ಮಾರ್ಚ್ 19 ಶಿರಸಿ ಮಾರಿಕಾಂಬಾ ದೇವಿ ಜಾತ್ರೆ: ಈ ಬಾರಿ ಭಕ್ತರು ತಿಳಿದುಕೊಳ್ಳಲೇ ಬೇಕಾದ ವಿಚಾರ ಇಲ್ಲಿದೆ
ಕಾರವಾರ, ಜನವರಿ 15: ರಾಜ್ಯದ ಅತಿ ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಮಾರ್ಚ್ 19 ರಿಂದ 27ರವರೆಗೆ ಹಮ್ಮಿಕೊಳ್ಳಲು ಭಾನುವಾರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮೂಹೂರ್ತ ಘೋಷಣಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಅಂಗವಾಗಿ ಜನವರಿ31 ರಂದು ಬೆಳಿಗ್ಗೆ 11.21ಕ್ಕೆ ಶ್ರೀ ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು. ಫೆ.27ರಂದು ರಾತ್ರಿ 9ಗಂಟೆ ನಂತರ ಮೊದಲನೇ ಹೊರಬೀಡು(ಪೂರ್ವ ದಿಕ್ಕಿಗೆ), ಮಾ.1ರಂದು ರಾತ್ರಿ 9ಗಂಟೆ ನಂತರ ಎರಡನೇ ಹೊರಬೀಡು (ಉತ್ತರ ದಿಕ್ಕಿಗೆ) ಮಾ.5ರಂದು ರಾತ್ರಿ 9ಗಂಟೆ ನಂತರ ಮೂರನೇ ಹೊರಬೀಡು (ಪೂರ್ವ ದಿಕ್ಕಿಗೆ), ಮಾ.8ರಂದು ಮಧ್ಯಾಹ್ನ ರಥದ ಬಗ್ಗೆ ಪೂಜಾರಿ, ಆಚಾರಿ ಮತ್ತು ಬಡಗಿಯವರಿಂದ ವೃಕ್ಷ ಪೂಜೆ ನಡೆಯಲಿದೆ.

ಮಾ.8ರಂದು ರಾತ್ರಿ 9ಗಂಟೆ ನಂತರ ನಾಲ್ಕನೇ ಹೊರಬೀಡು (ಉತ್ತರ ದಿಕ್ಕಿಗೆ), ಮಾ.12ರಂದು ಬೆಳಿಗ್ಗೆ ಶ್ರೀದೇವಿ ರಥದ ಮರ ತರುವುದು, ಮಾ.12ರಂದು ರಾತ್ರಿ 9.45ರ ನಂತರ ಅಂಕೆಯ ಹೊರಬೀಡು (ಪೂರ್ವ ದಿಕ್ಕಿಗೆ), ಮಾ.13ರಂದು ಮಧ್ಯಾಹ್ನ ಅಂಕೆ ಹಾಕುವುದು ಹಾಗೂ ಶ್ರೀದೇವಿಯ ವಿಗ್ರಹ ವಿಸರ್ಜನೆ, ಮಾ.19ರಂದು ಮಧ್ಯಾಹ್ನ ಶ್ರೀ ದೇವಿಯ ರಥದ ಕಲಶ ಪ್ರತಿಷ್ಠೆ ಹಾಗೂ ರಾತ್ರಿ ಶ್ರೀ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ, ಮಾ.20ರಂದು ಬೆಳಿಗ್ಗೆ ಶ್ರೀ ದೇವಿಯ ರಥಾರೋಹಣ, ಶೋಭಾಯಾತ್ರೆ ಮಧ್ಯಾಹ್ನ ಜಾತ್ರಾ ಗದ್ದುಗೆಯಲ್ಲಿ ಶ್ರೀ ದೇವಿಯ ಸ್ಥಾಪನೆ ನಡೆಯಲಿದೆ.
ಮಾ.21ರಂದು ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆ ಸ್ವೀಕಾರ ಆರಂಭವಾಗಲಿದ್ದು, ಮಾ.27ರಂದು ಬೆಳಿಗ್ಗೆ 10.41ಕ್ಕೆ ಜಾತ್ರಾ ಮುಕ್ತಾಯವಾಗಲಿದೆ. ದೇವಿ ಜಾತ್ರಾ ಗದ್ದುಗೆಯಿಂದ ಏಳುವುದ ಏ.9 ರಂದು ಬೆಳಗ್ಗೆ ಯುಗಾದಿ ಪ್ರತಿಷ್ಠೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಸಭೆಯಲ್ಲಿ ತಿಳಿಸಲಾಗಿದೆ.
ಇನ್ನು ಶಾಸಕ ಭೀಮಣ್ಣ ನಾಯ್ಕ ಸಭೆಗೆ ಚಾಲನೆ ನೀಡಿ ಮಾತನಾಡಿ, "ಎರಡು ವರ್ಷಗಳಿಗೊಮ್ಮೆ ಬಹಳ ವಿಜೃಂಭಣೆಯಿಂದ ಮಾರಿಕಾಂಬಾ ದೇವಿಯ ಜಾತ್ರೆಯು ನಡೆಯುತ್ತದೆ. ಜಾತ್ರೆಯಲ್ಲಿ ಬಾಬುದಾರರ ಪ್ರಾಮುಖ್ಯತೆ ಬಹಳ ದೊಡ್ಡದಿರುತ್ತದೆ. ಜಾತ್ರೆಗೆ ಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಸಭೆ ನಡೆಸಲಾಗಿದೆ. ಈ ಬಾರಿಯ ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ನಾವೆಲ್ಲರೂ ಸೇರಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸೋಣ" ಎಂದರು.

"ಜಾತ್ರೆಗೆ ಬರುವ ಭಕ್ತಾದಿಗಳಿಗೆ ತೊಂದರೆಗಳು ಆಗದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಾತ್ರಾ ಗದ್ದುಗೆಯಲ್ಲಿ ಶ್ರೀ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನೂಕು ನುಗ್ಗಲು ಆಗದಂತೆ ನೋಡಿಕೊಳ್ಳಬೇಕಿದೆ"ಎಂದು ಸಾರ್ವಜನಿಕರು ಸಭೆಗೆ ತಿಳಿಸಿದರು.
ಕಾರ್ಯಕರ್ತರಿಗೆ, ಗಣ್ಯರಿಗೆ ನೀಡುವ ಪಾಸ್ ವಿಚಾರ ಸೇರಿ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಭೆಗೆ ತಿಳಿಸಿದರು.
ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ, ಶಿರಸಿ ಸಹಾಯಕ ಆಯುಕ್ತ ಅಪರ್ಣ ರಮೇಶ, ಡಿವೈಎಸ್ಪಿ ಗಣೇಶ ಕೆ .ಎಲ್, ಸಿಪಿಐ ರಾಮಚಂದ್ರ ನಾಯಕ್, ಎಸ್ .ಪಿ ಶೆಟ್ಟಿ, ದೇವಸ್ಥಾನದ ಧರ್ಮದರ್ಶಿ ಮಂಡಳಿ ಸದಸ್ಯರು, ಬಾಬುದಾರರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications