ಕಲಾತ್ಮಕ ಸಹಿಯಿಂದ ಹೆಸರಾದ ಹೊನ್ನಾವರದ 'ಸಿಗ್ನೇಚರ್ ಶಾಂತಯ್ಯ'!
Recommended Video

ಕಾರವಾರ, ಆಗಸ್ಟ್.05:ಎಲ್ಲರೂ ಸಾಮಾನ್ಯವಾಗಿ ತಮ್ಮ ಮಾತೃ ಭಾಷೆಯಲ್ಲಿ ಅಥವಾ ಇಂಗ್ಲಿಷ್ ನಲ್ಲಿ ಅವರ ಪೂರ್ತಿ ಹೆಸರನ್ನು ಮೊಟಕುಗೊಳಿಸಿ, ಚುಟುಕಾಗಿ ಸಹಿಯನ್ನು ರೂಢಿಸಿಕೊಂಡಿರುತ್ತಾರೆ. ಅದೇ ಸಹಿಯನ್ನು ಅವರು ಎಲ್ಲಾ ಕಡೆ ಬಳಕೆ ಮಾಡುತ್ತಾರೆ. ಹಾಗೆಯೇ ಸಹಿ ಸುಲಭದ್ದಾದರೆ, ಅದನ್ನು ಸುಲಭದಲ್ಲಿಯೂ ನಕಲು ಮಾಡಲೂಬಹುದು.
ಆದರೆ, ಇಲ್ಲೊಬ್ಬರು ಅಧಿಕಾರಿ ಮಾಡುವ ಸಹಿಯನ್ನು ಕಂಡು ನೀವು ಹುಬ್ಬೇರಿಸಿದರೂ ಅದರಲ್ಲಿ ಅಚ್ಚರಿಯೇನಿಲ್ಲ!
ಬೆಂಗಳೂರಿನ ನೆಲಮಂಗಲ ಮೂಲದವರಾದ ಕೆ.ಎಸ್.ಶಾಂತಯ್ಯ ಅವರು ಹೊನ್ನಾವರದಲ್ಲಿ ಉಪನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಮಾಡಿದ ಒಂದು ಸಹಿ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಜಗಜ್ಜಾಹೀರಾಗಿ ಎಲ್ಲರಿಗೂ ಅವರ ಗುರುತು ಸಿಗುವಂತೆ ಮಾಡಿದೆ.

ಕಂಬಾಳು ಸೋಮಪುರ ಶಾಂತಯ್ಯ ಎನ್ನುವುದು ಅವರ ಪೂರ್ಣ ಹೆಸರು. ಇದನ್ನೇ ಅವರು ಸಹಿಯಲ್ಲಿ ಕೆ.ಎಸ್. ಶಾಂತಯ್ಯ ಎಂದು ಅಚ್ಚಕನ್ನಡದಲ್ಲಿ ಬರೆಯುತ್ತಾರೆ. ಆದರೆ, ಅವರು ಮಾಡುವ ಸಹಿಯನ್ನು ಒಮ್ಮೆ ಗಮನಿಸಿದರೆ ನೀವು ದಂಗಾಗುತ್ತೀರಿ.
ಅವರ ಸಹಿ ಹೇಗಿರುತ್ತೆ ಅಂತಂದ್ರೆ, ಮೇಲ್ಭಾಗದಲ್ಲಿ ಸ್ಪ್ರಿಂಗ್ ಸುತ್ತಿಕೊಂಡಿರುವ ಗೆರೆ ಕೇಂದ್ರ ಬಿಂದುವಾಗಿದೆ. ಇನ್ನೊಂದು ರಿತಿಯಲ್ಲಿ ಶಂಖದಂತೆ ಕಂಡುಬಂದರೆ, ಮತ್ತೊಂದು ಕಡೆ ಕಲಾವಿದನೋರ್ವ ಯಾವುದೋ ಒಂದು ಕಲಾಕೃತಿ ಬಿಡಿಸಿದ ಹಾಗೆ ಕಾಣಿಸುತ್ತದೆ.
ಕೆ.ಎಸ್ ಶಾಂತಯ್ಯ ಅವರ ಈ ಸಹಿ ಸಾಮಾನ್ಯದಲ್ಲ. ಇದನ್ನು ಯಾರೂ ನಕಲು ಮಾಡುವಂತೆಯೂ ಇಲ್ಲ. ಇದು ಒಂದೆರಡು ಸೆಕೆಂಡಿನಲ್ಲಿ ಮುಗಿಸುವಂತದ್ದೂ ಅಲ್ಲ. ಅವರು ಒಮ್ಮೆ ಸಹಿ ಮಾಡಲು ಪ್ರಾರಂಭಿಸಿದರೆ ಸುಮಾರು ಒಂದು ನಿಮಿಷ ಹಿಡಿಯುತ್ತದೆ.

ಶಾಂತಯ್ಯ ಈ ಸಹಿಯನ್ನು ರೂಢಿಸಿಕೊಂಡಿದ್ದು 1994ರಿಂದ. ಅದನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಈ ಹಿಂದೆ ಸಹಿಯನ್ನು ಮೆಚ್ಚಿದ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಜಿಲ್ಲಾ ನೋಂದಣಾಧಿಕಾರಿಗಳ ಮೂಲಕ ಮನೆಗೆ ಕರೆಸಿಕೊಂಡು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು ಎಂದು ಅವರು ಸಹಿಯ ಹಿಂದಿನ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದರು.
ಕಾಲೇಜು ಹುಡುಗರಂತೂ ಇವರ ಸಹಿ ನೋಡಿ, ಕುವೆಂಪು ಬರೆದಿರುವ 'ದೇವರು ಋಜು ಮಾಡಿದನು' ಪದ್ಯವೇ ನೆನಪಾಗುತ್ತದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇವರನ್ನು ಆರ್ ಬಿಐ ಗವರ್ನರ್ ಮಾಡಿದರೆ ಯಾರೂ ನಕಲಿ ನೋಟುಗಳನ್ನು ತಯಾರಿಸುವ ಗೋಜಿಗೇ ಹೋಗುವುದಿಲ್ಲ, ಅಷ್ಟು ಕಠಿಣವಾಗಿದೆ ಅವರ ಸಹಿ ಎನ್ನುತ್ತಿದ್ದಾರೆ.
ಇವರು ದಾಖಲೆ ಪತ್ರಕ್ಕೆ ಹಾಕಿದ ಸಹಿಯನ್ನು ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರಿಂದ ಶಾಂತಯ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ.












Click it and Unblock the Notifications