ಕಾರವಾರದಲ್ಲಿ ಏನಿದು ಸಾಗರ ಮಾಲಾ ಯೋಜನೆ?; ಮೀನುಗಾರರ ವಿರೋಧ ಏಕೆ?

ಕಾರವಾರ, ಜನವರಿ 16: ಕಳೆದ ನಾಲ್ಕು ತಿಂಗಳಿನಿಂದ ಕಾರವಾರದಲ್ಲಿ ಮೀನುಗಾರರು ಸಾಗರ ಮಾಲಾ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ವಿರೋಧ ನಾಲ್ಕು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಯೋಜನೆಯಿಂದಾಗಿ ತಮ್ಮ ಸ್ಥಳ ಕಳೆದುಕೊಳ್ಳುವ ಜೊತೆ ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಮೀನುಗಾರರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಜೊತೆಗೆ ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಿ, ಮೀನುಗಾರರ ಉದ್ಯೋಗ ಕೂಡ ಕಡಿತವಾಗುತ್ತದೆ ಎನ್ನುವುದು ಮೀನುಗಾರರ ಆತಂಕ.

ಆದರೆ ಹಣ ಮಂಜೂರಾದ್ದರಿಂದ ಬಂದರು ಇಲಾಖೆ ಪೊಲೀಸ್ ಇಲಾಖೆಯ ಬಂದೋಬಸ್ತಿನಲ್ಲಿ ಕಾಮಗಾರಿ ಪ್ರಾರಂಭಿಸಲು ಮುಂದಾಗಿದೆ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆಗೆ ಕಾರಣವಾಗಿರುವ ಈ ಯೋಜನೆ ಸ್ವರೂಪ ಏನು? ಮೀನುಗಾರರು ಇದಕ್ಕೆ ಏಕೆ ವಿರೋಧಿಸುತ್ತಿದ್ದಾರೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ...

 ಏನಿದು ಸಾಗರ ಮಾಲಾ ಯೋಜನೆ?

ಏನಿದು ಸಾಗರ ಮಾಲಾ ಯೋಜನೆ?

ಸಾಗರ ಮಾಲಾ ಯೋಜನೆಯು ವಾಣಿಜ್ಯ ಬಂದರನ್ನು ರಾಷ್ಟ್ರಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಬಂದರು ವಿಸ್ತರಣೆ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಇದನ್ನು ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ. ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಕಾರ್ಯವನ್ನು ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ.

ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

 ಹೆಚ್ಚುವರಿ ಹಡಗು ನಿಲ್ಲುವ ಹಡಗುಕಟ್ಟೆ

ಹೆಚ್ಚುವರಿ ಹಡಗು ನಿಲ್ಲುವ ಹಡಗುಕಟ್ಟೆ

ಎರಡನೇ ಹಂತದ ಕಾಮಗಾರಿಯಿಂದ ಐದು ಹೆಚ್ಚುವರಿ ಹಡಗುಗಳನ್ನು ನಿಲ್ಲಿಸಲು ಅನುಕೂಲವಾಗಲಿದೆ. ಎರಡನೇ ಹಂತದ ವಿಸ್ತರಣೆ ಯೋಜನೆಯಂತೆ ಒಟ್ಟು 1508 ಮೀಟರ್ ಉದ್ದದಷ್ಟು ಹಡಗುಕಟ್ಟೆ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಇದಕ್ಕಾಗಿ ಕಡಲತೀರದ ಮೇಲಿನ ಉದ್ಯಾನದ ಸಮೀಪದಿಂದ ಪೂರ್ವದೆಡೆಗೆ 1160 ಮೀಟರ್ ನಷ್ಟು ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಈಗಾಗಲೇ ಮಣ್ಣು ಪರೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಸದ್ಯ 2017-18ನೇ ಸಾಲಿನ ಬಜೆಟ್ ‍ನಲ್ಲಿ ಬಿಡುಗಡೆಯಾದ 125 ಕೋಟಿ ರೂ. ಹಣದಲ್ಲಿ 820 ಮೀಟರ್ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ. ಉಳಿದ ಹಣ ಬಿಡುಗಡೆಯಾದ ನಂತರ ಬಾಕಿ ಕಾಮಗಾರಿ ನಡೆಸಲಾಗುತ್ತದೆ. ತಡೆಗೋಡೆ ಸುಮಾರು 17 ರಿಂದ 10 ಮೀಟರ್ ಅಗಲಕ್ಕೆ ಸಮುದ್ರ ಮಟ್ಟದಿಂದ ನಾಲ್ಕೈದು ಮೀಟರ್ ನಷ್ಟು ಎತ್ತರಕ್ಕೆ ನಿರ್ಮಾಣವಾಗಲಿದೆ.

