ದಾರಿ ತಪ್ಪಿದ್ದ ವ್ಯಕ್ತಿಯನ್ನು ಮಗನೊಟ್ಟಿಗೆ ಸೇರಿಸಿದ ರೈಲ್ವೆ ಅಧಿಕಾರಿ
ಕಾರವಾರ, ಏಪ್ರಿಲ್ 5; ಮಗನನ್ನು ಭೇಟಿಯಾಗಿ ಮನೆಗೆ ಮರಳುವಾಗ ದಾರಿ ತಪ್ಪಿದ ತಂದೆಯನ್ನು ಮರಳಿ ಮಗನೊಟ್ಟಿಗೆ ಸೇರಿಸುವ ಮೂಲಕ ರೈಲ್ವೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಆಂಧ್ರಪ್ರದೇಶದ ಪಿಡುಗುರಲ್ಲಾದ ನಿವಾಸಿ ಬೊಮ್ಮ ನಾಯಕ ಅವರ ಪುತ್ರ ಕಾರವಾರ ಸೀಬರ್ಡ್ ನೌಕಾನೆಲೆಯ ಉದ್ಯೋಗಿಯಾಗಿದ್ದು, ಅವರನ್ನು ನೋಡಲೆಂದು ಬೊಮ್ಮ ನಾಯಕ ಕಾರವಾರಕ್ಕೆ ಬಂದಿದ್ದರು. ಮಗನನ್ನು ಭೇಟಿಯಾದ ಬಳಿಕ ಅವರು ಆಂಧ್ರಪ್ರದೇಶಕ್ಕೆ ತೆರಳಲು ರೈಲು ಹತ್ತಿದ್ದರು.
ದುರದೃಷ್ಟವಶಾತ್ ಅವರು ತಮ್ಮ ದಾರಿ ತಪ್ಪಿ, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸಿಲುಕಿಕೊಂಡರು. ಹಿಂತಿರುಗಲು ತಮ್ಮಲ್ಲಿದ್ದ ಹಣ ಹಾಗೂ ಇತರ ವಸ್ತುಗಳನ್ನು ಕಳೆದುಕೊಂಡು ಅತಂತ್ರರಾಗಿ ದಿಕ್ಕು ತೋಚದೆ ನಿಲ್ದಾಣದಲ್ಲಿ ಕುಳಿತಿದ್ದರು.

ಇದೇ ವೇಳೆ ನಿಲ್ದಾಣದಲ್ಲಿ ಬೊಮ್ಮ ಅವರನ್ನು ಗಮನಿಸಿದ ಹಿರಿಯ ಟಿಕೆಟ್ ಎಕ್ಸಾಮಿನರ್ ವಿಜಯಕುಮಾರ್ ಬಥುಲಾ, ಬೊಮ್ಮ ಅವರಿಗೆ ಸಹಾಯಹಸ್ತ ಚಾಚಿದ್ದಾರೆ. ಅವರಿಗೆ ಊಟ- ತಿಂಡಿ ನೀಡಿ, ಮೂರ್ನಾಲ್ಕು ದಿನಗಳ ಕಾಲ ಆಶ್ರಯ ಒದಗಿಸಿಕೊಟ್ಟಿದ್ದಾರೆ.
ಅಲ್ಲದೇ, ಬೊಮ್ಮ ನಾಯಕ ಅವರ ಮಗನನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ ಅಪ್ಪ- ಮಗನನ್ನು ಒಟ್ಟುಗೂಡಿಸಿದ್ದಾರೆ.











Click it and Unblock the Notifications