ಕಾರವಾರ : ಬಿಜೆಪಿ ನಾಯಕರ ನಡುವೆ ವಾಕ್ಸಮರ!
ಕಾರವಾರ, ಜನವರಿ 10 : 'ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಮಗೆ 'ಭೂಗತ ಪಾತಕಿಯ ಸಂಪರ್ಕ ಇದೆ. ದಾವೂದ್ ಇಬ್ರಾಹಿಂ ಒಡನಾಡಿ ಶರದ್ ಶೆಟ್ಟಿ ನನ್ನ ಭಾವ. ನನ್ನ ಬಳಿ 4 ಗನ್ ಇದೆ. ನನ್ನ ಇನ್ನೊಂದು ಮುಖ ನೀವು ನೋಡಿಲ್ಲ ಎಂದು ಕಾರವಾರ ಬಿಜೆಪಿ ಘಟಕದ ಮಾಜಿ ವಕ್ತಾರ ನಾಗರಾಜ ಜೋಶಿ ಅವರಿಗೆ ಬೆದರಿಕೆ ಹಾಕಿದ್ದಾರೆ' ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡರು. 'ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿದ್ದು, ಶನಿವಾರ ಅವರು ತಾಲೂಕು ಕಾರ್ಯಕಾರಣಿ ಸಭೆ ನಡೆಸಿದ್ದರು. ಈ ವೇಳೆ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೊಳಂಕರ್ ಗೈರಾಗಿದ್ದರು' ಎಂದರು.
ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ರಾಜನ್ ಕೊಳಂಕರ್ ಅವರನ್ನು ವಜಾ ಮಾಡುವುದಾಗಿ ತಿಂಗಳೆ ತಿಳಿಸಿದ್ದರು. ಆದರೆ, ಅಂದೇ ಗ್ರಾಮೀಣ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ನಾಗರಾಜ್ ಜೋಶಿಯವರು ಸ್ಪಷ್ಟಪಡಿಸಲು ಮುಂದಾದ ವೇಳೆ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮುಖಂಡ ಪ್ರಸಾದ್ ಕಾರವಾರಕರ್ ಆರೋಪಿಸಿದ್ದಾರೆ.
'ರಾಷ್ಟ್ರೀಯ ಭದ್ರತೆಯೇ ಪಕ್ಷದ ಮೊದಲ ಆದ್ಯತೆಯಾಗಿರುವಲ್ಲಿ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುವಂತೆ ಮಾತನಾಡಿರುವ ಅವರನ್ನು ಜಿಲ್ಲೆಯ ಉಸ್ತುವಾರಿ ಸ್ಥಾನದಿಂದ ಕೈ ಬಿಡಬೇಕು, ಅವರನ್ನು ಪಕ್ಷದಿಂದಲೂ ಉಚ್ಛಾಟಿಸಬೇಕು' ಎಂದು ಒತ್ತಾಯಿಸಿದರು.
ಬಿಜೆಪಿಯಲ್ಲಿ ಮೂಲೆಗುಂಪಾದ ಅಸ್ನೋಟಿಕರ್ ಸವಾರಿ ಯಾವ ಪಕ್ಷದತ್ತ
'ತಮಗೆ ಭೂಗತ ಪಾತಕಿಗಳ ಸಂಪರ್ಕ ಇದೆ ಎಂದು ಹೇಳಿಕೊಂಡಿದ್ದರಿಂದ, ಕೇಂದ್ರ ಸರ್ಕಾರ ಹಾಗೂ ರಾಜ್ಯದ ಮುಖಂಡರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಜೊತೆಗೆ ಜೋಶಿಯವರಿಗೆ ರಕ್ಷಣೆ ನೀಡಬೇಕು' ಎಂದು ಒತ್ತಾಯಿಸಿದರು.
ಆನಂದ್ ಅಸ್ನೋಟಿಕರ್ ಇನ್ನೂ ಜೆಡಿಎಸ್ ಸೇರ್ಪಡೆಗೊಂಡಿಲ್ಲ
'ತಿಂಗಳೆಯವರು ಪಂಚತಾರಾ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಪಕ್ಷದ ಸಿದ್ದಾಂತವನ್ನು ಅವರು ಎಂದೂ ಪಾಲಿಸಿದವರಲ್ಲ. ಪಕ್ಷದ ವಿಸ್ತಾರಕ ಯೋಜನೆಯಡಿ ತೆರಳಿದವರು. ಆಯಾ ಕ್ಷೇತ್ರದ ಕಾರ್ಯಕರ್ತರ ಮನೆಗಳಲ್ಲಿಯೇ ವಾಸ ಮಾಡಬೇಕು ಎಂದು ರಾಜ್ಯದ ಮುಖಂಡರು ಸೂಚನೆ ನೀಡಿದ್ದರು. ಆದರೆ, ಅವರು ಎಲ್ಲಿಯೂ ವಾಸ್ತವ್ಯ ಹೂಡದೆ ಐಶಾರಾಮಿ ಹೋಟೆಲ್, ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರು' ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಕಾಂತ ಹರಿತಂತ್ರ, ನಾರಾಯಣ ಅಂಕೋಲೆಕರ್, ಸತೀಶ್, ಪೂರ್ಣಿಮಾ ಮಾಹೇಕರ್, ನಾಗರಾಜ್ ಜೋಶಿ ಉಪಸ್ಥಿತರಿದ್ದರು.