Karwar BJP: ಕಾರವಾರ ಬಿಜೆಪಿಯಲ್ಲಿ ಬಂಡಾಯದ ಬಿಸಿ: ರೂಪಾಲಿ ನಾಯ್ಕ್ ವಿರುದ್ಧ ಆರ್ಎಸ್ಎಸ್ ಮುಖಂಡ ಕಣಕ್ಕೆ
ಕಾರವಾರ, ಏಪ್ರಿಲ್ 22: ದಿನ ಕಳೆದಂತೆ ಚುನಾವಣಾ ಕಣ ರಂಗೇರತೋಡಗಿದೆ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ನಲ್ಲಿ ಕಾಣಿಸಿಕೊಂಡಿದ್ದ ಬಂಡಾಯದ ಬಿಸಿ ಇದೀಗ ಬಿಜೆಪಿಗೂ ತಟ್ಟಿದ್ದು, ಸುಲಭದ ಗೆಲುವಿನ ಲೆಕ್ಕಾಚಾರದಲ್ಲಿದ್ದ ಶಾಸಕಿ ರೂಪಾಲಿ ನಾಯ್ಕಗೆ ತಮ್ಮದೆ ಪಕ್ಷದವರು ಬಂಡಾಯ ಸಾರಿರುವುದು ಸಂಕಷ್ಟ ಎದುರಿಸುವಂತಾಗಿದೆ.
ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರೂಪಾಲಿ ನಾಯ್ಕ, ಕಾಂಗ್ರೆಸ್ನಿಂದ ಮಾಜಿ ಶಾಸಕ ಸತೀಶ್ ಸೈಲ್, ಜೆಡಿಎಸ್ ಅಭ್ಯರ್ಥಿಯಾಗಿ ಚೈತ್ರಾ ಕೋಠಾರಕರ್ ಪ್ರಮುಖರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದಲ್ಲದೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಗಂಗಾಧರ ಭಟ್ ಹಾಗೂ ಕುಮಾರ್ ನಾಯ್ಕ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದು ಇದೀಗ ಕ್ಷೇತ್ರದ ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿಯಲ್ಲಿ ಮಾಜಿ ಶಾಸಕ ಗಂಗಾಧರ ಭಟ್ ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರೂ ಬಂಡಾಯದ ನಿರೀಕ್ಷೆಗಳಿರಲಿಲ್ಲ. ಆದರೆ ಇದೀಗ ಬಿಜೆಪಿ ಬಂಡಾಯದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು ಯಾವುದೇ ಕಾರಣಕ್ಕೂ ಹಿಂದೆ ಪಡೆಯುವ ಪ್ರಶ್ನೇಯೇ ಇಲ್ಲ ಎಂದಿರುವುದು ಅವರ ನಡೆ ಕುತೂಹಲ ಕೆರಳಿಸುವಂತೆ ಮಾಡಿದೆ.
