ಭಟ್ಕಳದಲ್ಲಿ ತೌಕ್ತೆ ಅಬ್ಬರ; ವಿದ್ಯುತ್ ಕಂಬ ನೆಲಕ್ಕೆ, ರಸ್ತೆ ಸಮುದ್ರಪಾಲು
ಕಾರವಾರ, ಮೇ 16; ತೌಕ್ತೆ ಚಂಡಮಾರುತದಿಂದ ಹಲವೆಡೆ ಹಲವು ಪರಿಣಾಮಗಳು ಉಂಟಾಗಿವೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಂದರ್ ಮಾವಿನಕುರ್ವಾ ಕಡಲತೀರದ ಜನರ ಕಷ್ಟ ಹೇಳತೀರದಾಗಿದೆ.
ಭಟ್ಕಳ ಬಂದರ್ ಮಾವಿನಕುರ್ವೆಯ ಕಡಲತಡಿಯಲ್ಲಿ 100ಕ್ಕೂ ಅಧಿಕ ಕುಟುಂಬ ವಾಸ ಮಾಡುತ್ತಿವೆ. ತೌಕ್ತೆ ಚಂಡಮಾರುತದ ಪರಿಣಾಮವು ಇಲ್ಲಿನ ನಿವಾಸಿಗಳನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ. ಆಗಾಗ ಎದ್ದೆದ್ದು ಬರುತ್ತಿರುವ ರೌದ್ರ ತೆರೆಗಳು ಶನಿವಾರ ಮಧ್ಯಾಹ್ನದಿಂದ ಮನೆಗಳಿಗೆ ಅಪ್ಪಳಿಸುತ್ತಿದ್ದು, ಅನೇಕ ಕುಟುಂಬಗಳು ಎಚ್ಚರವಿದ್ದೆ ರಾತ್ರಿ ಕಳೆದಿವೆ.
ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರಿದ್ದ ಕೆಲವು ಕುಟುಂಬಗಳು ಬೇರೆ ಕಡೆಗೆ ತೆರಳಿ ಆಶ್ರಯ ಪಡೆದಿದ್ದರೂ, ಗಂಡಸರು ಮನೆಗಳ ಸಾಮಾನು- ಸರಂಜಾಮುಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತು ಭಯದಲ್ಲೇ ಕಡಲಂಚಿನ ಮನೆಗಳಲ್ಲಿ ದಿನ ಕಳೆಯುತ್ತಿದ್ದಾರೆ.
ಈ ಭಾಗದಲ್ಲಿ ಹೆಚ್ಚಿನ ಕುಟುಂಬಗಳು ಮೀನುಗಾರರದ್ದಾಗಿದ್ದು, ಇತ್ತ ಮನೆಗಳ ಸಾಮಾನು-ಸರಂಜಾಮುಗಳ ರಕ್ಷಣೆಯ ಜೊತೆಗೆ ದಡದಲ್ಲಿ ಹಾಗೂ ದಡದ ಮೇಲೆ ಇಡಲಾಗಿರುವ ದೋಣಿ, ಬಲೆ ಸೇರಿದಂತೆ ಮೀನುಗಾರಿಕಾ ಉಪಕರಣಗಳನ್ನೂ ಸಂರಕ್ಷಿಸಿಕೊಳ್ಳುವ ಸವಾಲು ಎದುರಾಗಿದೆ.

ರಸ್ತೆ ಕೊಚ್ಚಿ ಹೋಗಿದೆ
ಇನ್ನು ಬಂದರ್-ತಲಗೋಡ್ ಕರಿಕಲ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲೆಗಳು ಬಡಿದ ರಭಸಕ್ಕೆ ರಸ್ತೆಯ ಮೂವತ್ತು ಮೀಟರ್ ನಷ್ಟು ಕಾಂಕ್ರೀಟ್ ಸಮುದ್ರಪಾಲಾಗಿದ್ದು, ಅಲೆಗಳ ರೌದ್ರ ನರ್ತನ ಹೀಗೆ ಮುಂದುವರಿದರೆ ರಸ್ತೆ ಸಂಪೂರ್ಣ ನೀರಿಗೆ ಆಪೋಶನ ಆಗುವ ಸಾಧ್ಯತೆಯೂ ಇದೆ. ಈಗಾಗಲೇ ಕೆಲವು ಭಾಗಗಳಲ್ಲಿ ರಸ್ತೆಯ ಕೆಳಪದರು ಕೊಚ್ಚಿ ಹೋಗಿದ್ದು, ಕೇವಲ ಕಾಂಕ್ರೀಟ್ನ ಮೇಲ್ಪದರು ಮಾತ್ರ ಉಳಿದುಕೊಂಡಿದೆ. ಹೀಗಾಗಿ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಸ್ಥಳೀಯರು ಅಡ್ಡಲಾಗಿ ಕಲ್ಲು, ದಿಮ್ಮಿಗಳನ್ನು ಇಟ್ಟಿದ್ದಾರೆ.