 ಸರ್ಕಾರಕ್ಕೆ ಆದಾಯ ಕೊಡುವ ಯೋಜನೆ

ಸರ್ಕಾರಕ್ಕೆ ಆದಾಯ ಕೊಡುವ ಯೋಜನೆ

ವಾಣಿಜ್ಯ ಬಂದರಿನ ವಿಸ್ತರಣೆಗಾಗಿ ಕಡಲ ತೀರದ ಉದ್ಯಾನದಲ್ಲಿರುವ ಪ್ಯಾರಾಗೋಲಾದ ಸಮೀಪದಿಂದ 840 ಮೀಟರ್ ನಷ್ಟು ಉದ್ದದ ತಡೆಗೋಡೆ ನಿರ್ಮಾಣಕ್ಕೆ 126 ಕೋಟಿ ಹಣ ಬಿಡುಗಡೆಯಾಗಿದೆ. ಬಂದರು ವಿಸ್ತರಣೆ ಆದರೆ ರಾಜ್ಯದ ಮೊದಲ ಅತೀ ದೊಡ್ಡ ಬಂದರಾಗಿ ಕಾರವಾರದ ವಾಣಿಜ್ಯ ಬಂದರು ರೂಪಗೊಳ್ಳಲಿದ್ದು, ವಾಣಿಜ್ಯ ವಹಿವಾಟು, ಆದಾಯ ಸರ್ಕಾರಕ್ಕೆ ಹೆಚ್ಚಾಗಲಿದೆ, ಪ್ರವಾಸೋದ್ಯಮ, ಉದ್ಯೋಗ ದೊರೆಯುವ ಜೊತೆ ಕಾರವಾರ ನಗರಿ ಆರ್ಥಿಕ ಪ್ರಗತಿ ಕಾಣಲಿದೆ ಎಂಬುದು ಸರ್ಕಾರದ ವಾದವಾಗಿದೆ.

 ಬಂದರು ವಿಸ್ತರಣೆಗೆ ಮೀನುಗಾರರು ವಿರೋಧಿಸುತ್ತಿರುವುದೇಕೆ?

ಬಂದರು ವಿಸ್ತರಣೆಗೆ ಮೀನುಗಾರರು ವಿರೋಧಿಸುತ್ತಿರುವುದೇಕೆ?

ಈ ಯೋಜನೆಯಿಂದ ತಮ್ಮ ಮೂಲ ಸ್ಥಳವನ್ನು ಕಳೆದುಕೊಳ್ಳಬೇಕೆಂಬುದು ಮೀನುಗಾರರ ಆತಂಕ. ಜೊತೆಗೆ ಈ ಯೋಜನೆಯಿಂದ ಕಾರವಾರದ ಕಡಲತೀರ ಸಂಪೂರ್ಣ ಬದಲಾಗಲಿದ್ದು, ಮೂಲ ರೂಪ ಕಳೆದುಕೊಳ್ಳಲಿದೆ. ಹೀಗಾಗಿ ಹಲವು ಬಾರಿ ಬಂದರು ಇಲಾಖೆ ಹಾಗೂ ಬಂದರು ಸಚಿವರಿಗೆ ಮನವಿ ಸಲ್ಲಿಸುವ ಜೊತೆಗೆ ಮಾತುಕತೆ ಸಹ ನಡೆದಿತ್ತು.

ಆದರೆ ಹಲವು ತಿಂಗಳಿಂದ ಮೀನುಗಾರಿಕಾ ಇಲಾಖೆಗೆ ಮನವಿ ನೀಡಿ ಹೋರಾಟ ನಡೆಸಿದರೂ ಕಾಮಗಾರಿ ಪ್ರಾರಂಭಿಸಲಾಗಿದೆ. ಹೋರಾಟಗಾರರನ್ನು ಬಂಧಿಸಲಾಗಿದೆ. ಈಗ ಚಿಕ್ಕದಾಗಿ ಹೋರಾಟ ಮಾಡಿದ್ದೇವೆ, ಮುಂದೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು, ಇಂದಿನಿಂದಲೇ ನಿರಂತರ ಹೋರಾಟ ಮುಂದುವರೆಯಲಿದೆ. ಕಾಮಗಾರಿ ಸ್ಥಗಿತಗೊಳಿಸಿ ಯೋಜನೆ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮೀನುಗಾರ ಸಂಘಟನೆ ಎಚ್ಚರಿಕೆ ನೀಡಿ, ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+