖಾಡದಲ್ಲಿ ಮತ್ತೆ ಪ್ರತ್ಯಕ್ಷವಾಗಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಕಳೆದ ಅಂದರೆ 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಸೈಲ್ ವಿರುದ್ಧ ಸೋತ ನಂತರ ಆನಂದ್ ಕ್ಷೇತ್ರದಿಂದ ಮರೆಯಾಗಿದ್ದರು. ಆದರೆ ಇದೀಗ 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಥತೆ ನಡೆಸಿದ್ದಾರೆ.
ಜೆಡಿಎಸ್ ಸೇರಲಿದ್ದಾರೆ ಆನಂದ್ ಅಸ್ನೋಟಿಕರ್
ಇದುವರೆಗೂ ಬಿಜೆಪಿಯಲ್ಲಿರುವ ಆನಂದ್ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷದದಿಂದ ಸ್ಪರ್ಧೆ ನಡೆಸಲ್ಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ ಅವರು ಜೆಡಿಎಸ್ ನಿಂದ ಕಣಕ್ಕಿಳಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇದುವರೆಗೂ ಆನಂದ್ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ.
ಟಿಕೆಟ್ ಖಾತರಿ ಕೊಟ್ಟರೆ ಮಾತ್ರ ಬಿಜೆಪಿ
ಇನ್ನೊಂದು ಕಡೆ ಬಿಜೆಪಿಯಲ್ಲಿ ಸ್ಪರ್ಧಿಸಬೇಕಾದರೆ ನವೆಂಬರ್ ಒಳಗೆ ಟಿಕೆಟ್ ಖಾತರಿ ನೀಡುವಂತೆ ರಾಜ್ಯ ನಾಯಕರುಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರ ಬಿಟ್ಟರೂ ತಗ್ಗಿಲ್ಲ ಪ್ರಭಾವ
ಆನಂದ್ ಅಸ್ನೋಟಿಕರ್ ಕಳೆದ ಚುನಾವಣೆ ಬಳಿಕ ಕ್ಷೇತ್ರದಿಂದ ಪಲಾಯನ ಗೊಂಡಿರುವುದು ಮತದಾರರಲ್ಲಿ ಬೇಸರ ಉಂಟು ಮಾಡಿದೆ. ಆನಂದ್ ಕ್ಷೇತ್ರ ಬಿಟ್ಟಿದ್ದರೂ ಅವರ ಬೆಂಬಲಿತ ಪಡೆ ಮಾತ್ರ ಈವರೆಗೆ ಅವರನ್ನು ಬಿಟ್ಟಿಲ್ಲ. ಜೆಡಿಎಸ್ ಆಗಲಿ, ಬಿಜೆಪಿಯಾಗಲಿ ಈ ಬೆಂಬಲಿಗರು ಜತೆಗಿರುವುದು ಅವರ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಆನಂದ್ ಎದುರಾಳಿ ಸತೀಶ್ ಸೈಲ್
ಅಲ್ಲದೇ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸತೀಶ್ ಸೈಲ್ ಹೊರತುಪಡಿಸಿ ಇನ್ನಾರೂ ಕೂಡ ಎದುರಾಳಿ ಇಲ್ಲದಿರುವುದು ಅವರ ಆನಂದವನ್ನು ಇಮ್ಮಡಿಗೊಳಿಸಿದೆ.
ಆನಂದ್ ಗೆ ಶನಿ ಕಾಟವಂತೆ
ಹೌದು. ಇಂಥಹದ್ದೊಂದು ಮಾತು ಆನಂದ್ ಅಸ್ನೋಟಿಕರ್ ಅವರ ಆಪ್ತ ವಲಯದಿಂದಲೇ ಕೇಳಿ ಬಂದಿದೆ. ಅವರಿಗೆ ಶನಿ ಕಾಟವಿದ್ದು, ಅದು ಈ ತಿಂಗಳ 28ಕ್ಕೆ ಮುಗಿಯಲಿದೆಯಂತೆ. ಅದರ ನಂತರವೇ ಅವರು ರಾಜಕೀಯಕ್ಕೆ ರೀ ಎಂಟ್ರಿ ಆಗೋದು ಅಂತ ಆಪ್ತ ವಲಯ ತಿಳಿಸಿದೆ.
ಇನ್ನು ಇತ್ತೀಚೆಗಷ್ಟೇ ಶಿರಸಿಯ ಪ್ರಖ್ಯಾತ ಜ್ಯೋತಿಷಿಯೊಬ್ಬರ ಬಳಿ ಅವರು ಶಾಸ್ತ್ರ ಕೇಳಿದ್ದಾರೆ ಅಂತ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಆನಂದ್ ಅಸ್ನೋಟಿಕರ್ ರಾಜಕೀಯ ಪುನರಾಗಮನ ಕುತೂಹಲ ಹುಟ್ಟಿಸಿದೆ.