ಮಿಲೇನಿಯಂ ಮತದಾರರಿಗೆ ಸ್ಕೂಬಾ ಡೈವಿಂಗ್ ಗಿಫ್ಟ್ ನೀಡಿದ ಉ.ಕ ಜಿಲ್ಲಾಡಳಿತ
ಕಾರವಾರ ಮಾ. 17: ಜನವರಿ 1, 2000ನೇ ಇಸವಿಯಲ್ಲಿ ಜನಿಸಿದ ಸಹಸ್ರಮಾನದ ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಕಾರವಾರ ಸಮೀಪದ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಸ್ಕೂಬಾ ಡೈವಿಂಗ್ ಏರ್ಪಡಿಸಿತ್ತು. ಈ ಮೂಲಲ ಮತದಾನ ಜಾಗೃತಿ ಮೂಡಿಸಲಾಯಿತು.
ಶನಿವಾರ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಹಸ್ರಮಾನದ ಮತದಾರರಿಗೆ ಮತದಾರ ಚೀಟಿ ವಿತರಿಸುವ ಮೂಲಕ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ವಿನೂತನ ಸಂದೇಶ ನೀಡಿದರು.

ಬೆಳ್ಳಂಬೆಳಗ್ಗೆ ಕಾಳಿ ಸೇತುವೆ ಸಮೀಪದ ದೇವಭಾಗ್ ರೆಸಾರ್ಟ್ ತರಬೇತಿ ಕೇಂದ್ರದಿಂದ ಅಂದಾಜು 20 ಕಿಲೋ ಮೀಟರ್ ದೂರದ ದೇವಭಾಗ್ ಸಮುದ್ರ ದ್ವೀಪ ಲೈಟ್ಹೌಸ್ಗೆ ತೆರಳಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರ ನೇತೃತ್ವದಲ್ಲಿ ಸಹಸ್ರಮಾನ ಮತದಾರರ ತಂಡ ಅರಬ್ಬಿ ಸಮುದ್ರದ ಕಡಲಾಳದಲ್ಲಿ ಸ್ಕೂಬಾ ಡೈವಿಂಗ್ ಮಾಡಿತು.
ಕಡಲಾಳದಲ್ಲಿ ಸಹಸ್ರಮಾನದ ಮತದಾರರಿಗೆ ಮತದಾರ ಚೀಟಿ ವಿತರಿಸಲು ಸಿದ್ಧಗೊಳಿಸಿದ ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರು ಸಹಸ್ರಮಾನದ ಮತದಾರರಿಗೆ ಮತದಾರರ ಚೀಟಿ ವಿತರಿಸಿದರು.
ಕಾರವಾರ ತಾಲೂಕಿನ ಕಿನ್ನರದ ಅಕ್ಷಯ್ ವಿಲಾಸ ಗೋವೇಕರ್, ಸದಶಿವಗಡದ ಪೂನಂ ರವಿ ಗಜನೀಕರ್, ಭಟ್ಕಳ ತಾಲೂಕು ಕಾಯ್ಕಿಣಿಯ ದೀಕ್ಷಾ ಮುಕುಂದ ಮಡಿವಾಳ ಹಾಗೂ ಕಾರವಾರದ ಐಶ್ವರ್ಯ ಅವರಿಗೆ ಮತದಾರರ ಚೀಟಿ ವಿತರಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ವಿನೂತನ ಸಂದೇಶ ನೀಡಿದರು.

ನಂತರ ಸದಾಶಿವಗಡ ಜಂಗಲ್ಲಾಡ್ಜ್ ರೆಸಾರ್ಟ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ, ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಪ್ರತಿ ಮತವೂ ಒಂದು ಹನಿ ನೀರಿನಂತೆ ಇದ್ದು, ಪ್ರತಿ ಮತವೂ ಅಮೂಲ್ಯ ಮತವಾಗಿರುರುತ್ತದೆ ಎಂದು ಹೇಳಿದರು.
ಮತದಾನಕ್ಕೆ ಅರ್ಹರಾದ ಪ್ರತಿಯೊಬ್ಬ ಮತದಾರರನ್ನು ಗುರುತಿಸಿ ಅವರನ್ನು ಮತದಾನ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜನವರಿ 1, 2000 ನೇ ಇಸವಿಯಲ್ಲಿ ಜನಿಸಿದವರನ್ನು ಮಿಲೇನಿಯಮ್ ಮತದಾರರು ಎಂದು ಗುತಿಸಲಾಗಿದೆ. ಇಂತಹ ಮಿಲೇನಿಯಮ್ ಮತದಾರರು ಜಿಲ್ಲೆಯಲ್ಲಿ 13 ಜನ ಇರುವರು ಎಂದರು.
ಉ.ಕ. ಜಿಲ್ಲೆಯಲ್ಲಿ ಒಟ್ಟೂ 11,34,513 ಮತದಾರರು ಇರುವರು. ಇದರಲ್ಲಿ 5,74,532 ಪುರುಷ ಮತ್ತು 5,59,981 ಮಹಿಳಾ ಹಾಗೂ 13,612 ವಿಕಲಚೇತನ ಮತದಾರರು ಇದ್ದಾರೆ. 362 ಮತದಾರರು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. 1,434 ಮತಗಟ್ಟೆಗಳಿವೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿಕಲಚೇತನ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೆರವು ಎಂಬ ಬಿತ್ತಿ ಪತ್ರವನ್ನು ಜಿಲ್ಲಾಧಿಕಾರಿ ಮತ್ತು ಸಿಇಒ ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ ಉಪಸ್ಥಿತರಿದ್ದರು.












Click it and Unblock the Notifications