Get Updates
Get notified of breaking news, exclusive insights, and must-see stories!

ಹಳಿಯಾಳದಲ್ಲಿ ಬಾಲ್ಯದ ಶಾಲೆ ಕಂಡು ಭಾವುಕರಾದ ದೇಶಪಾಂಡೆ

ಹಳಿಯಾಳ, ಜನವರಿ 31: ಆರು ದಶಕಗಳ ಹಿಂದಿನ ಹಳೆಯ ಮಧುರ ನೆನಪುಗಳನ್ನು ನೆನೆದು ಇಲ್ಲಿನ ಶಾಸಕ ಹಾಗೂ ಮಾಜಿ ಸಚಿವರೂ ಆಗಿರುವ ಆರ್.ವಿ.ದೇಶಪಾಂಡೆ ಅರೆ ಕ್ಷಣ ಭಾವುಕರಾದರು. ಬಾಲ್ಯದಲ್ಲಿ ಕಲಿತ ಶಾಲೆಯನ್ನು ಕಂಡು ಸಂತಸಪಟ್ಟರು.

ಶಿಥಿಲಗೊಂಡು ಮುಚ್ಚಲಾಗಿದ್ದ ಪಟ್ಟಣದ ಸರ್ಕಾರಿ ಮರಾಠಿ ಮಾಧ್ಯಮದ ಶಾಲೆಯ ಕಟ್ಟಡವನ್ನು ಮರು ನವೀಕರಣಗೊಳಿಸಿ ಇತ್ತೀಚಿಗೆ ಲೋಕಾರ್ಪಣೆ ಮಾಡಿದ್ದ ಅವರು ತಾವು ಕಲಿತ ಶಾಲೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ, ಇದೇ ಸಮಯದಲ್ಲಿ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕಿದ್ದಾರೆ.

 ಐದನೇ ತರಗತಿವರೆಗೆ ಆ ಶಾಲೆಯಲ್ಲಿ ಓದಿದ್ದ ದೇಶಪಾಂಡೆ

ಐದನೇ ತರಗತಿವರೆಗೆ ಆ ಶಾಲೆಯಲ್ಲಿ ಓದಿದ್ದ ದೇಶಪಾಂಡೆ

ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿರುವ ಸರ್ಕಾರಿ ಮರಾಠಿ ಮಾಧ್ಯಮದ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆ 2005 ರಲ್ಲಿ ಬೀಗ ಹಾಕಲಾಗಿತ್ತು. 1932ರಲ್ಲಿ ಪ್ರಾರಂಭವಾಗಿದ್ದ ಇದೇ ಶಾಲೆಯಲ್ಲಿ 1952 ರಿಂದ 1957ರವರೆಗೆ ದೇಶಪಾಂಡೆ ಅವರು ಐದನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದರು. ಒಂದು ಕಾಲದಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದ ಈ ಶಾಲೆ ಉತ್ತಮ ಶಾಲೆ ಎನ್ನುವ ಹೆಸರನ್ನೂ ಗಳಿಸಿಕೊಂಡಿತ್ತು. ಆದರೆ, ಕ್ರಮೇಣ ಮರಾಠಿ ಮಾಧ್ಯಮಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದ್ದರಿಂದ ಶಾಲೆಯನ್ನು ಮುಚ್ಚಿ, ಕೇವಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯಗಳಿಗೆ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

 ಶಾಲಾ ಕಟ್ಟಡ ನವೀಕರಣಕ್ಕೆ ಮುಂದಾಗಿದ್ದ ಆರ್ ವಿಡಿ

ಶಾಲಾ ಕಟ್ಟಡ ನವೀಕರಣಕ್ಕೆ ಮುಂದಾಗಿದ್ದ ಆರ್ ವಿಡಿ

ಶಿಥಿಲಗೊಂಡು ಮುಚ್ಚಲಾದ ಈ ಶಾಲೆಯ ಕುರಿತು ಪತ್ರಿಕೆಗಳಲ್ಲಿ ವರದಿಗಳು ಬಂದಿದ್ದವು. ಬಂದ ವರದಿಯನ್ನು ಓದಿದ ದೇಶಪಾಂಡೆಯವರು, ತಾವು ಓದಿದ ಶಾಲೆಯ ದುಃಸ್ಥಿತಿ ಕಂಡು ಬೇಸರಗೊಂಡಿದ್ದಲ್ಲದೇ ಅದನ್ನು ನವೀಕರಣ ಮಾಡಲು ಮುಂದಾಗಿದ್ದರು. ಅದರಂತೆ ಅವರ ಮನವಿ ಮೇರೆಗೆ ಆದಿತ್ಯ ಬಿರ್ಲಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸಿಎಸ್ ‌ಆರ್ ಯೋಜನೆಯಡಿಯಲ್ಲಿ ಕಟ್ಟಡದ ನವೀಕರಣ ಕಾರ್ಯವನ್ನು ಮಾಡಿದೆ. ಅದರಂತೆ ನವೀಕರಣಗೊಂಡ ಕಟ್ಟಡವನ್ನು ಜನವರಿ 27ರಂದು ಲೋಕಾರ್ಪಣೆ ಮಾಡಿ, ಶಾಲೆಯ ತರಗತಿಯೊಳಗೆ ಓಡಾಡುವ ಮೂಲಕ ಆರ್.ವಿ.ದೇಶಪಾಂಡೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

