ಉದ್ಧವ್ ಠಾಕ್ರೆ ಹೇಳಿಕೆ; ಪ್ರತಿಕ್ರಿಯೆಗೆ ನಿರಾಕರಿಸಿದ ಅನಂತಕುಮಾರ್ ಹೆಗಡೆ!
ಕಾರವಾರ, ಜನವರಿ 18: " ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸೋಮವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಲು ಜಿಲ್ಲಾ ಕೇಂದ್ರ ಕಾರವಾರಕ್ಕೆ ಸಂಸದರು ಬಂದಿದ್ದರು. ಮಾಧ್ಯಮ ಪ್ರತಿನಿಧಿಗಳು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದರು.
ಆಗ ಸಂಸದರು, "ವಿಚಾರ ಮಾಡ್ತೇನೆ... ಧನ್ಯವಾದಗಳು" ಎಂದು ಕೈಮುಗಿದು ಕಾರು ಹತ್ತಿ ಪಲಾಯನ ಮಾಡಿದ್ದಾರೆ. ಪದೇ ಪದೇ ಗಡಿ ತಂಟೆ ಎದುರಾಗುತ್ತಿದ್ದರೂ ಗಡಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಜನಪ್ರತಿನಿಧಿಗಳಾಗಲಿ, ಕನ್ನಡ ಪರ ಸಂಘಟನೆಗಳಾಗಲಿ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಹೀಗಾಗಿ ಪದೇ ಪದೇ ಮಹಾರಾಷ್ಟ್ರದ ಜನಪ್ರತಿನಿಧಿಗಳು ತಮ್ಮ ಉದ್ಧಟತನದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದಿಂಚೂ ಕೊಡಲ್ಲ; ಕಾರವಾರದಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, "ಉದ್ಧವ್ ಠಾಕ್ರೆ ಕೇವಲ ರಾಜಕಾರಣ ಮಾಡುತ್ತಾರೆ. ಕರ್ನಾಟಕದ ಜನತೆ ಯಾರೂ ಮಹಾರಾಷ್ಟ್ರಕ್ಕೆ ಸೇರಲ್ಲ. ಮಹಾರಾಷ್ಟ್ರ ಸರ್ಕಾರ ಜನರಿಗಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ರಾಷ್ಟ್ರವಾದಿ, ಕಾಂಗ್ರೆಸ್, ಶಿವಸೇನೆ ಸೇರಿ ತೀನ್ ತಿಗಡಾ, ಕಾಮ್ ಬಿಗಡಾ ಆಗಿದೆ" ಎಂದು ವ್ಯಂಗ್ಯವಾಡಿದರು.
"ಅವರು ಎಷ್ಟೇ ಬೊಬ್ಬೆ ಹೊಡೆದರೂ ಅದಕ್ಕೆ ಬೆಲೆ ಇಲ್ಲ. ರಾಜ್ಯದಲ್ಲಿರುವ ಕನ್ನಡಿಗರು, ಮರಾಠಿಗರು ಎಲ್ಲರೂ ಒಂದೇ. ಉದ್ಧವ್ ಠಾಕ್ರೆ ಬೆಂಬಲದಿಂದ ಸಿಎಂ ಆಗಿರೋದು ಅವರ ಭಾಗ್ಯ. ಅವರ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಒಂದಿಂಚು ಭೂಮಿಯನ್ನೂ ಕೊಡಲ್ಲ" ಎಂದು ಹೇಳಿದರು.











Click it and Unblock the Notifications