ಕಾರವಾರ ಕಡಲತೀರ ಉಳಿಸಲು ಮಾನವ ಸರಪಳಿ
ಕಾರವಾರ, ಜನವರಿ 12: ಸಾಗರಮಾಲಾ ಯೋಜನೆಯಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧ ಮುಂದುವರಿದಿದೆ. ಭಾನುವಾರ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಮೀನುಗಾರರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನಾಗರೀಕರು ಮಾನವ ಸರಪಳಿ ರಚಿಸುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದರು.
ಈಗಾಗಲೇ ಬಂದರು ವಿಸ್ತರಣೆ ಕಾಮಗಾರಿಯನ್ನು ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್ ಕಂಪನಿ ಕೈಗೆತ್ತಿಕೊಂಡಿದೆ. ಸ್ಥಳೀಯರ ತೀವ್ರ ವಿರೋಧದ ಕಾರಣದಿಂದ ಸದ್ಯಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಮತ್ತೆ ಕಾಮಗಾರಿ ಮುಂದುವರಿಯುವ ಸಾಧ್ಯತೆ ಇರುವುದರಿಂದ, ವಿಭಿನ್ನ ರೀತಿಯಲ್ಲಿ ಸ್ಥಳೀಯರು ವಿರೋಧ ಮಾಡಿದ್ದಾರೆ.

ಈಗಾಗಲೇ ಸೀಬರ್ಡ್ ನೌಕಾನೆಲೆ ಯೋಜನೆಗೆ 12 ಕ್ಕೂ ಹೆಚ್ಚು ಕಡಲತೀರವನ್ನು ಕಳೆದುಕೊಂಡಿದ್ದೇವೆ. ಈಗಿರುವ ಒಂದೇ ಒಂದು ತೀರವಾದ ಟ್ಯಾಗೋರ್ ತೀರವನ್ನು ಬಂದರು ವಿಸ್ತರಣೆ ನೆಪದಲ್ಲಿ ಕಳೆದುಕೊಂಡರೆ ಕಾರವಾರಿಗರಿಗೆ ಏನೂ ಉಳಿಯುವುದಿಲ್ಲ. ಅಲ್ಲದೇ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯ್ನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕಾರವಾರ ಕಡಲತೀರವನ್ನು ಉಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಕೀಲ ಬಿ.ಎಸ್.ಪೈ, ಮೀನುಗಾರ ಮುಖಂಡರಾದ ಕೆ.ಟಿ.ತಾಂಡೇಲ್, ವಿನಾಯಕ ಹರಿಕಂತ್ರ, ರಾಜು ತಾಂಡೇಲ, ಪ್ರಸಾದ್ ಕಾರವಾರಕರ್ ಇದ್ದರು.












Click it and Unblock the Notifications