 5001 ರೂ ದೇಣಿಗೆ ನೀಡಿದ್ದ ದೇಶಪಾಂಡೆ ಪೋಷಕರು

5001 ರೂ ದೇಣಿಗೆ ನೀಡಿದ್ದ ದೇಶಪಾಂಡೆ ಪೋಷಕರು

ಈ ಹಿಂದೆ ಹಳೆ ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ 1974ರಲ್ಲಿ ದೇಶಪಾಂಡೆಯವರ ಪಾಲಕರು ಕಟ್ಟಡ ನಿರ್ಮಾಣಕ್ಕೆಂದು ಇವರ ಅಜ್ಜ- ಅಜ್ಜಿಯ ಹೆಸರಿನಲ್ಲಿ 5,001 ರೂ.ಗಳ ದೇಣಿಗೆ ನೀಡಿದ್ದು, ಅದರ ನಾಮಫಲಕ ಇಂದಿಗೂ ಕಟ್ಟಡದ ಗೋಡೆಯ ಮೇಲೆ ಇರುವುದನ್ನು ಕಂಡು ಬೆರಗಾದರು. ಸಮಾಜ ಸೇವೆಯ ಮೊದಲ ಪಾಠವನ್ನು ತಂದೆ ತಾಯಿ ಈ ಮೂಲಕ ಕಲಿಸಿಕೊಟ್ಟಿದ್ದರು ಎಂದರು ದೇಶಪಾಂಡೆ. ಸದ್ಯ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮರಾಠಿ ಶಾಲೆ ನಡೆಯುತ್ತಿಲ್ಲವಾದ್ದರಿಂದ ಕಟ್ಟಡವನ್ನು ಶಿಕ್ಷಕರ ತರಬೇತಿ ಹಾಗೂ ಕಾರ್ಯಾಗಾರಕ್ಕೆ ಬಳಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೇಶಪಾಂಡೆ ಸೂಚನೆ ನೀಡಿದ್ದಾರೆ.

 ಬಾಲ್ಯದ ನೆನಪಿಗೆ ಜಾರಿದ ದೇಶಪಾಂಡೆ

ಬಾಲ್ಯದ ನೆನಪಿಗೆ ಜಾರಿದ ದೇಶಪಾಂಡೆ

ತಾವು ಕಲಿತಿದ್ದ ಶಾಲಾ ಕಟ್ಟಡ ಮರುನವೀಕರಣಗೊಂಡಿದ್ದನ್ನು ಕಣ್ತುಂಬಿಕೊಂಡ ಆರ್.ವಿ.ದೇಶಪಾಂಡೆ, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ಇದೊಂದು ಬಹು ಅಪರೂಪದ ಗಳಿಗೆ. ಆರು ದಶಕಗಳ ಹಿಂದಿನ ಮಧುರ ನೆನಪುಗಳು. ಸ್ನೇಹಿತರ ಒಡಗೂಡಿ ಆಡಿದ ಆಟ, ಶಿಕ್ಷಕರ ಪಾಠ ಎಲ್ಲವೂ ಒಮ್ಮೆಲೇ ನೆನಪಿಗೆ ಬಂತು, ಒಂದು ಕ್ಷಣ ನನ್ನ ಕಣ್ಣಾಲಿಗಳು ಒದ್ದೆಯಾದವು, ನನ್ನನ್ನು ಬಾಲ್ಯಕ್ಕೆ ಮತ್ತೆ ಕರೆದೊಯ್ದ ಅನುಭವವಾಯಿತು. ನನ್ನ ಶೈಕ್ಷಣಿಕ ಜೀವನದ ಮೊದಲ ಹೆಜ್ಜೆ, ಮೊದಲ ಅಕ್ಷರ, ಶಿಕ್ಷಕರ ಮೊದಲ ಏಟಿಗೆ ಮೂಕ ಸಾಕ್ಷಿಯಾಗಿದೆ ಇದೇ ಕಟ್ಟಡ' ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+