ವಿದ್ಯುತ್ ಕಂಬಗಳು ನೆಲಕ್ಕುರುಳಿವೆ
ಇನ್ನು ಇದೇ ರಸ್ತೆಯ ಕಿಲೋ ಮೀಟರ್ ನುದ್ದಕ್ಕೂ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಶನಿವಾರದಿಂದ ವಿದ್ಯುತ್ ನಿಲುಗಡೆಗೊಂಡಿದ್ದು, ಈವರೆಗೆ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಹೆಸ್ಕಾಂನ ಲೈನ್ ಮನ್ ಗಳು ಮಳೆಯಲ್ಲೇ ವಿದ್ಯುತ್ ಲೈನ್ ಗಳ ದುರಸ್ತಿ ಕಾರ್ಯಕ್ಕೆ ಇಳಿದ್ದು, ಕಂಬಗಳು ಮುರಿದು ಬಿದ್ದಿರುವುದರಿಂದ ಹೆಸ್ಕಾಂಗೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಜೊತೆಗೆ ಈ ರಸ್ತೆಯಲ್ಲಿ ಓಡಾಟ ಸುರಕ್ಷಿತವಲ್ಲದ ಕಾರಣ ಕಂಬಗಳನ್ನು ಮರು ನಿರ್ಮಿಸಲಾಗಲಿ, ಲೈನ್ ಗಳನ್ನು ದುರಸ್ತಿಪಡಿಸಲಾಗಲಿ ಈ ಭಾಗದಲ್ಲಿ ಸದ್ಯ ಕಷ್ಟದ ಕೆಲಸವಾಗಿದೆ.

ಅಲೆ ತಡೆಗೋಡೆ ನಿರ್ಮಿಸಲು ಆಗ್ರಹ
ಇನ್ನು ಈ ಭಾಗದಲ್ಲಿ ಹಲವು ವರ್ಷಗಳಿಂದ ಅಲೆ ತಡೆಗೋಡೆ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದರೂ ಸಮರ್ಪಕವಾಗಿ ಈ ಯೋಜನೆಯನ್ನು ಇಲ್ಲಿ ಅನುಷ್ಠಾನ ಮಾಡುತ್ತಿಲ್ಲ. ನಿನ್ನೆ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಸ್ಥಳೀಯ ಕೆಕ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಆದರೆ ಈ ಭಾಗದ ಸಮಸ್ಯೆ ಯಾವಾಗ ಪರಿಹಾರ ಆಗುತ್ತದೆನ್ನುವುದೇ ತಿಳಿಯುತ್ತಿಲ್ಲ ಎಂದು ಅಸಮಾಧಾನ ತೋರ್ಪಡಿಸುತ್ತಾರೆ ಈ ಭಾಗದ ಸ್ಥಳೀಯ ನಿವಾಸಿಗಳು.

ರಕ್ಕಸ ಗಾತ್ರದ ಅಲೆಗಳು
ತೌಕ್ತೆ ಚಂಡಮಾರುತದ ಅಬ್ಬರದಿಂದ ಹೆಬಳೆ ಹೆರ್ತಾರ್ ಭಾಗದಲ್ಲೂ ರಕ್ಕಸ ಗಾತ್ರದ ಅಲೆಗಳು ತಡೆಗೋಡೆಗೆ ಅಪ್ಪಳಿಸುತ್ತಿವೆ. ಈ ಭಾಗದ ಕೆಲ ಕಡೆ ತಡೆಗೋಡೆ ದಾಟಿಯೂ ರಸ್ತೆಗಳ ಮೇಲೆ, ಮನೆಗಳಿಗೆ ಅಲೆಗಳು ಬಡಿದಿವೆ. ಚಂಡಮಾರುತದ ಅಬ್ಬರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.












Click it and Unblock the Notifications