2004ರಲ್ಲಿ ಕಾರವಾರ ಕಾಂಗ್ರೆಸ್ ಕ್ಷೇತ್ರವಾಗಿದ್ದಾಗ ಬಿಜೆಪಿಯನ್ನು ಕಟ್ಟಿ ಬೆಳಸಿ ಮೊದಲ ಬಾರಿ ಬಿಜೆಪಿ ಗೆಲ್ಲುವಂತೆ ಮಾಡಿದ್ದೇನೆ. ತಾನು ಬಿಜೆಪಿ ಪಕ್ಷದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯಾಗಿದ್ದೇನೆ. ಆದರೆ ಕ್ಷೇತ್ರದಲ್ಲಿ ನಮ್ಮನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಗಂಗಾಧರ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ 15 ವರ್ಷದಿಂದ ಸ್ಥಾನಮಾನಕ್ಕಾಗಿ ಕಾದರೂ ಕಡೆಗಣನೆ ಮಾಡುತ್ತಲೆ ಬರಲಾಗುತ್ತಿದೆ. ಆದರೆ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಕಳೆದ ಎರಡು ತಿಂಗಳ ಹಿಂದೆ ಪಕ್ಷದ ಹಿರಿಯರು ಕರೆ ಮಾಡಿ ಶಾಸಕರಿಗೆ ವಿರೋಧಿ ಅಲೆ ಇರುವುದರಿಂದ ನೀವು ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಿದ್ದರು. ಆದರೆ ಇದೀಗ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದರಿಂದ ಸಮುದಾಯದ ಜನರ ಹಾಗೂ ಬಿಜೆಪಿ ಕಾರ್ಯಕರ್ತರ ಒತ್ತಾಸೆಯಂತೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಗಂಗಾಧರ್ ಭಟ್ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಬೆಂಬಲವಾಗಿ ನಿಂತಿದ್ದರಿಂದಲೇ ಈ ತೀರ್ಮಾನ ಕೈಗೊಂಡಿದ್ದೇನೆ. ಇಷ್ಟು ವರ್ಷ ಕಡೆಗಣೆಸಿದ್ದರಿಂದ ಕೊನೆಯ ಬಾರಿಗೆ ಸ್ಪರ್ಧೆ ಬಯಸಿದ ತಮಗೆ ಕೊನೆಗಳಿಗೆಯಲ್ಲಿ ಟಿಕೆಟ್ ತಪ್ಪಿಸಲಾಗಿದೆ. ತಮಗೆ ಕ್ಷೇತ್ರದಲ್ಲಿ ಇಂದಿಗೂ ಬೆಂಬಲ ಇದ್ದು ಗೆಲುವು ಸಾಧಿಸುವುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕುಮಾರ್ ನಾಯ್ಕ ಕೂಡ ತಾವು ಬಿಜೆಪಿ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಂಡಿಕೊಂಡಿದ್ದು, 500 ಕ್ಕೂ ಹೆಚ್ಚು ಬೆಂಬಲಿಗರೊಡನೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ತಾವು ಬಿಜೆಪಿಯ ಕಟ್ಟಾ ಅಭಿಮಾನಿಯಾಗಿದ್ದೇನೆ. ಆದರೆ ನಮ್ಮದೇ ಸರ್ಕಾರ ಇದ್ದು ಸ್ಥಳೀಯ ಶಾಸಕರು ನಮ್ಮವರೇ ಇದ್ದರೂ ಕೂಡ ನಮ್ಮ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ. ಇದೇ ಕಾರಣಕ್ಕೆ ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದರಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇಬ್ಬರು ಅಭ್ಯರ್ಥಿಗಳ ಬಂಡಾಯ ಇದೀಗ ಬಿಜೆಪಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಆರ್.ಎಸ್ಎಸ್ ಹಾಗೂ ಬಿಜೆಪಿ ಹಿರಿಯ ಮುಖಂಡರೂ ಆಗಿರುವ ಗಂಗಾಧರ್ ಭಟ್ ಬಿಜೆಪಿ ಮತವನ್ನೇ ಪಡೆಯುವುದರಿಂದ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಅಲ್ಲದೆ ಕುಮಾರ್ ನಾಯ್ಕ ಕೂಡ ಒಂದಿಷ್ಟು ಮತಗಳನ್ನು ಪಡೆಯುವುದರಿಂದ ಬಿಜೆಪಿ ಇದೀಗ ಬಂಡಾಯದ ಸುಳಿಯಲ್ಲಿ ಸಿಲುಕಿದಂತಾಗಿದೆ. ಆದರೆ ನಾಮಪತ್ರ ವಾಪಸ್ಸ್ ಪಡೆಯಲು ಎರಡು ದಿನ ಕಾಲಾವಕಾಶಗಳಿದ್ದು ಅಷ್ಟರೊಳಗೆ ಬಂಡಾಯ ಶಮನವೋ ಸ್ಪರ್ಧೆಯೋ ಎಂಬುದು ಕಾದುನೋಡಬೇಕಿದೆ.












Click it and Unblock the Notifications